ಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ : 14 ಶಾಸಕರು ಅನರ್ಹ
ಞಬೆಂಗಳೂರು, ಜುಲೈ 28 : ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ನ ಎಲ್ಲಾ ರೆಬಲ್ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದರು.
ಭಾನುವಾರ ಬೆಳಗ್ಗೆ 11.30ಕ್ಕೆ ವಿಕಾಸಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. ಗುರುವಾರ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ಮತ್ತು ಆರ್. ಶಂಕರ್ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಅರ್ಜಿ ಸ್ಪೀಕರ್ ಮುಂದಿತ್ತು. ಸೋಮವಾರ ಬಿ. ಎಸ್. ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಸ್ಪೀಕರ್ ಎಲ್ಲಾ ಅರ್ಜಿಗಳನ್ನು ಇಂದು ಇತ್ಯರ್ಥಗೊಳಿಸಿದರು.
ಸ್ಪೀಕರ್ ಕಟ್ಟಿ ಹಾಕಲು ಅವಿಶ್ವಾಸ ನಿರ್ಣಯದ ನೋಟಿಸ್?
ಪತ್ರಿಗೋಷ್ಠಿಯಲ್ಲಿ ಹೇಳಿದ್ದೇನು?
* 10/7/2019ರಂದು ಅನರ್ಹತೆಯ ಅರ್ಜಿಯನ್ನು ಅರ್ಜಿದಾರರು ಸಲ್ಲಿಸಿದ್ದಾರೆ. ರಾಜ್ಯದ ರಾಜಕೀಯ ಬದಲಾವಣೆಗಳನ್ನು ಅನುಸರಿಸಿ ಅರ್ಜಿದಾರರು ಮತ್ತೊಂದು ಪತ್ರವನ್ನು ಸಲ್ಲಿಸಿದ್ದಾರೆ. ಆ ಆರ್ಜಯ ಅನ್ವಯ ಮೂರು ದಿನದೊಳಗೆ ಉತ್ತರಿಸುವಂತೆ ಎಲ್ಲರಿಗೂ ನೋಟಿಸ್ ನೀಡಿದೆ. ನಾಲ್ಕು ವಾರದ ಸಮಯವನ್ನು ಪ್ರತಿವಾದಿಗಳು ಕೇಳಿದ್ದರು. ಅದಕ್ಕೆ ಒಪ್ಪಿಗೆ ನೀಡಿಲ್ಲ.
* 12/7/2019ರಂದು ಕುಮಾರಸ್ವಾಮಿ ಅವರು 3 ಶಾಸಕರ ಅನರ್ಹತೆ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅವರಿಗೂ ನೋಟಿಸ್ ನೀಡಲಾಗಿತ್ತು. ಅವರ ವಕೀಲರು ಹಾಜರಾಗಿ 4 ವಾರಗಳ ಕಾಲಾವಕಾಶ ಕೇಳಿದ್ದರು. ಆದರೆ, ಅದಕ್ಕೆ ಒಪ್ಪಿಗೆ ನೀಡಿಲ್ಲ.
* ಶ್ರೀಮಂತ ಪಾಟೀಲ್ (ಕಾಗವಾಡ), ಆನಂದ್ ಸಿಂಗ್ (ವಿಜಯನಗರ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ) ಎಸ್. ಟಿ. ಸೋಮಶೇಖರ್ (ಯಶವಂತಪುರ), ಬಿ. ಸಿ. ಪಾಟೀಲ್ (ಹಿರೇಕೆರೂರು), ಬೈರತಿ ಬಸವರಾಜ (ಕೆ.ಆರ್.ಪುರ), ರೋಷನ್ ಬೇಗ್ (ಶಿವಾಜಿನಗರ), ಮುನಿರತ್ನ (ರಾಜರಾಜೇಶ್ವರಿ ನಗರ), ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಎಂ. ಟಿ. ಬಿ. ನಾಗರಾಜ್ (ಹೊಸಕೋಟೆ) ಅವರನ್ನು 28/7/2019ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಲಾಗಿದೆ.
