ಕಾಂಗ್ರೆಸ್ 'ಕೈ' ಹಿಡಿಯಲಿದ್ದಾರೆಯೇ ಮುಳುಬಾಗಿಲು ಶಾಸಕ ಎಚ್.ನಾಗೇಶ್? ಈ ವರದಿ ಓದಿ
ಬೆಂಗಳೂರು, ಡಿಸೆಂಬರ್ 02: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆಗೆ ಕಸರತ್ತು ನಡೆಸಿವೆ. ಆಡಳಿತಾರೂಢ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ನಾಯಕರು ಬಸ್ ಯಾತ್ರೆಗೆ ಅಣಿಯಾಗುತ್ತಿದ್ದಾರೆ. ಜೆಡಿಎಸ್ನ ಕುಮಾರಸ್ವಾಮಿ ಹಳೇ ಮೈಸೂರು ಭಾಗದಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ.
ಚುನಾವಣಾ ಪರ್ವ ಆರಂಭವಾಗುತ್ತಿದ್ದಂತೆ ಶಾಸಕರ ಪಕ್ಷಾಂತರ, ಪಕ್ಷ ಸೇರ್ಪಡೆಯಂತಹ ವಿಚಾರಗಳು ಮುನ್ನೆಲೆಗೆ ಬಂದಿದೆ. ಅಧಿಕಾರ ವಿರೋಧಿ ಅಲೆಯನ್ನು ಬಳಸಿಕೊಂಡು ಅಧಿಕಾರ ಗದ್ದುಗೆ ಹಿಡಿಯುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಬೇರೆ ಪಕ್ಷಗಳ ಶಾಸಕರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಇದರ ಭಾಗವಾಗಿ ಮುಳುಬಾಗಿಲಿನ ಪಕ್ಷೇತರ ಶಾಸಕ ಎಚ್. ನಾಗೇಶ್ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ವರಿದಿಯಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಎಚ್.ನಾಗೇಶ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಆಗಲೇ ಎಚ್.ನಾಗೇಶ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ನಾಗೇಶ್, 'ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದು ನಿಜ. ಆದರೆ, ರಾಜಕೀಯ ಚರ್ಚೆಗಳನ್ನು ನಡೆಸಿಲ್ಲ' ಎಂದಷ್ಟೇ ಹೇಳಿದ್ದರು.

ಪಕ್ಷೇತರ ಶಾಸಕರಾಗಿರುವ ಎಚ್. ನಾಗೇಶ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು. ಅವರು ಪಕ್ಷೇತರರಾಗಿಯೇ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಯಿತು. ಹೀಗಾಗಿ, ಎಚ್. ನಾಗೇಶ್ ಅವರು ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಮಹದೇವಪುರದಿಂದ ಸ್ಪರ್ಧೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವ ಎಚ್.ನಾಗೇಶ್ ಬೆಂಗಳೂರಿನ ಮಹದೇವಪುರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಮುಳುಬಾಗಿಲಿನಿಂದ ಮತ್ತೆ ಪಕ್ಷೇತರನಾಗಿ ಕಣಕ್ಕಿಳಿದರೆ, ಈ ಬಾರಿ ಗೆಲುವು ಸುಲಭವಲ್ಲವೆಂದು ನಾಗೇಶ್ ಕಾಂಗ್ರೆಸ್ ಕದ ತಟ್ಟಿದ್ದಾರೆ ಎಂಬದನ್ನೂ ಅಲ್ಲಗಳೆಯುವಂತಿಲ್ಲ. ಎಚ್.ನಾಗೇಶ್ ಅವರು ಮಹದೇವಪುರ ಕ್ಷೇತ್ರದಲ್ಲಿ ಬರುವ ವೈಟ್ಫಿಲ್ಡ್ನವರು. ಹೀಗಾಗಿ, ಎಚ್.ನಾಗೇಶ್ ಅವರು ಮಹದೇವಪುರದಿಂದ ಕಣಕ್ಕಿಳಿಯುವ ಬಯಕೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಎಚ್.ನಾಗೇಶ್, ಸಧ್ಯ ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಸಂಕ್ರಾತಿ ಬಳಿಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇನೆ. ಮಹದೇವಪುರದಿಂದ ಸ್ಪರ್ಧಿಸಬೇಕೆಂಬ ಒತ್ತಡವನ್ನು ಬೆಂಬಲಿಗರು ಹಾಗೂ ಅಭಿಮಾನಗಳು ಹಾಕುತ್ತಿರುವುದು ನಿಜ ಎಂದು ತಿಳಿಸಿದ್ದಾರೆ.

ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಭಾರೀ ಪೈಪೋಟಿ ಇದೆ. ಕಾಂಗ್ರೆಸ್ ಟಿಕೆಟ್ಗಾಗಿ 12 ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಚುನಾವಣೆಗೆ ನಿಂತು ಪರಾಭವಗೊಂಡಿದ್ದ ನಲ್ಲೂರಹಳ್ಳಿ ನಾಗೇಶ್, ಮಹದೇವಪುರದ ಕಾಂಗ್ರೆಸ್ ಘಟಕದ ಮಹಿಳೆ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಮುಖಂಡರಾದ ಆನಂದ ಕುಮಾರ್ ಮತ್ತು ಕಮಲಾಕ್ಷಿ ರಾಜಣ್ಣ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಒಂದು ವೇಳೆ, ಎಚ್.ನಾಗೇಶ್ ಅವರಿಗೆ ಮಹದೇವಪುರದಿಂದ ಟಿಕೆಟ್ ನೀಡಿದರೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ಮುಖಂಡರು ಬಂಡಾಯ ಏಳಬಹುದು ಎಂಬ ಮಾತಗಳನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ, ಎಚ್.ನಾಗೇಶ್ಗೆ ಮಹದೇವಪುರದ ಹಾದಿ ಸರಳವಾಗಿಲ್ಲ ಎಂಬುದಂತೂ ಸತ್ಯ.












Click it and Unblock the Notifications