ಗುಪ್ತಚರ ಇಲಾಖೆ ಅಸೆಂಬ್ಲಿ ಚುನಾವಣಾ 'ಅಲರ್ಟ್': ಸಿಎಂ ನಡೆ ನಿಗೂಢ!
Recommended Video
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವಿಚಾರದಲ್ಲಿ ರಾಜ್ಯ ಗುಪ್ತಚರ ಇಲಾಖೆ ಈಗಾಗಲೇ ಒಂದು ರೌಂಡಿನ ರಿಪೋರ್ಟ್ ಅನ್ನು ನೀಡಿತ್ತು ಎನ್ನುವ ವರದಿಗಳ ನಡುವೆ, ಇಲಾಖೆ ಮತ್ತೊಂದು ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಲಾಭವಾಗಲಿದೆ ಎನ್ನುವ ಹಿಂದಿನ ವರದಿಯ ನಂತರ, ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ತಾವು ಕಣಕ್ಕಿಳಿಯಲು ನಿರ್ಧರಿಸಿರುವ ಕ್ಷೇತ್ರ 'ಸೇಫ್' ಅಲ್ಲ ಎನ್ನುವ ಮಾಹಿತಿಯನ್ನು ನೀಡಿದೆ ಎಂದು ತಿಳಿದು ಬಂದಿದೆ.
ಅಸೆಂಬ್ಲಿ ಚುನಾವಣೆ: ರಾಜ್ಯ ಗುಪ್ತಚರ ವರದಿಯಲ್ಲಿ ಏನಿದೆ
ತನ್ನ ವಿರುದ್ದ ಎಸಿಬಿ ದಾಳ ಪ್ರಯೋಗಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನನ್ನ ವಿರುದ್ದ ಕಣಕ್ಕಿಳಿಯಲು ಸೋಲಿನ ಭೀತಿ ಕಾಡುತ್ತಿದೆ ಎಂದು ಇತ್ತೀಚೆಗಷ್ಟೇ ಚಾಮುಂಡೇಶ್ವರಿ ಕ್ಷೇತ್ರದ ಹಾಲೀ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದರು.
ತನ್ನನ್ನು ಸೋಲಿಸಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಜೊತೆ ಸ್ಥಳೀಯ ಪ್ರಭಾವಿ ಮುಖಂಡರು ಬೆಂಬಲಿಸುವ ಸಾಧ್ಯತೆಯ ರಾಜಕೀಯ ಲೆಕ್ಕಾಚಾರ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ತನ್ನ ಹಾಲೀ ವರುಣಾ (ಮೈಸೂರು ಜಿಲ್ಲೆ) ಕ್ಷೇತ್ರವನ್ನು ಪುತ್ರ ಯತೀಂದ್ರನಿಗಾಗಿ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಈಗಾಗಲೇ ಘೋಷಣೆಯನ್ನೂ ಮಾಡಿದ್ದರು. ಆದರೆ, ಗುಪ್ತಚರ ಇಲಾಖೆಯ ವರದಿಯ ನಂತರ, ಮುಖ್ಯಮಂತ್ರಿಗಳ ಮುಂದಿನ ನಿರ್ಧಾರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮುಂದೆ ಓದಿ..
ಮೋದಿ ಬಂದಷ್ಟು ಬಿಜೆಪಿಗೆ ಲಾಭ
ರಾಜ್ಯ ಗುಪ್ತಚರ ಇಲಾಖೆ ತನ್ನ ಹಿಂದಿನ ವರದಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಎಷ್ಟೆಷ್ಟು ಚುನಾವಣಾ ಸಭೆ/ರೋಡ್ ಶೋ ನಡೆಸುತ್ತಾರೋ ಅಷ್ಟು ಬಿಜೆಪಿಗೆ ಲಾಭ ತಂದುಕೊಡಲಿದೆ. ಮೋದಿಯವರ ಪ್ರಚಾರದಿಂದ ಪಕ್ಷ ನಿರೀಕ್ಷಿಸುತ್ತಿರುವ ಸಂಖ್ಯೆಗಿಂತ ನಿರ್ಣಾಯಕ ಹದಿನೈದರಿಂದ ಇಪ್ಪತ್ತು ಸೀಟು ಹೆಚ್ಚಿನ ಸ್ಥಾನವನ್ನು ಬಿಜೆಪಿ ಪಡೆಯುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ನೀಡಿತ್ತು.
