ಖೇಣಿ ಸೇರಿಸಿಕೊಂಡ ಕಾಂಗ್ರೆಸ್ಸಿನಿಂದ ಭ್ರಷ್ಟರ ರಕ್ಷಣೆ : ಎಎಪಿ
ಬೆಂಗಳೂರು, ಮಾರ್ಚ್ 05: ಬೀದರ್ ದಕ್ಷಿಣ ಕ್ಷೇತ್ರದ ಶಾಸಕ, ನೈಸ್ ಸಂಸ್ಥೆ ಮುಖ್ಯಸ್ಥ, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ್ ಖೇಣಿ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ನೈಸ್ ಹಗರಣದಲ್ಲಿ ತೊಡಗಿರುವ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ಬೆಳೆಸುವ ಪಕ್ಷ ಎಂದು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ನೈಸ್ ಯೋಜನೆಯಲ್ಲಿ ಅಪಾರವಾದ ಅಕ್ರಮ ಎಸಗಿರುವ ಆರೋಪ ಹೊತ್ತಿರುವ, ಅಕ್ರಮ ಗಣಿಗಾರಿಕೆ, ಪತ್ರಕರ್ತರಿಗೆ ಅವಮಾನ ಮಾಡಿ ಅವಾಚ್ಯ ಶಬ್ದ ಬಳಸಿದ್ದ, ತನ್ನ ದರ್ಪ, ದುರಂಹಕಾರ, ದುರ್ವರ್ತನೆಯಿಂದಲೇ ಕುಖ್ಯಾತಿ ಹೊಂದಿರುವ ಬೀದರ್ ದಕ್ಷಿಣದ ಶಾಸಕ ಆಶೋಕ ಖೇಣಿಯನ್ನು ತನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಸ್ವಯಂಘೋಷಿತ ಸಮಾಜವಾದಿ ಸಿದ್ದರಾಮಯ್ಯನವರು ತಮ್ಮ ಅಸಲಿ ಬಣ್ಣವನ್ನು ಜನತೆಗೆ ತೆರೆದಿಟ್ಟಿದ್ದಾರೆ.
ಡಿಬೇಟ್ : ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದು ಸರಿಯೇ?
ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಕೀಳಾಗಿ ಮಾತನಾಡಿದ್ದ, ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ನೋಟಿನ ಕಂತೆ ತೋರಿಸಿ ಅವಮಾನಿಸಿದ, ರಾಷ್ಟ್ರೀಯ ಮಾಧ್ಯಮದ ಪತ್ರಕರ್ತೆಯೊಬ್ಬರಿಗೆ ಅವಾಚ್ಯ ಶಬ್ದ ಬಳಸಿದ್ದ, ನೈಸ್ ಯೋಜನೆಯ ಎಲ್ಲಾ ಒಪ್ಪಂದಗಳನ್ನು ಗಾಳಿಗೆ ತೂರಿರುವ, ಕಾಂಕ್ರೀಟ್ ರಸ್ತೆ ನಿರ್ಮಿಸಲು ಟೆಂಡರ್ ಪಡೆದು ಡಾಂಬರು ರಸ್ತೆ ನಿರ್ಮಿಸಿರುವ, ಅಕ್ರಮ ಭೂ ಒತ್ತುವರಿ, ಅಕ್ರಮ ಗಣಿಗಾರಿಕೆಯೂ ಸೇರಿದಂತೆ ಆರೋಪ ಹಾಗೂ ಹಗರಣಗಳ ಮೂಟೆಯನ್ನೇ ಹೊತ್ತಿರುವ ಶಾಸಕ ಆಶೋಕ ಖೇಣಿಯನ್ನು ಯಾವ ನಾಚಿಕೆಯೂ ಇಲ್ಲದಂತೆ ಕಾಂಗ್ರೆಸ್ ಪಕ್ಷ ಸೇರಿಸಿಕೊಂಡಿದೆ.
