ಚಿತ್ರಕಲಾ ಪರಿಷತ್ನ ಕಾರ್ಯಕಾರಿ ವಿಸರ್ಜನೆಗೆ ಒತ್ತಾಯ
ಬೆಂಗಳೂರು, ಆಗಸ್ಟ್. 11: ಕರ್ನಾಟಕ ಚಿತ್ರಕಲಾ ಪರಿಷತ್ನ ಕಾರ್ಯಕಾರಿ ಸಮಿತಿ ಕಾನೂನು ಬಾಹಿರವಾಗಿದ್ದು ಅದನ್ನು ಕೂಡಲೇ ವಿಸರ್ಜನೆ ಮಾಡಬೇಕು ಎಂದು ಪರಿಷತ್ ನ ಆಜೀವ ಸದಸ್ಯರು ಚಿತ್ರಕಲಾ ಪರಿಷತ್ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹಿರಿಯ ಚಿತ್ರ ಕಲಾವಿದ ಮತ್ತು ಪರಿಷತ್ನ ಆಜೀವ ಸದಸ್ಯ ಕೆ.ಟಿ. ಶಿವಪ್ರಸಾದ್, ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಉಪಾಧ್ಯಕ್ಷ ಕೆ.ಇ. ರಾಧಾಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯ ಜಿ. ಲಕ್ಷ್ಮೀಪತಿ, ಉಮಾಪಾಟೀಲ್ ಹಾಗೂ ಜಿ.ಎಸ್. ಸತ್ಯನಾರಾಯಣ ಅವರು ಪರಿಷತ್ನ ಸದಸ್ಯರು ಆಗಿಲ್ಲವಾದರೂ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಇವರು ಪರಿಷತ್ನ ಸದಸ್ಯರಲ್ಲ ಎಂದು ಸರ್ಕಾರ ನೇಮಿಸಿದ್ದ ವಿಚಾರಣಾ ಸಮಿತಿ ಜೂನ್ 6ರಲ್ಲಿ ವರದಿ ನೀಡಿದೆ ಆದರೆ ಸ್ಥಾನ ಬಿಟ್ಟಿಲ್ಲ ಎಂದು ಆರೋಪಿಸಿದರು.[ವಸ್ತ್ರಸಂಹಿತೆ ಬೇಡ ಎಂದ ಪರಿಷತ್ ವಿದ್ಯಾರ್ಥಿನಿಯರು]
ಟಿ. ಪ್ರಭಾಕರ್ ಅವರು ಪರಿಷತ್ ಅಧ್ಯಕ್ಷರಾಗಿದ್ದಾಗ 1.47 ಕೋಟಿ ರು. ಅಕ್ರಮ ಮಾಡಿದ್ದಾರೆ. ಈ ಬಗ್ಗೆ ಈ ಸಂಬಂಧ ತನಿಖೆ ನಡೆಸಿದ್ದ ಸರ್ಕಾರ, ದುರುಪಯೋಗದ ಹಣವನ್ನು ವಸೂಲಿ ಮಾಡುವಂತೆ ಆದೇಶಿಸಿತ್ತು. ಈಗ ಇವರೇ ಪರಿಷತ್ ನ ಉಪಾಧ್ಯಕ್ಷರಾಗಿರುವುದು ದುರ್ದೈವ ಎಂದು ಹೇಳಿದರು.
ಇಲ್ಲಿಯವರೆಗೆ ಎಲ್ಲ ಸದಸದ್ಯರ ಸಭೆಯನ್ನು ಕರೆದಿಲ್ಲ. ಇಂಥ ಬೇಜವಾಬ್ದಾರಿ ಸಮಿತಿಯನ್ನು ಕೂಡಲೇ ವಿಸರ್ಜನೆ ಮಾಡಿ ಆರು ತಿಂಗಳೊಳಗೆ ಮರು ಚುನಾವಣೆ ನಡೆಸಬೇಕು. ಅಲ್ಲಿಯವರೆಗೆ ಆಜೀವ ಸದಸ್ಯತ್ವ ಹೊಂದಿರುವ ಹಿರಿಯರೊಬ್ಬರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.[ಚಿತ್ರಸಂತೆ ಹೇಗಿತ್ತು]
ಪರಿಷತ್ ನ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಯಾವ ಬಗೆಯಲ್ಲಿಯೂ ನೆರವಾಗುತ್ತಿಲ್ಲ. ಕೇವಲ ನಾಮಕಾವಸ್ಥೆಗೆ ಶಿಬಿರ, ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಕಲಾವಿದರ ಮಾತಿಗೆ ಇನ್ನಾದರೂ ಸರ್ಕಾರ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.