ಮತದಾರರ ಮಾಹಿತಿ ಕಳವು ಆರೋಪ: ಬಿಜೆಪಿಯವರು ಬೇಕಿದ್ದರೆ ಮಾನನಷ್ಟ ಮೊಕ್ಕದ್ದಮೆ ಹಾಕಲಿ- ಡಿಕೆಶಿ
ಬೆಂಗಳೂರು, ನವೆಂಬರ್ 18: ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅವರು ತಡ ಮಾಡುತ್ತಿರುವುದೇಕೆ? ಮಾನನಷ್ಟ ಮೊಕದ್ದಮೆ ಹಾಕಿಲಿ. ಈ ವಿಚಾರಗಳು ಚರ್ಚೆ ಆಗಲಿ. ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮರ್ ಹೇಳಿದರು,
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಬಳಿಯೂ ಈ ಸಂಸ್ಥೆಯ ಎಲ್ಲ ಅಕ್ರಮದ ದಾಖಲೆಗಳಿವೆ. ಕಳೆದ ಬಾರಿ ನಮ್ಮ ಪಕ್ಷದಲ್ಲಿ ಇದ್ದ ಮುನಿರತ್ನ ಅವರೆ ನಕಲಿ ಮತದಾರರ ಗುರುತಿನ ಚೀಟಿ ಮಾಡಿದ್ದರು. ಈ ವಿಚಾರವಾಗಿ ಮುನಿರಾಜು ಅವರು ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೂ ಅದನ್ನು ಹಿಂಪಡೆದಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಈ ವಿಚಾರದಲ್ಲಿ ಯಾಕೆ ಪ್ರಕರಣ ದಾಖಲಿಸಿಲ್ಲ. ಯಾರನ್ನೂ ಬಂಧಿಸಿಲ್ಲ ಯಾಕೆ? ರವಿಕುಮಾರ್ ಯಾವ ನಾಯಕರ ಜತೆ ಸಂಪರ್ಕದಲ್ಲಿದ್ದರು ಎಂದು ಪತ್ತೆ ಹಚ್ಚಬಹುದಲ್ಲವೇ? ಎಂದರು
ಅನಧಿಕೃತವಾಗಿ ಮಾಹಿತಿ ಕಲೆಹಾಕುವುದು ಅಪರಾಧವಾಗಿರುವಾಗ ಮಾತದಾರರ ಮಾಹಿತಿ ಕಲೆ ಹಾಕಿರುವುದು ಎಷ್ಟು ಸರಿ ಎಂಬ ವಿಚಾರವಾಗಿ ಮಾತನಾಡಿ, ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕಾಗಿ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸೋಷಿಯಲ್ ಇಂಪಾಕ್ಟ್ ಅಧ್ಯಯನಕ್ಕೆ ಅನುಮತಿ ನೀಡಿದ್ದೇ ಆಗಿದ್ದರೆ, ಕೋವಿಡ್ ಸಮಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಮನೆ, ಮನೆಗೆ ಕಳುಹಿಸಿದ್ದು ಏಕೆ? ಅದು ಸೋಷಿಯಲ್ ಇಂಪಾಕ್ಟ್ ಅಲ್ಲವೇ' ಎಂದು ಕೇಳಿದರು.

ಜಾತಿ ಗಣತಿ ಮಾಡಿದ್ದೂ ತಪ್ಪೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಮತದಾನದ ಹಕ್ಕು ನಮ್ಮ ಮೂಲಭೂತ ಹಕ್ಕು. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರವಾಗಿದ್ದರೆ ಅದನ್ನೇ ತನಿಖೆ ಮಾಡಿ ಎಂದು ಹೇಳುತ್ತಿದ್ದೇವೆ. ಇಂತಹ ವಿಚಾರ ತನಿಖೆ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲ ವಿಚಾರದಲ್ಲೂ ತನಿಖೆ ಮಾಡಲಿ. ನಾನು ಎಲ್ಲಿ ಹೋದರೂ ಶಾಸಕರ ಗುರುತಿನ ಚೀಟಿ ಕೇಳುವುದಿಲ್ಲ. ಕೇಳುವುದು ಆಧಾರ್ ಅಥವಾ ಮತದಾರರ ಗುರುತಿನ ಚೀಟಿ ಮಾತ್ರ. ಇಂತಹ ಹಕ್ಕು ಕಸಿಯುವುದು ಸರಿಯಲ್ಲ ಎಂದರು.
