ರಾಜೀನಾಮೆ ನೀಡಿದ ಅತೃಪ್ತರು ರಾಜ್ಯಪಾಲರಿಗೆ ನೀಡಿದ ಸ್ಪೋಟಕ ಮಾಹಿತಿ
ರಾಜೀನಾಮೆ ನೀಡಿದ ಅತೃಪ್ತರು ರಾಜ್ಯಪಾಲರಿಗೆ ನೀಡಿದ ಸ್ಪೋಟಕ ಮಾಹಿತಿ
ಬೆಂಗಳೂರು, ಜುಲೈ 6: ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದ ಅತೃಪ್ತ ಶಾಸಕರು, ಇನ್ನೆಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆಂದು ತಿಳಿದು ಬಂದಿದೆ.
ಅತೃಪ್ತರು ನೀಡಿದ್ದಾರೆ ಎನ್ನಲಾದ ಮಾಹಿತಿಯಂತೆ ಶಾಸಕರು ರಾಜೀನಾಮೆ ನೀಡಿದ್ದೇ ಆದಲ್ಲಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳುವುದು ನಿಶ್ಚಿತ.
ಎಚ್ ವಿಶ್ವನಾಥ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶಾಸಕರು, ಯಾವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇವೆ ಎನ್ನುವುದರ ಬಗ್ಗೆಯೂ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.

ಈಗ ನಾವು ಹದಿನಾಲ್ಕು ಜನ ಶಾಸಕರಿದ್ದೇವೆ, ಇನ್ನೂ ಎಂಟು ಶಾಸಕರು ರಾಜೀನಾಮೆ ಸದ್ಯದಲ್ಲೇ ನೀಡಲಿದ್ದಾರೆ. ಒಟ್ಟು ರಾಜೀನಾಮೆ ನೀಡುವ ಶಾಸಕರ ಸಂಖ್ಯೆ 22 ಎನ್ನುವ ಸ್ಪೋಟಕ ಮಾಹಿತಿಯನ್ನು ಅತೃಪ್ತ ಶಾಸಕರು ನೀಡಿದ್ದಾರೆ ಎನ್ನಲಾಗುತ್ತಿದೆ.
ಅತೃಪ್ತ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ನೀಡಲು ಹೋದಾಗ, ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೂಡಾ ಅವರ ಜೊತೆಗಿದ್ದಿದ್ದು ವಿಶೇಷ.
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ರಾಜೀನಾಮೆಯನ್ನು ಡಿ ಕೆ ಶಿವಕುಮಾರ್ ಹರಿದು ಹಾಕಿದ ಹಿನ್ನಲೆಯಲ್ಲಿ ಅತೃಪ್ತರಿಗೆ ಸೂಕ್ತ ಭದ್ರತೆ ನೀಡುವಂತೆ, ರಾಜ್ಯಪಾಲರು ಆದೇಶ ನೀಡಿದ್ದರಿಂದ, ಅಲೋಕ್ ಕುಮಾರ್ ಶಾಸಕರ ಜೊತೆಗಿದ್ದರು.
ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದೇನೆ. ನನ್ನ ಮತ್ತು ಮುನಿರತ್ನ ಒಡನಾಟ ಮೂವತ್ತು ವರ್ಷದ್ದು, ನಮ್ಮಿಬ್ಬರ ನಡುವೆ ಭಾವನಾತ್ಮಕ ಸಂಬಂಧವಿದೆ ಎಂದು ಪತ್ರ ಹರಿದು ಹಾಕಿದ್ದನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದರು.












Click it and Unblock the Notifications