ವಿಧಾನಸಭೆಯ ಮೊಗಸಾಲೆಗೂ ಪತ್ರಕರ್ತರು ಕಾಲಿಡುವಂತಿಲ್ಲ: ಸ್ಪೀಕರ್ ನಡೆಗೆ ಆಕ್ರೋಶ
ಕರ್ನಾಟಕ ಮಾರ್ಚ್ 09: ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ನೇರ ಪ್ರಸಾರ ಮತ್ತು ಸದನದಲ್ಲಿ ಮಾಧ್ಯಮಗಳಿಗೆ ಚಿತ್ರ ತೆಗೆಯುವುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಷೇಧ ಹೇರಿದ್ದು ಗೊತ್ತಿರುವ ವಿಚಾರವೇ.
ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆಯ ಮೊಗಸಾಲೆಗೂ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಿದ್ದಾರೆ.
ಸದನದಲ್ಲಿ ಮಾಧ್ಯಮ ನಿರ್ಬಂಧ: ಕರಗದ ಕಾಗೇರಿ ಮನ, ನಾಡಿನ ನಾಡಿ ಚಂದನ!
ಸ್ಪೀಕರ್ ರವರ ಈ ನಡೆಗೆ ಸದನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ವಿಧಾನಸಭೆ ಮೊಗಸಾಲೆ ಪ್ರವೇಶಕ್ಕೆ ಮಾಧ್ಯಮಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂಪಡೆದರು.
ಅಸಲಿಗೆ, ಇಂದು ವಿಧಾನಮಂಡಲ ಅಧಿವೇಶನದಲ್ಲಿ ಮಾಧ್ಯಮಗಳ ನಿರ್ಬಂಧ ಕುರಿತು ಏನೇನಾಯ್ತು ಎಂಬುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ, ಓದಿರಿ...
60 ವರ್ಷದ ಸಂಪ್ರದಾಯದಕ್ಕೆ ತಿಲಾಂಜಲಿ ಹಾಡಿದ್ದ ಸ್ಪೀಕರ್!
ಇಂದು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ, ಆಡಳಿತ ಮತ್ತು ವಿಪಕ್ಷಗಳ ಮೊಗಸಾಲೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ಹೇರಿದರು. ಆ ಮೂಲಕ 60 ವರ್ಷದ ಸಂಪ್ರದಾಯಕ್ಕೆ ಸ್ಪೀಕರ್ ತಿಲಾಂಜಲಿ ಹಾಡಿದರು. ಸ್ಪೀಕರ್ ರವರ ಈ ನಡೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು.
ಮೌಖಿಕ ಆದೇಶ ನೀಡಿದ್ದ ಸ್ಪೀಕರ್
''ವಿಧಾನಸಭೆ ಮೊಗಸಾಲೆಗೆ ಪತ್ರಕರ್ತರು ಕಾಲಿಡುವಂತಿಲ್ಲ'' ಎಂದು ಸ್ಪೀಕರ್ ಮೌಖಿಕ ಆದೇಶ ಹೊರಡಿಸಿದರು. ಆಡಳಿತ ಮತ್ತು ವಿಪಕ್ಷಗಳ ಮೊಗಸಾಲೆಗಳಲ್ಲಿ ಪತ್ರಕರ್ತರನ್ನು ಹೊರಗೆ ಕಳಿಸಲು ಮಾರ್ಷಲ್ ಗಳಿಗೆ ಸ್ಪೀಕರ್ ಸೂಚಿಸಿದರು. ಕ್ಯಾಂಟೀನ್ ನಲ್ಲಿ ತಿಂಡಿ ಮತ್ತು ಊಟ ಬೇಗ ಮುಗಿಸಿ ಹೊರಡಲು ಪತ್ರಕರ್ತರಿಗೆ ಸ್ಪೀಕರ್ ಸೂಚನೆ ನೀಡಿದರು. ಈ ವೇಳೆ ಕಲಾಪದಲ್ಲಿ ಪತ್ರಿಕಾರಂಗವನ್ನು ದೂರವಿಟ್ಟು ಸ್ಪೀಕರ್ ಏನು ಸಾಧನೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಅಸಮಾಧಾನಗೊಂಡರು.
ಖಾಸಗಿ ಚಾನಲ್ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!
ಯು.ಟಿ.ಖಾದರ್ ಆಕ್ರೋಶ
''ನಾಲ್ಕು ಅಂಗಗಳಲ್ಲಿ ಪತ್ರಿಕಾ ರಂಗ ಕೂಡ ಒಂದು. ಹಂತ ಹಂತವಾಗಿ ಮಾಧ್ಯಮಗಳನ್ನು ದೂರು ಇಡಲಾಗುತ್ತಿದೆ. ಮೊದಲು ಅಧಿವೇಶನಕ್ಕೆ ಕ್ಯಾಮರಾಗೆ ಬ್ರೇಕ್ ಹಾಕಿದ್ದರು. ಬಳಿಕ ಶಾಸಕರ ಭವನಕ್ಕೆ ಬ್ರೇಕ್ ಹಾಕಿದ್ದರು. ಈಗ ವಿಧಾನಸಭೆಯ ಮೊಗಸಾಲೆಗೆ ಬ್ರೇಕ್ ಹಾಕಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಮಾಧ್ಯಮಗಳನ್ನು ದೂರ ಇಟ್ಟು ಸರ್ಕಾರ ರಚನೆ ಮಾಡಲು ಸಾಧ್ಯ ಇಲ್ಲ. ವಿಧಾನಸಭೆಯ ಮೊಗಸಾಲೆಯಲ್ಲಿ ನಾವು ಸಾಕಷ್ಟು ವಿಚಾರಗಳನ್ನ ಪತ್ರಕರ್ತರ ಜೊತೆ ಚರ್ಚೆ ಮಾಡುತ್ತೇವೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತೇವೆ. ಈಗ ಅಲ್ಲಿಗೆ ಪತ್ರಕರ್ತರಿಗೆ ಪ್ರವೇಶ ಇಲ್ಲ ಅಂದ್ರೆ ಹೇಗೆ.?'' ಎನ್ನುತ್ತ ತಮ್ಮ ಆಕ್ರೋಶವನ್ನು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೊರಹಾಕಿದರು.
ನಿರ್ಬಂಧ ತೆರವುಗೊಳಿಸಿದ ಸ್ಪೀಕರ್
ವಿಧಾನಸಭೆಯ ಮೊಗಸಾಲೆಯೊಳಗೆ ಮಾಧ್ಯಮಗಳ ಎಂಟ್ರಿಗೆ ಸ್ಪೀಕರ್ ಹೇರಿದ್ದ ನಿರ್ಬಂಧಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಯ್ತು. ಹೀಗಾಗಿ, ನಿರ್ಬಂಧವನ್ನು ಸ್ಪೀಕರ್ ತೆರವು ಗೊಳಿಸಿದರು. ಬಳಿಕ ''ಸಚಿವರು ಮತ್ತು ಶಾಸಕರ ಆಪ್ತ ಸಹಾಯಕರಿಗೆ ಮಾತ್ರ ಮೊಗಸಾಲೆಯಲ್ಲಿ ನಿರ್ಬಂಧಿಸಲಾಗಿದೆ, ಮಾಧ್ಯಮದವರಿಗಲ್ಲ'' ಎಂದು ಮಾರ್ಷಲ್ ಮೂಲಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿ ಕಳುಹಿಸಿದರು.