ಕಾಂಗ್ರೆಸಿಗರಿಗೆ ಕೆಲಸ ಇಲ್ಲದೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಮಾಧ್ಯಮವೊಂದು ಈ ವಿಚಾರವಾಗಿ ವರದಿ ಪ್ರಕಟಿಸಿದ ತಕ್ಷಣವೇ ಬಿಬಿಎಂಪಿ ಆಯುಕ್ತರು ಈ ಅನುಮತಿ ರದ್ದು ಮಾಡುತ್ತಾರೆ. ಆದರೆ ಬಿಬಿಎಂಪಿಯಿಂದ ಈ ಸಂಸ್ಥೆ ವಿರುದ್ಧ ಯಾಕೆ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ? ಸಾವಿರಾರು ಜನಕ್ಕೆ ಬಿಎಲ್ಒ ಎಂದು ನಕಲಿ ಗುರುತಿನ ಚೀಟಿ ನೀಡಿದ ರಿಟರ್ನಿಂಗ್ ಆಫೀಸರ್ ಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಎಲ್ಲರನ್ನು ಬಂಧಿಸಬೇಕು. ಯಾಕೆ ಈ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಇವಿಎಂ ಹ್ಯಾಕ್ ಮಾಡುವವರು ಇದನ್ನು ಮಾಡದೇ ಇರುತ್ತಾರಾ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, , 'ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಅಥವಾ ಬಿಡಲಿ. ನಾನು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ, ಜವಾಬ್ದಾರಿಯುತ ಮತದಾರನಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಂದಿನ 24 ಗಂಟೆಗಳ ಒಳಗಾಗಿ ಅಂದರೆ ನಾಳೆ ಮಧ್ಯಾಹ್ನ 12 ಗಂಟೆ ಒಳಗೆ ಈ ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಮಾಡಿದವರು, ಮತದಾರರ ಮಾಹಿತಿ ಕಲೆಹಾಕಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗವೇ ಇದರಲ್ಲಿ ಭಾಗಿಯಗಿದೆ. ಈ ವಿಚಾರವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಚುನಾವಣಾ ಆಯೋಗದವರೆಗೂ ತೆಗೆದುಕೊಂಡು ಹೋಗುತ್ತೇವೆ.
ರಾಜ್ಯ ಚುನಾವಣಾ ಆಯೋಗ ಈ ವಿಚಾರದ ತನಿಖೆಯನ್ನು ಡಿವಿಸಿಗೆ ನೀಡಿದ್ದಾರೆ. ಈ ಡಿವಿಸಿಯನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ನಾವು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿರುವಾಗ ಅವರ ಕೈಕೆಳಗಿನ ಅದಿಕಾರಿಗಳು ತನಿಖೆ ಮಾಡಲು ಸಾಧ್ಯವೇ? ಈ ಪ್ರಕರಣ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ. ಆಕ್ಸಿಜನ್ ದುರಂತ ಪ್ರಕರಣದಲ್ಲಿ ನ್ಯಾಯಾಲಯ ಹೇಗೆ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಮಾನ ಕಾಪಾಡಿತೋ ಅದೇ ರೀತಿ ಈ ವಿಚಾರದಲ್ಲೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲ ಮತದಾರರಿಗೆ ತಮ್ಮ ಹಕ್ಕು ಸಿಗುವಂತೆ ಮಾಡಬೇಕು. ಇಂತಹ ನೀಚ ಹಾಗೂ ಭ್ರಷ್ಟ ಸರ್ಕಾರ ಹಾಗೂ ಅಧಿಕಾರಿಗಳ ಬಂಧವಾಗಬೇಕು' ಎಂದು ಆಗ್ರಹಿಸಿದರು.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ದೊಡ್ಡ ಪಟ್ಟಿ ಇದೆ. ಇದನ್ನು ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರು ಪಕ್ಷವನ್ನು ಸೇರುವ ದಿನ ಅವರ ಹೆಸರು ನಿಮಗೆ ತಿಳಿಯುತ್ತದೆ' ಎಂದು ಸ್ಪಷ್ಟಪಡಿಸಿದರು.











Click it and Unblock the Notifications