ಆನಂದ್ ಸಿಂಗ್ ನಂತರ ಖೇಣಿಗೆ ಮಣೆ
ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷವು, ಗಣಿ ಗ್ಯಾಂಗ್ನ ಆನಂದ್ ಸಿಂಗ್ರನ್ನು ಈಗಾಗಲೇ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಈಗ ಅಶೋಕ ಖೇಣಿಯ ಸರದಿ, ಮುಂದೆ ಸಮಾಜವಾದಿ ಸಿದ್ದರಾಮಯ್ಯನವರು ಜನಾರ್ಧನ ರೆಡ್ಡಿಗೂ ಶಾಲು ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿ ಜನತೆಯಲ್ಲಿ ಯಾವ ಆಶ್ಚರ್ಯವೂ, ಅನುಮಾನವೂ ಉಳಿದಿಲ್ಲ.
ಟಿ.ಬಿ ಜಯಚಂದ್ರ ನೇತೃತ್ವದ ವರದಿ ಏನಾಯ್ತು?
ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲೇ ನೈಸ್ ಅಕ್ರಮಗಳ ಕುರಿತಂತೆ ಸಚಿವ ಟಿ.ಬಿ ಜಯಚಂದ್ರ ನೇತೃತ್ವದ 11 ಜನರ ಸದನ ಸಮಿತಿಯು ಸಲ್ಲಿಸಿದ್ದ 392 ಪುಟಗಳ ವರದಿಯಲ್ಲಿ ನೈಸ್ ಅಕ್ರಮದ ಆಳ-ಅಗಲವನ್ನು ಬಿಚ್ಚಿಟ್ಟಿದ್ದು ಮಾತ್ರವಲ್ಲದೇ ಖೇಣಿ ವಿರುದ್ಧ 580 ಕೋಟಿ ರೂಪಾಯಿಗಳಷ್ಟು ದಂಡವನ್ನು ಹಾಗೂ ಕಠಿಣ ಕ್ರಮಗಳನ್ನೂ ಶಿಫಾರಸ್ಸು ಮಾಡಿತ್ತು. ಅಂದು ಮಾಧ್ಯಮಗಳ ಮುಂದೆ ಸಚಿವ ಟಿ.ಬಿ ಜಯಚಂದ್ರ, ಅಶೋಕ ಖೇಣಿಯ ವಿರುದ್ಧ ಗುಡುಗಿದ್ದರು.
ಲೂಟಿಕೋರರ ಕುರಿತು ಕಾಳಜಿಯುಳ್ಳ ಪಕ್ಷ
ಇಂಥ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಜೈಲಿಗೆ ಕಳುಹಿಸುವ ಬದಲು, ಒಳ ಒಪ್ಪಂದ ಮಾಡಿಕೊಂಡು ಶಾಲು ಹಾಕಿ ಸನ್ಮಾನ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಖೇಣಿಯನ್ನು ಯಾವುದೇ ನಾಚಿಕೆ ಇಲ್ಲದೇ ಬರಸೆಳೆದು ಅಪ್ಪಿಕೊಳ್ಳುತ್ತಿದೆ. ಮಾತ್ರವಲ್ಲದೇ ಕಾಂಗ್ರೆಸ್ ಎಂದಿದ್ದರೂ ಭ್ರಷ್ಟರು, ದುಷ್ಟರು ಹಾಗೂ ಲೂಟಿಕೋರರ ಕುರಿತು ಕಾಳಜಿಯುಳ್ಳ ಪಕ್ಷ ಎಂದು ಸಾಬೀತುಪಡಿಸುತ್ತಿದೆ.
ಮಾಧ್ಯಮ ವಿರೋಧಿ ವ್ಯಕ್ತಿ
ಒಬ್ಬ ರೈತವಿರೋಧಿ, ಜನವಿರೋಧಿ, ಮಾಧ್ಯಮವಿರೋಧಿ ವ್ಯಕ್ತಿಯನ್ನು ಕೇವಲ ಹಣಬಲ ಹೊಂದಿರುವ ಕಾರಣಕ್ಕೆ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್, ಭೃಷ್ಟರ ಮೇಲೆ ತನಗಿರುವ ಕಾಳಜಿಯನ್ನು, ಪ್ರೀತಿಯನ್ನೂ ತೋರ್ಪಡಿಸಿದೆ. ಇಂತಹ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕೆಂದು ಆಮ್ ಆದ್ಮಿ ಪಕ್ಷ ಮತದಾರರಲ್ಲಿ ವಿನಂತಿಸಿಕೊಳ್ಳುತ್ತದೆ.