Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ 56 ಸಾವಿರ ದಾಟಿದ ಅಡಿಕೆ ದರ: ಉಳಿದ ಮಾರುಕಟ್ಟೆಗಳ ಬೆಲೆ ಎಷ್ಟಿದೆ ನೋಡಿ
ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ಸದ್ಯ ಫುಲ್ ಸಂತಸದಲ್ಲಿದ್ದಾರೆ. ಅಡಿಕೆ ಧಾರಣೆ ಏರುಗತಿಯಲ್ಲಿದ್ದು ಪ್ರತಿ ಕ್ವಿಂಟಾಲ್ ಅಡಿಕೆ ದರ 56 ಸಾವಿರ ರೂಪಾಯಿ ದಾಟಿದೆ. ಈ ವರ್ಷದ ಆರಂಭದಿಂದ ಸ್ಥಿರವಾಗಿದ್ದ ಅಡಿಕೆ ಧಾರಣೆ ಜೂನ್ ತಿಂಗಳಿನಿಂದ ಹೆಚ್ಚಳವಾಗಲು ಆರಂಭಿಸಿದೆ.
ಜೂನ್ ಮೊದಲ ವಾರ ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆ 50 ಸಾವಿರ ರೂಪಾಯಿ ತಲುಪಿತ್ತು. ಜೂನ್ ಮಧ್ಯಭಾಗದಲ್ಲಿ 53 ಸಾವಿರ ಮತ್ತು ಜೂನ್ ತಿಂಗಳ ಕೊನೆಯಲ್ಲಿ ಅಡಿಕೆ ಧಾರಣೆ 55 ಸಾವಿರ ಗಡಿ ಮುಟ್ಟಿತ್ತು. ಈಗ 56 ಸಾವಿರ ರೂಪಾಯಿ ದಾಟಿದ್ದು ದರ ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಕಳೆದ ವರ್ಷದಲ್ಲಿ ಒಂದು ಸಂದರ್ಭದಲ್ಲಿ ಅಡಿಕೆ ಧಾರಣೆ ಪ್ರತಿ ಕ್ವಿಂಟಲ್ಗೆ 64 ಸಾವಿರ ರೂಪಾಯಿಗಳವೆರೆ ತಲುಪಿತ್ತು. ನಂತರ ಬೆಲೆಯಲ್ಲಿ ಕುಸಿತ ಕಂಡು 35-40 ಸಾವಿರ ರೂಪಾಯಿಗಳಿಗೆ ಬಂದಿತ್ತು. 10 ವರ್ಷಗಳ ಹಿಂದೆ ಅಡಿಕೆ ಧಾರಣೆ 80 ಸಾವಿರ ತಲುಪಿದ್ದು ಈವರೆಗಿನ ದಾಖಲೆಯಾಗಿದೆ.
ಎಲ್ಲಾ ರೈತರಿಗೂ ಸಿಕ್ಕಿಲ್ಲ ದರ ಹೆಚ್ಚಳದ ಲಾಭ
ಹೌದು ಅಡಿಕೆ ಧಾರಣೆ ಹೆಚ್ಚಳವಾದರೂ ಎಲ್ಲಾ ರೈತರಿಗೂ ಲಾಭ ಸಿಕ್ಕಿಲ್ಲ, ಮಾರ್ಚ್ ತಿಂಗಳಿನಲ್ಲೇ ಬಹುತೇಕ ರೈತರು ಅಡಿಕೆ ಮಾರಾಟ ಮಾಡುತ್ತಾರೆ. ಇನ್ನೂ ಕೆಲ ರೈತರು ಅಟಿಕೆ ಧಾರಣೆ 50 ಸಾವಿರ ದಾಟುತ್ತಿದ್ದಂತೆ ಮಾರಾಟ ಮಾಡಿದ್ದಾರೆ. ಯಾರೋ ಕೆಲವರಷ್ಟೇ ದಾಸ್ತಾನು ಇಟ್ಟುಕೊಂಡಿದ್ದು ಅವರಿಗೆ ಬಂಪರ್ ಲಾಭ ಸಿಕ್ಕಿದೆ.
ಇನ್ನು ತುಮಕೂರು ಮಾರುಕಟ್ಟೆಯಲ್ಲಿ ಕೂಡ ಅಡಿಕೆ ಬೆಲೆ 56 ಸಾವಿರ ರೂಪಾಯಿ ದಾಟಿದೆ. ಗರಿಷ್ಠ ಬೆಲೆ 56,399 ರೂಪಾಯಿವರೆಗೆ ಮಾರಾಟವಾಗಿದೆ. ಸಾಗರ, ಭದ್ರಾವತಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 55-56 ಸಾವಿರ ರೂಪಾಯಿಗಳಷ್ಟಾಗಿದೆ.
ಜುಲೈ 10ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತುಮಕೂರು | ರಾಶಿ | ₹52,520 | ₹56,399 | ₹54,543 |
| 2 | ಗುಬ್ಬಿ | ರಾಶಿ | ₹50,000 | ₹51,000 | ₹51,000 |
| 3 | ಬಂಟ್ವಾಳ | ಕೋಕಾ | ₹25,500 | ₹26,000 | ₹25,500 |
| 4 | ಬಂಟ್ವಾಳ | ಹಳೆ ವೆರೈಟಿ | ₹46,000 | ₹49,000 | ₹47,500 |
| 5 | ಸೊರಬ | ರಾಶಿ | ₹48,399 | ₹52,509 | ₹51,617 |
| 6 | ಭದ್ರಾವತಿ | ರಾಶಿ | ₹48,199 | ₹55,399 | ₹55,583 |
| 7 | ಶಿವಮೊಗ್ಗ | ರಾಶಿ | ₹39,201 | ₹56,299 | ₹54,979 |
| 8 | ಶಿವಮೊಗ್ಗ | ಸರಕು | ₹50,599 | ₹82,496 | ₹72,640 |
| 9 | ಸಾಗರ | ರಾಶಿ | ₹35,899 | ₹55,599 | ₹54,899 |
ಬೆಲೆ ಕುಸಿತವಾಗುತ್ತಾ?
ಅಡಿಕೆ ಧಾರಣೆ ಏರಿಕೆಯನ್ನು ಗಮನಿಸಿದರೆ ರೈತರಿಗೆ ಖುಷಿಯ ಜೊತೆಗೆ ಆತಂಕವೂ ಇದೆ. ಮುಂದಿನ ದಿನಗಳಲ್ಲಿ ದರ ಕುಸಿತವಾದರೆ ಏನು ಎನ್ನುವ ಭಯವಿದೆ. ಅಡಿಕೆ ದರ ಹೆಚ್ಚಳಕ್ಕೆ ಕಾರಣವೇನು ಎನ್ನುವುದು ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ, ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಹಳದಿ ರೋಗ, ಬಿರು ಬೇಸಿಗೆಯಿಂದ ತೋಟಗಳ ನಾಶ ಮತ್ತು ಇಳುವರಿ ಕಡಿಮೆಯಾಗಿರುವುದು ಕಾರಣವೆಂದರೆ, 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.












Click it and Unblock the Notifications