ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಸಾಹಿತಿಗಳು
ಬೆಂಗಳೂರು, ಏ. 3 : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಲಿಸುವುದಾಗಿ ಬುದ್ಧಿಜೀವಿಗಳು ಹೇಳಿದ್ದಾರೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ನಡೆಸುವುದಾಗಿ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿ ಮುಂತಾದವರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಮಕಾಲೀನ ವಿಚಾರ ವೇದಿಕೆ ಸದಸ್ಯರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇವೆ ಎಂದು ಹೇಳಿದರು. ಆರ್ ಎಸ್ಎಸ್ ಮುಖವಾಡ ಹೊಂದಿರುವ ಮೋದಿ ಪ್ರಧಾನಿಯಾಗಬಾರದು ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಸಮಕಾಲೀನ ವಿಚಾರ ವೇದಿಕೆಯ ಪತ್ರಿಕಾಗೋಷ್ಠಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯುಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಸಾಹಿತಿಗಳಾದ ವಸುಂಧರ ಭೂಪತಿ, ನಟ ಮಾವಳ್ಳಿ ಶಂಕರ್ ಮುಂತಾದವರು ಪಾಲ್ಗೊಂಡಿದ್ದರು. ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದೇವೆ ಎಂದು ಸಾಹಿತಿಗಳು ಹೇಳಿದರು. [ನಿಲೇಕಣಿ ಪರ ಕಾರ್ನಾಡ್ ಪ್ರಚಾರ]
ಅನಂತಮೂರ್ತಿ ಹೇಳಿದ್ದೇನು : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಆರ್ ಅನಂತಮೂರ್ತಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರ್ ಎಸ್ಎಸ್ ಮುಖವಾಡ ಹಾಕಿಕೊಂಡವರು. ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಬರೀ ಸುಳ್ಳು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆದ್ದರಿಂದ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. [ಯುಆರ್ ಎ, ಕಾರ್ನಾಡ್ ಜ್ಞಾನಪೀಠಕ್ಕೆ ಅರ್ಹರಲ್ಲ]
ಕಾರ್ನಾಡ್ ಹೇಳಿದ್ದಿಷ್ಟು : ಕಾಂಗ್ರೆಸ್ ಬೆಂಬಲಿಸುತ್ತೇವೆ ಎಂದು ಹೇಳಿದ ಸಾಹಿತಿ ಗಿರೀಶ್ ಕಾರ್ನಾಡ್ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. 20 ವರ್ಷದಿಂದ ಬೆಂಗಳೂರಿಗೆ ಅನಂತ್ ಕುಮಾರ್ ಏನು ಕೊಡುಗೆ ನೀಡಿಲ್ಲ. ಸದಾ ಉತ್ತರ ಭಾರತದ ಕಡೆ ಮುಖ ಮಾಡಿಕೊಂಡಿರುವ ಅವರು ಉತ್ತರ ಕುಮಾರ ಎಂದು ವಾಗ್ದಾಳಿ ನಡೆಸಿದರು.
ನಮಗೆ ಬೆಂಗಳೂರು ಅಭಿವೃದ್ಧಿ ಮಾಡುವ ಅಭ್ಯರ್ಥಿಗಳು ಬೇಕು, ಸದಾ ದೆಹಲಿ ಮತ್ತು ಉತ್ತರ ಭಾರತದಲ್ಲಿರುವವರು ಬೇಡ ಆದ್ದರಿಂದ ನಂದನ್ ನಿಲೇಕಣಿ ಅವರನ್ನು ಬೆಂಬಲಿಸುತ್ತೇವೆ ಎಂದರು. ನಂದನ್ ನಿಲೇಕಣಿ ಪರವಾಗಿ ಪ್ರಚಾರ ನಡೆಸುತ್ತೇವೆ ಎಂದು ಕಾರ್ನಾಡ್ ಹೇಳಿದರು. ನಂದನ್ ನಿಲೇಕಣಿಯಂತಹ ಪ್ರಾಮಾಣಿಕ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಅವರು ಕರೆ ನೀಡಿದರು.