ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಆರಂಭವಾಗಿ ಒಂದು ವರ್ಷ ಕಳೆಯುತ್ತಾ ಬಂತು. ಯೋಜನೆ ಬಗ್ಗೆ ರಾಜ್ಯದಲ್ಲಿ ಹಲವಾರು ದೂರುಗಳು ಕೇಳಿ ಬರುತ್ತಿವೆ. ಯೋಜನೆ ಅದಕ್ಕಿಂತ ಹೆಚ್ಚಾಗಿ ಯಶಸ್ವಿಯಾಗಿದ್ದು, ಬಡಜನರ ಹಸಿವಿನ ಚಿಂತೆಯನ್ನು ದೂರಮಾಡಿದೆ ಎಂಬುದು ಸತ್ಯ.
"ನಮ್ಮ ಕುಟುಂಬದಲ್ಲಿ ಈಗ ಊಟ-ತಿಂಡಿಗೆ ಚಿಂತೆ ಇಲ್ಲ. ಏಕೆಂದರೆ ಪ್ರತಿ ತಿಂಗಳು ಮೊದಲ ವಾರದಲ್ಲೇ ನಮಗೆ 30 ಕೆ.ಜಿ. ದವಸ ಕೇವಲ 30 ರೂ.ಗಳಿಗೆ ಸಿಗುತ್ತದೆ. ಅನ್ನಭಾಗ್ಯ ಯೋಜನೆಯಿಂದ ನಮಗೆ ಅನ್ನದ ಚಿಂತೆಯಿಂದ ಮುಕ್ತಿ ಸಿಕ್ಕಿದೆ". ಎಂದು ಹೇಳುತ್ತಾರೆ ಲಕ್ಷ್ಮಮ್ಮ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಕುರಿತಂತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ 65 ವರ್ಷದ ಲಕ್ಷ್ಮಮ್ಮ ಅವರು ಅನ್ನಭಾಗ್ಯ ಯೋಜನೆಯ ಕುರಿತು ಪ್ರಾಮಾಣಿಕವಾಗಿ ಹೇಳಿದ ಮಾತುಗಳಿವು. ಸರ್ಕಾರದ ಒಂದು ಯೋಜನೆ ಜನರನ್ನು ಹೇಗೆ ತಲುಪಿದೆ ಎಂದಬುದಕ್ಕೆ ಇದು ಉತ್ತಮ ಉದಾಹರಣೆ.
ಮನೆಯಲ್ಲಿ ದುಡಿಯುವ ಪುರುಷರಿಲ್ಲ : ಲಕ್ಷ್ಮಮ್ಮ ಅವರದ್ದು ತುಂಬು ಕುಟುಂಬ. ಆದರೆ, ಮನೆಯಲ್ಲಿ ದುಡಿಯುವ ಪುರುಷರಿಲ್ಲ. 80 ವರ್ಷದ ತಿಮ್ಮಮ್ಮ, ಐದು ವರ್ಷದ ಮಗು ಸಿಂಧು ಸೇರಿದಂತೆ ಕುಟುಂಬದಲ್ಲಿ ಒಟ್ಟು 8 ಜನರಿದ್ದಾರೆ. 2 ಹಸುಗಳನ್ನು ಹೊರತು ಪಡಿಸಿದರೆ, ಜೀವನಾಧಾರಕ್ಕೆ ಹೇಳಿಕೊಳ್ಳುವಂತಹ ಆದಾಯದ ಮೂಲವಿಲ್ಲ.
ಕೂಲಿ ಮಾಡಿ ಕುಟುಂಬ ಬದುಕು ಸಾಗಿಸುತ್ತಿದೆ. ಆದರೆ, ಎಲ್ಲಾ ಕಾಲದಲ್ಲೂ ಕೂಲಿ ಸಿಗುವುದಿಲ್ಲ. ಕೂಲಿ ದೊರೆಯದಿದ್ದ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಕುಟುಂಬದವರು ಪರದಾಡಬೇಕಾಗಿಲ್ಲ. ಅನ್ನಭಾಗ್ಯ ಯೋಜನೆ ಈ ಕುಟುಂಬದ ಹಸಿವಿನ ಚಿಂತೆಯನ್ನು ದೂರ ಮಾಡಿದೆ.

ಕಷ್ಟದ ನೆನೆಪು ಮಾಡಿಕೊಂಡ ಕುಟುಂಬ : ಅನ್ನಭಾಗ್ಯ ಯೋಜನೆ ಇಲ್ಲದ ದಿನಗಳನ್ನು ನೆನಪು ಮಾಡಿಕೊಂಡ ಲಕ್ಷ್ಮಮ್ಮ ಕುಟುಂಬದ ಹಿಂದೆ ಬರಗಾಲ ಇದ್ದ ಸಂದರ್ಭದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೇವೆ. ಕೂಲಿ ಸಿಗುತ್ತಿರಲಿಲ್ಲ. ಮೇವಿನ ಕೊರತೆಯಿಂದ ಹಸುಗಳು ಸರಿಯಾಗಿ ಹಾಲು ಕೊಡುತ್ತಿರಲಿಲ್ಲ. ಕುಟುಂಬದಲ್ಲಿನ ಎಂಟು ಜನರ ಹೊಟ್ಟೆ ತುಂಬಿಸುವುದು ದುಸ್ತರವಾಗಿತ್ತು ಎಂದು ಹೇಳುತ್ತಾರೆ.
ಒಂದು ಕೆಜಿ ಅಕ್ಕಿ ಖರೀದಿ ಮಾಡಲು 30-40 ರೂ. ಕೊಡಬೇಕಾಗಿತ್ತು. ಕೂಲಿಯಿಂದ ಬರುವ ಆದಾಯದಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ದವಸಕ್ಕಾಗಿ ಖರ್ಚು ಮಾಡುತ್ತಿದ್ದೆವು. ಬದುಕು ತುಂಬಾ ದುಸ್ತರ ಎನಿಸುತ್ತಿತ್ತು. ಈಗ 30 ರೂ.ಗೆ 30 ಕೆಜಿ ಅಕ್ಕಿಸಿಗುತ್ತಿದೆ ಎಂದು ಲಕ್ಷ್ಮಮ್ಮ ಸಂತಸದಿಂದ ಹೇಳಿಕೊಳ್ಳುತ್ತಾರೆ. [ಚಿತ್ರ ಮಾಹಿತಿ : ಕರ್ನಾಟಕ ವಾರ್ತಾ ಇಲಾಖೆ]












Click it and Unblock the Notifications