ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ
ಬೆಂಗಳೂರು, ಆ.23. ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆ.11ರಂದು ನೀಡಿದ್ದ ಮಹತ್ವದ ತೀರ್ಪು ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ.ಟಿ. ರವಿಕುಮಾರ್ ಅವರಿದ್ದ ತ್ರಿಸದಸ್ಯಪೀಠದಪೀಠ ಮುಂದೆ ಮಂಗಳವಾರ ಅರ್ಜಿದಾರರ ಪರ ವಕೀಲರು, ಮೇಲ್ಮನವಿಯ ವಿಷಯವನ್ನು ತಿಳಿಸಿ ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಕನಕರಾಜು ಎಂಬ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಆಲಿಸಲು ಒಪ್ಪಿಗೆ ನೀಡಿತು.
ಹೈಕೋರ್ಟ್ ತೀರ್ಪೇನು?:
ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ರಚನೆ ಮಾಡಿ ಹಿಂದಿನ ಕಾಂಗ್ರೆಸ್ ಸರ್ಕಾರ 2016ರಲ್ಲಿ ಮಾಡಿದ್ದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಆಗಸ್ಟ್ 11ರಂದು ಮಹತ್ವದ ತೀರ್ಪು ನೀಡಿತ್ತು. ಇದರಿಂದಾಗಿ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಅಲ್ಲದೆ, ಲೋಕಾಯುಕ್ತಕ್ಕೆ ಮೊದಲು ನೀಡಿದ್ದ ಅಧಿಕಾರವನ್ನು ಮರಳಿ ನೀಡಬೇಕು, ಅದಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಆಗಬೇಕು ಎಂದು ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ತೀರ್ಪು ಪ್ರಕಟಿಸಿತು.
ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು, ಮೌನಕ್ಕೆ ಶರಣಾದ್ರಲ್ಲ ನಮ್ಮ ಸಿಎಂ
ವಕೀಲರಾದ ಚಿದಾನಂದ ಅರಸ್, ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಪೀಠ ಸುದೀರ್ಘ ತೀರ್ಪು ನೀಡಿದೆ.
ವಾದ-ಪ್ರತಿವಾದ ಆಲಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್ ಎಸಿಬಿ ರಚನೆಯನ್ನೇ ರದ್ದುಗೊಳಿಸಿದೆ.
ಕಾನೂನು ತಿದ್ದುಪಡಿ ಮಾಡಬೇಕು
ಸದ್ಯ ಎಸಿಬಿಯ ಮುಂದಿರುವ ಎಲ್ಲ ಕೇಸ್ ಲೋಕಾಯುಕ್ತಕ್ಕೆ ವರ್ಗಾವಣೆಗೊಳ್ಳಲಿವೆ. ಎಸಿಬಿ ಈವರೆಗೂ ನಡೆಸಿರುವ ತನಿಖೆಯು, ವಿಚಾರಣೆಯು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿದೆ. ಎಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳು ಪುನರ್ ಸ್ಥಾಪನೆಯಾಗಲಿವೆ. ಎಸಿಬಿಯಲ್ಲಿರುವ ಪೊಲೀಸರು ಲೋಕಾಯುಕ್ತ ಅಡಿಗೆ ಬರಲಿವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು, ಅದಕ್ಕೆ ಕಾನೂನು ತಿದ್ದುಪಡಿ ಮಾಡಬೇಕು. ಜಾತಿ ಧರ್ಮ ಬಿಟ್ಟು ಪ್ರಾಮಾಣಿಕವಾಗಿವವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು, ಎಸಬಿಯಲ್ಲಿರುವ ಪೊಲೀಸರನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಎಸಿಬಿ ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಸ್ವೀಕರಿಸುತ್ತಿಲ್ಲ
