ಮಹಾದಾಯಿ ವಿಷಯದಲ್ಲಿ ಸುಳ್ಳಾಡಿದ ಮೋದಿ ವಿರುದ್ಧ ದೂರು!
ಬೆಂಗಳೂರು, ಮೇ 08: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಗದಗದಲ್ಲಿ ಚುನಾವಣಾ ಪ್ರಚಾರದ ವೇಳೆ ತಮ್ಮ ಭಾಷಣದಲ್ಲಿ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ನೀಡಿರುವ ಹೇಳಿಕೆಗಳು ಪ್ರಚೋದನಕಾರಿ ಹಾಗೂ ಸುಳ್ಳು ಮಾಹಿತಿ ಎಂದು ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ, ಅಭ್ಯರ್ಥಿ ಎಚ್ ಕೆ ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿದ್ದಾರೆ.
ಗೋವಾದಲ್ಲಿ ಚುನಾವಣೆ ಸೋತ ನಂತರ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಕರ್ನಾಟಕದ ಜನರ ಮುಂದೆ ನಾಟಕವಾಡುತ್ತಿದೆ. ಆದ ಕಾರಣ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಸೋಲಲಿದೆ. ಮಹದಾಯಿ ವಿಚಾರವನ್ನು ನಾವು ಮಾತುಕತೆ ಮುಖಾಂತರ ಪರಿಹರಿಸಲು ಬದ್ಧರಾಗಿದ್ದೇವೆ.
2007 ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು 'ಯಾವುದೇ ಕಾರಣಕ್ಕೂ ಮಹದಾಯಿ ನೀರಿನ ಒಂದು ಹನಿಯನ್ನೂ ಸಹ ಕರ್ನಾಟಕಕ್ಕೆ ಹರಿಸುವುದಿಲ್ಲ' ಎಂದಿದ್ದರು. ಈ ಮಾತು ಮರೆತುಹೋಯಿತೇ ಮುಖ್ಯಮಂತ್ರಿಗಳೇ? ಎಂದು ಪ್ರಶ್ನಿಸಿದ್ದರು.
ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಸಭೆ ಕರೆದು ಶೀಘ್ರವೇ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿಗೆ ನೇರ ಸವಾಲು ಹಾಕಿದ್ದರು.
ಪ್ರಧಾನಿ ಮೋದಿ ಅವರು ಮೂರು ಬಾರಿ ಮಹಾದಾಯಿ ವಿವಾದ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಪ್ರಚೋದನೆಗೊಳಿಸದಂತೆ ನಿರ್ದೇಶನ ನೀಡಿ ಹಾಗೂ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದರೆ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವುದಾಗಿ ಆಶ್ವಾಸನೆ ನೀಡುತ್ತಿರುವುದು ಸರಿಯಿಲ್ಲ ಎಂದು ಕಾಂಗ್ರೆಸ್ ದೂರಿದೆ.
ಬೆಳಗಾವಿ ಜಿಲ್ಲೆ ಭೀಮ್ ಘಡ ದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಾಂಡೋವಿ (ಮಹದಾಯಿ) ನದಿ 77 ಕಿ.ಮೀ ಹರಿಯಲಿದ್ದು ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.