ಬೆಳಗಾವಿ ಅಧಿವೇಶನ : ಸರ್ಕಾರಕ್ಕೆ ಕಹಿಯಾದ ಸಕ್ಕರೆ
ಬೆಳಗಾವಿ, ಜೂ. 30 : 'ರಾಜಕೀಯ ಪಕ್ಷಗಳು ನಾಟಕ ಕಂಪನಿಗಳಂತೆ. ಆಡಳಿತ ಮತ್ತು ವಿರೋಧ ಪಕ್ಷ ಎಲ್ಲಿವೆಯೋ ಅಲ್ಲಿಗೆ ತಕ್ಕಂತೆ ಚಿತ್ರಕಥೆಯನ್ನು ಬದಲಾವಣೆ ಮಾಡಿಕೊಳ್ಳುತ್ತವೆ. ಕಾಂಗ್ರೆಸ್ ಪಕ್ಷಕ್ಕೂ ಈ ಮಾತು ಅನ್ವಯಿಸುತ್ತದೆ' ಎಂದು ಶ್ರೀನಿವಾಸಪುರ ಕ್ಷೇತ್ರದ ಶಾಸಕ (ಕಾಂಗ್ರೆಸ್) ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದರು. ರೈತರ ಸಮಸ್ಯೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಕ್ರಮ ಖಾತೆದಾರರ ರಕ್ಷಣೆ ಮಾಡುವುದಿಲ್ಲ : ಬೀದರ್ ನಗರಸಭೆ ವ್ಯಾಪ್ತಿಯ ಬರುವ ಚಿದ್ರಿ ಗ್ರಾಮದಲ್ಲಿನ ಕೃಷಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.[ಬೆಳಗಾವಿಯಿಂದ ಗೋವಾ ಒಂದು ಸುಂದರ ಪ್ರವಾಸ]
ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸಹ ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸದನಕ್ಕೆ ವಿವರಣೆ ನೀಡಿದರು.

ಬಾಕಿ ಕೊಡದಿದ್ದರೆ ಗೋದಾಮು ಜಪ್ತಿ : 'ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿರುವ ಬಾಕಿ ಕೊಡಿಸುವುದು ನಮ್ಮ ಕರ್ತವ್ಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದರು. 'ಬಾಕಿ ಕೊಡಲು ಒಪ್ಪದ ಸಕ್ಕರೆ ಕಾರ್ಖನೆಗಳ ಗೋದಾಮಿನಲ್ಲಿನ ಸಕ್ಕರೆಯನ್ನು ಜಪ್ತಿ ಮಾಡಲಾಗುತ್ತದೆ' ಎಂದು ಸಿದ್ದರಾಮಯ್ಯ ತಿಳಿಸಿದರು. [ಸೋಮವಾರದ ಕಲಾಪದಲ್ಲಿ ಏನಾಯ್ತು?]
ಸಮಯ 12.30 : 'ರೈತರ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರೆಸುತ್ತೇನೆ. ನಾನು ಪ್ರಚಾರಕ್ಕಾಗಿ ಪಾದಯಾತ್ರೆ ಮಾಡಿಲ್ಲ, ರೈತರ ಸಂಕಷ್ಟ ಅರಿಯಲು ಪಾದಯಾತ್ರೆ ಮಾಡಿದ್ದೇನೆ' ಎಂದು ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಹೇಳಿದರು.
ಸಮಯ 11.30 : ಮುಂಗಾರು ಅಧಿವೇಶನದ 2ನೇ ದಿನದ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆಗೆ ಜಾರಿದ್ದಾರೆ. ಸದನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡುತ್ತಿದ್ದಾರೆ.
ಸಮಯ 10. 40 : ಬೆಳಗಾವಿಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ 2ನೇ ದಿನದ ಕಲಾಪ ಆರಂಭವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಂತಾಪ ಸೂಚಿಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಸದಸ್ಯರ ಒತ್ತಾಯಕ್ಕೆ ಮಣಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ನಂತರ ಸಂತಾಪ ಸೂಚಿಸೋಣ ಎಂದು ಬಿಜೆಪಿ ಸದಸ್ಯರಿಗೆ ಭರವಸೆ ನೀಡಿದರು. ನಂತರ ಮುಂದಿನ ಕಲಾಪಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸುವರ್ಣ ವಿಧಾನಸೌಧದ ಹೊರಗೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ರಾತ್ರಿಯ ತನಕ ನಡೆಯಿತು. ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರೈತ ಸಂಘದ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications