ಮಂಡ್ಯದಲ್ಲಿ 80 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ
ಮಂಡ್ಯ, ಡಿ. 18: ಸಾರ್ವಜನಿಕರಿಗೆ ವಿತರಿಸಲು ಸರ್ಕಾರ ನೀಡಿದ್ದ ಸುಮಾರು 80 ಕ್ವಿಂಟಲ್ ಪಡಿತರ ಅಕ್ಕಿ ಕರಸವಾಡಿಯ ಗಣೇಶ ಅಕ್ಕಿ ಗಿರಣಿಗೆ ಸೇರಿದ ಗೋದಾಮಿನಲ್ಲಿ ಗುರುವಾರ ಪತ್ತೆಯಾಗಿದೆ.
ಖಚಿತ ಮಾಹಿತಿಯ ಮೇರೆಗೆ ಗುರುವಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆಂದು ಮಂಡ್ಯ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ಅಕ್ಕಿಯನ್ನು ಹಳೆ ಬುದನೂರು ಹಾಗೂ ಇತರ ಗ್ರಾಮಗಳಲ್ಲಿರುವ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಶನ್ ಪ್ರೊಡಕ್ಷನ್ ಆ್ಯಂಡ್ ಟ್ರೇನಿಂಗ್ ಸೆಂಟರ್ನಿಂದ ವಶಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ. [ಅನ್ನಭಾಗ್ಯ ಬಗ್ಗೆ ದೂರಿದ್ದರೆ ಕರೆ ಮಾಡಿ]
ರಾಜ್ಯದ ವಿವಿಧೆಡೆ ಪತ್ತೆ : ರಾಜ್ಯ ಸರ್ಕಾರವು ಪಡಿತರ ಯೋಜನೆಯಡಿ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ವಿವಿಧೆಡೆ ಆಗಾಗ ಅನ್ನಭಾಗ್ಯ ಅಕ್ಕಿಗಳ ಅಕ್ರಮ ಸಂಗ್ರಹ ಪತ್ತೆಯಾಗುತ್ತಲೇ ಇವೆ. ಈ ಅಕ್ರಮದ ತಡೆಗೆ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.