ಜಿ ಟಿ ದೇವೇಗೌಡ ಮತ್ತು ಸಂಸದ ಪುಟ್ಟರಾಜು
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೆ ತೀವ್ರ ಪೈಪೋಟಿ ಜೆಡಿಎಸ್ ನೀಡುವ ಸಾಧ್ಯತೆಯಿರುವುದರಿಂದ, ಪಕ್ಷದ ಇಬ್ಬರು ಪ್ರಮುಖ ಮುಖಂಡರಾದ ಜಿ ಟಿ ದೇವೇಗೌಡ ಮತ್ತು ಸಂಸದ (ಮಂಡ್ಯ) ಪುಟ್ಟರಾಜು ವಿರುದ್ದ ಹಳೇ ಕೇಸನ್ನು ರೀ ಓಪನ್ ಮಾಡಲು ಸಿದ್ದರಾಮಯ್ಯ ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ಸೂಚನೆ ನೀಡಿದ್ದಾರೆಂದು, ಕುಮಾರಸ್ವಾಮಿ ಆದಿಯಾಗಿ ಜೆಡಿಎಸ್ ಮುಖಂಡರು ಸಿಎಂ ವಿರುದ್ದ ಹರಿಹಾಯ್ದಿದ್ದರು.
ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ
ಹಾಲೀ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರನ್ನು ಕಾಂಗ್ರೆಸ್ಸಿಗೆ ಸೇರಿಸಲು ಸಿಎಂ ಬಹಳ ಕಸರತ್ತು ನಡೆಸಿದ್ದರು. ಆದರೆ, ಜಿಟಿಡಿ ಪಕ್ಷ ತೊರೆಯುವುದಿಲ್ಲ ಎಂದು ಗ್ಯಾರಂಟಿಯಾದ ನಂತರ, ಜೊತೆಗೆ ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿಲ್ಲದಿಲ್ಲ.
ಹೆಬ್ಬಾಳ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ
ಗುಪ್ತಚರ ಇಲಾಖೆ ನೀಡಿದೆ ಎನ್ನಲಾಗುತ್ತಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಹೆಬ್ಬಾಳ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಪ್ರಸಕ್ತ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರೂ, ಮುಸ್ಲಿಂ ಮತದಾರರ ಸಂಖ್ಯೆ ಇಲ್ಲಿ ಹೆಚ್ಚಿರುವುದರಿಂದ, ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೂ, ಇದು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಪ್ರಭಲ ಹಿಡಿತದಲ್ಲಿರುವ ಕ್ಷೇತ್ರ ಎನ್ನುವುದನ್ನೂ ಸಿಎಂ ಅರಿತಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸೇಫ್ ಎನ್ನುವ ವರದಿ
ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸೇಫ್ ಎನ್ನುವ ವರದಿ ಏನಿದ್ದರೂ, ಮಗನನ್ನು ರಾಜಕೀಯ ಮುನ್ನಲೆಗೆ ತರಲು ನಿರ್ಧರಿಸಿರುವ ಸಿದ್ದರಾಮಯ್ಯ, 28 ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಸ್ಪರ್ಧಿಸಿದರೆ, ಪಕ್ಷಕ್ಕೆ ಇನ್ನಷ್ಟು ಲಾಭವಾಗಬಹುದು ಎನ್ನುವ ಲೆಕ್ಕಾಚಾರವನ್ನೂ ಹೊಂದಿದ್ದಾರೆ ಎನ್ನುವ ಮಾಹಿತಿಯಿದೆ.