ಅನುಪಮಾ ಶೆಣೈ ರಾಜೀನಾಮೆ : ಮೌನ ಮುರಿದ ಪರಮೇಶ್ವರ ನಾಯಕ್
ಬೆಂಗಳೂರು, ಜೂನ್ 08 : 'ಕೂಡ್ಲಿಗಿಯಲ್ಲಿ ಯಾವುದೇ ಲಿಕ್ಕರ್ ಮಾಫಿಯಾ ನಡೆಯುತ್ತಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಸವಾಲು ಹಾಕಿದರು.
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ರಾಜೀನಾಮೆಗೆ ಸಚಿವ ಪರಮೇಶ್ವರ ನಾಯಕ್ ಅವರು ಕಾರಣ ಎಂದು ಆರೋಪಿಸಲಾಗುತ್ತಿದೆ. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವಿರುದ್ಧದ ಆರೋಪಗಳಿಗೆ ಸಚಿವರು ಉತ್ತರ ನೀಡಿದರು. 'ವಿರೋಧ ಪಕ್ಷದವರು ವಾಸ್ತವ ಸ್ಥಿತಿ ಅರಿತು ಮಾತನಾಡಲಿ' ಎಂದು ಸಲಹೆ ಕೊಟ್ಟರು. [ಅನುಪಮಾ, ಹುಡುಕಾಟಕ್ಕೆ ತಂಡ ರಚನೆ]

ಸಂದರ್ಶನದಲ್ಲಿ ಪರಮೇಶ್ವರ ನಾಯಕ್ ಹೇಳಿದ್ದೇನು? ['ಕೊಲೆ ಬೆದರಿಕೆ ಹಾಕ್ತೀರಾ? ದೆವ್ವವಾಗಿ ಬಂದು ಕಾಡ್ತೀನಿ']
* 'ಅನುಪಮಾ ಶೆಣೈ ಅವರ ಮೇಲೆ ನನಗೆ ದ್ವೇಷ ಇಲ್ಲ. ಅವರ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
ಅವರು ಒಳ್ಳೆಯವರು, ಕೆಟ್ಟವರು ಎಂದು ನಾನು ಪ್ರಮಾಣ ಪತ್ರ ಕೊಡುವುದಿಲ್ಲ'.
* 'ನನ್ನ ಬಗ್ಗೆ ಯಾವ ಸಿಡಿಯನ್ನಾದರೂ ಬಿಡುಗಡೆ ಮಾಡಲಿ. ಆಡಿಯೋವಾದರೂ ಬಿಡುಗಡೆ ಮಾಡಲಿ ನನಗೆ ಭಯವಿಲ್ಲ, ಆತಂಕವಿಲ್ಲ. ನಾನು ಏನು ಎಂಬುದು ಹಿಂದಿನಿಂದಲೂ ನನ್ನನ್ನು ನೋಡಿದ ಕಾರ್ಯಕರ್ತರಿಗೆ ತಿಳಿದಿದೆ'.
* 'ಕೂಡ್ಲಿಗಿಯಲ್ಲಿ ಲಿಕ್ಕರ್ ವ್ಯವಹಾರ ನಡೆಯುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಮಾಫಿಯಾ ನಡೆಯುತ್ತಿರುವುದು ಎಲ್ಲಿಂದ?'.
* 'ಬಳ್ಳಾರಿ ರಿಪಬ್ಲಿಕನ್ ಎಂದೂ ಏನೂ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಬಳ್ಳಾರಿಯಲ್ಲಿ ಗೂಂಡಾಗಿರಿ, ದಬ್ಬಾಳಿಕೆ ನಿಲ್ಲಿಸಿದ್ದೇವೆ. ಜನರು ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ'.
* 'ರಾಜೀನಾಮೆ ಕೇಳುವುದೇ ವಿರೋಧ ಪಕ್ಷದವರ ಕೆಲಸ. ವಿರೋಧ ಪಕ್ಷದ ಹಿರಿಯ ನಾಯಕರಿಗೆ ಬಳ್ಳಾರಿಯ ಪರಿಸ್ಥಿತಿ ಬಗ್ಗೆ ಏನೂ ತಿಳಿದಿಲ್ಲ. ಅವರೆಲ್ಲ ಹಿರಿಯರು, ವಾಸ್ತವ ಪರಿಸ್ಥಿತಿ ತಿಳಿದುಕೊಂಡು ಮಾತನಾಡಲಿ'.
* 'ನನ್ನ ರಾಜೀನಾಮೆ ಕೇಳಲು ಅನುಪಮಾ ಶೆಣೈ ಯಾರು?. ನನ್ನ ರಾಜೀನಾಮೆ ಕೇಳಲು ಅವರು ಹೈಕಮಾಂಡ್ ಅಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಲಿ'.












Click it and Unblock the Notifications