* ಜೆಡಿಎಸ್ ಶಾಸಕರಾದ ಎಚ್. ವಿಶ್ವನಾಥ್ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಕೆ.ಆರ್. ನಾರಾಯಣ ಗೌಡ (ಕೆ.ಆರ್.ಪೇಟೆ) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಲಾಗಿದೆ.
* ಜುಲೈ 26ರಂದು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿ ಎಲ್ಲಾ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ. ಜುಲೈ 23ರಂದು ಕುಮಾರಸ್ವಾಮಿ ಅವರು ವಿಶ್ವಾಸಮತದಲ್ಲಿ ಸೋಲು ಅನುಭವಿಸಿದ್ದರು.
* ಯಡಿಯೂರಪ್ಪ ಅವರು ನನಗೆ ಸಂಪರ್ಕ ಮಾಡಿ ವಿಶ್ವಾಸಮತಯಾಚನೆ ಮಾಡಲು ಮನವಿ ಮಾಡಿದ್ದಾರೆ. ಧನವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಸದನ ಕರೆಯಬೇಕು ಎಂದು ಹೇಳಿದ್ದಾರೆ.
* ಸಭಾಧ್ಯಕ್ಷನಾಗಿ ನಮ್ಮ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಎಲ್ಲಾ ಸದಸ್ಯರಿಗೆ ಸೋಮವಾರ ಬೆಳಗ್ಗೆ 11ಗಂಟೆಗೆ ಸದನಕ್ಕೆ ಬರಬೇಕು ಎಂದು ಸೂಚನಾ ಪತ್ರವನ್ನು ಕಳಿಸಿದ್ದೇವೆ. ವಿಶ್ವಾಸಮತ, ಧನ ವಿನಿಯೋಗ ವಿಧೇಯಕ ಮಸೂದೆ ಇದೆ ಎಂದು ಕಾರ್ಯ ಸೂಚಿಯನ್ನು ತಿಳಿಸಿದ್ದೇವೆ.
* ಶನಿವಾರ, ಭಾನುವಾರ 2 ದಿನ ಮಾತ್ರ ಇದ್ದ ಕಾರಣ ನಮ್ಮ ಕಚೇರಿ ಎರಡೂ ದಿನವೂ ಕಾರ್ಯ ನಿರ್ವಹಣೆ ಮಾಡುತ್ತಿದೆ.
* ನನ್ನ ಮುಂದೆ ಇರುವ ರಾಜೀನಾಮೆ, ಅನರ್ಹತೆ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕಾದ ಅನಿವಾರ್ಯತೆ ಬಂದಿದೆ. ಸೋಮವಾರ ಅಧಿವೇಶನ ಇರುವ ಕಾರಣ ಇಂದು ಇತ್ಯರ್ಥ ಮಾಡಬೇಕು.
* ಇಂದು ನನಗೆ ದುಃಖಕರ ದಿನ, ನನ್ನ ಸಾರ್ವಜನಿಕ ಬದುಕಿಗೆ ಪರಿಣಾಮಕಾರಿ ಸಲಹೆ ನೀಡಿ, ಮಾರ್ಗದರ್ಶನ ಕೊಟ್ಟ ಜೈಪಾಲ್ ರೆಡ್ಡಿ ಅವರು ನಿಧನರಾಗಿದ್ದಾರೆ. ವೈಯಕ್ತಿಕವಾಗಿ ಹಿರಿಯಣ್ಣನಂತೆ ನನಗೆ ಆಪ್ತರಾಗಿದ್ದರು. ಅತ್ಯಂತ ಪ್ರಾಮಾಣಿಕ ರಾಜಕಾರಣಿ.
* ಜೈಪಾಲ್ ರೆಡ್ಡಿ ಅವರನ್ನು ನೆನಪು ಮಾಡಿಕೊಂಡು ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್