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಎಸಿಬಿ ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಅತ್ತ ಲೋಕಾಯುಕ್ತ ಸಂಸ್ಥೆ ಕೂಡ ಭ್ರಷ್ಟಾಚಾರ, ಲಂಚಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಬೊಮ್ಮಾಯಿ ಸರ್ಕಾರದ ದ್ವಂದ ನೀತಿಯಿಂದಾಗಿ ರಾಜ್ಯದಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ರಾಜ್ಯ ಸರ್ಕಾರದ ಜಾಣ ನಡೆಯಿಂದಾಗಿ ಭ್ರಷ್ಟರು ರಾಜಾರೋಷವಾಗಿ ಲಂಚ ಸ್ವೀಕರಿಸಲು ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ
ಪ್ರಕರಣದ ಹಿನ್ನೆಲೆ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗುವ ಪ್ರಕರಣ ತನಿಖೆಗೆ ಎಸಿಬಿಯನ್ನು ರಚನೆ ಮಾಡಿ 2016ರ ಮಾರ್ಚ್ 14ರಂದು ಅಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. 2016ರ ಮಾರ್ಚ್ 19ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದು ಆದೇಶಿಸಲಾಗಿತ್ತು. ಈ ಆದೇಶಗಳನ್ನು ಪ್ರಶ್ನಿಸಿ 2016ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಎಸಿಬಿ, ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ಅನುಗುಣವಾಗಿ ರಚನೆಯಾಗಿಲ್ಲ. ಪೊಲೀಸ್ ಠಾಣೆ ಸ್ಥಾನಮಾನ ನೀಡಲು ಈ ಕಾಯ್ದೆಯಡಿಯಲ್ಲೇ ಅಧಿಸೂಚನೆ ಹೊರಡಿಸಬೇಕು. ಆದರೆ ರಾಜಕೀಯ ಉದ್ದೇಶಗಳಿಂದ ಇದನ್ನು ರಚನೆ ಮಾಡಲಾಗಿದೆ. ಹಾಗೂ ಎಸಿಬಿಗೆ ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿ ಇಲ್ಲ' ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.
ಲೋಕಾಯುಕ್ತರ ವಾದ ಏನಾಗಿತ್ತು
ಲೋಕಾಯುಕ್ತ ಪರ ಹಿರಿಯ ವಕೀಲರು, ಎಸಿಬಿ ರಚನೆ ಮಾಡುವ ಮೂಲಕ ಸರ್ಕಾರ ಲೋಕಾಯುಕ್ತಕ್ಕೆ ನೀಡಿದ್ದ ಪೊಲೀಸ್ ತನಿಖಾಧಿಕಾರವನ್ನು ಕಿತ್ತುಕೊಂಡಿದೆ. ಲೋಕಾಯುಕ್ತದ ಅಧಿಕಾರಗಳನ್ನು ದುರ್ಬಲಗೊಳಿಸಲಾಗಿದೆ. ಇದರಿಂದಾಗಿ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ' ಎಂದು ತಿಳಿಸಿದರು.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವೂ ಕಾರ್ಯ ನಿರ್ವಹಿಸುತ್ತಿಲ್ಲ. ಇತ್ತ ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ವಿಲೀನ ಕಾರ್ಯವೂ ಆಗದೇ ಲೋಕಾಯುಕ್ತ ಸಂಸ್ಥೆಯೂ ಕೈ ಕಟ್ಟಿ ಕೂತಿದೆ. ಇದನ್ನ ಅರಿತ ಭ್ರಷ್ಟ ಅಧಿಕಾರಿಗಳು ಲಂಚಾವತಾರದಲ್ಲಿ ತೊಡಗಿದ್ದಾರೆ. ಬಹಿರಂಗವಾಗಿ ಲಂಚ ಸ್ವೀಕರಿಸಿದರು ಅವರನ್ನು ಕೇಳುವರೇ ಇಲ್ಲದಂತಾಗಿದೆ. ಭ್ರಷ್ಟಾಚಾರ ಸಂಬಂಧ ದೂರುಗಳನ್ನು ಸ್ವೀಕರಿಸಿ ಕಾರ್ಯಚರಣೆ ನಡೆಸುವವರೇ ಇಲ್ಲದಂತಾಗಿದೆ. ಹೀಗಾಗಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರು ಕೊಡಲಾಗದ ಕಾಲ ಒದಗಿ ಬಂದಿದೆ.