ಡಿಜೆ, ಕೆಜಿ ಹಳ್ಳಿ, ಶಿವಮೊಗ್ಗ-ಹುಬ್ಬಳ್ಳಿ ಆರೋಪಿಗಳು ಅಮಾಯಕರಾ..? ಸರ್ಕಾರದ ವಿರುದ್ದ ಆರಗ ಜ್ಞಾನೇಂದ್ರ ಹೇಳಿದ್ದೇನು?
ಶಿವಮೊಗ್ಗ, ಜುಲೈ 26: ಡಿಜೆಹಳ್ಳಿ, ಕೆಜಿಹಳ್ಳಿ ಗಂಟೆಗಟ್ಟಲೆ ಹೊತ್ತಿ ಉರಿದಿತ್ತು. ಪೋಲೀಸ್ ಸ್ಟೇಷನ್, ಶಾಸಕರ ಮನೆಗಳು ಹೊತ್ತಿ ಉರಿದವು. ಘಟನೆಗೆ ಕಾರಣರಾದವರನ್ನ ಅಮಾಯಕರು ಎನ್ನುತ್ತಿದ್ದಾರೆ. ಇವರನ್ನು ಅಮಾಯಕರು ಎನ್ನುವುದಾದರೆ ನಿಜವಾದ ಅಮಾಯಕರನ್ನು ಏನೆನ್ನಬೇಕು.? ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತನ್ವೀರ್ ಶೇಠ್ ಗೃಹ ಸಚಿವ ಜಿ.ಪರಮೇಶ್ವರ್ ಗೆ ಪತ್ರ ಬರೆದು, ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಶಿವಮೊಗ್ಗ, ಹುಬ್ಬಳಿ ಗಲಾಟೆ ಪ್ರಕರಣಗಳಲ್ಲಿ ಭಾಗಿಯಾದ ಯುವಕರ ಪ್ರಕರಣಗಳನ್ನ ವಾಪಸ್ ಪಡೆಯಲು ಪರಿಶೀಲಿಸುವಂತೆ ಪತ್ರ ಬರೆದಿದ್ದಾರೆ. ಗೃಹ ಸಚಿವರೂ ಸಹ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದು ಇಂಥವರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ. ಮೊನ್ನೆ ಐದು ಜನರನ್ನು ಬಂಧಿಸುವಾಗ ಓರ್ವ ಆರೋಪಿ ಕಾಂಗ್ರೆಸ್ ಸರ್ಕಾರ ಬಂದಿದೆ ಹುಷಾರ್ ಎಂದು ಪೊಲೀಸರಿಗೆ ಧಮಕಿ ಹಾಕಿದ್ದಾನೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಶಾರಿಕ್ ಗೂ ಭಯೋತ್ಪಾದಕನಲ್ಲ ಎಂದಿದ್ದರು ಡಿ.ಕೆ.ಶಿವಕುಮಾರ್ ಈಗ ಬಂಧಿತರಾಗಿರುವವರನ್ನು ಭಯೋತ್ಪಾದಕರು ಎಂದು ಈಗಲೇ ಹೇಳಲು ಆಗುವುದಿಲ್ಲ ಎನ್ನುತ್ತಾರೆ. ಗ್ರನೇಡ್, ವಾಕಿಟಾಕಿ ಇಟ್ಟುಕೊಂಡವರು ಇವರ ಅಣ್ಣತಮ್ಮಂದಿರಾ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ. ಪೊಲೀಸರು ಸರ್ಕಾರದ ಒತ್ತಡಕ್ಕೆ ಮಣಿದು ಇಂಥವರಿಗೆ ಸಹಕಾರ ನೀಡಿ ತಲೆತಗ್ಗಿಸಬೇಕಾಗುತ್ತದೆ.
ಮಂಗಳೂರಿನಲ್ಲಿ ಮೂರು ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಲಾಗುತ್ತಿದೆ. ಹಿಂದೂಗಳ ಮೇಲೆ ಮಾತ್ರ ಕೇಸ್ ಏಕೆ. ಇನೊಂದು ಕೋಮಿನವರ ಮೇಲೆಯೂ ಕೇಸು ದಾಖಲಿಸಬೇಕಿತ್ತು. ಕಾಂಗ್ರೆಸ್ಸಿಗರು ಈಗಾಗಲೇ ವರ್ಗಾವಣೆ ಅಂಗಡಿ ಓಪನ್ ಮಾಡಿಕೊಂಡಿದ್ದಾರೆ. ಅವರ ಪಕ್ಷದ ಶಾಸಕರೇ ಆರೋಪ ಮಾಡಲಾರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ನಾವು ಕೆಡುವ ಬೇಕಿಲ್ಲ. ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿದರೇ ಕಾಂಗ್ರೆಸ್ಸಿಗರೇ ಕಾಂಗ್ರೆಸನ್ನು ಕೆಡವಲಿದ್ದಾರೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.












Click it and Unblock the Notifications