ಅನಂತ್ ಕುಮಾರ್ ವಿಧಿವಶ: ಜನಾರ್ದನ ರೆಡ್ಡಿಗೆ ಬೇಲ್ ಇಲ್ಲ
ಬೆಂಗಳೂರು, ನವೆಂಬರ್ 12: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಕಾರಣ ಜನಾರ್ದನ ರೆಡ್ಡಿ ಇಂದು ಜೈಲಿನಲ್ಲೇ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅನಂತ್ಕುಮಾರ್ ಅವರ ನಿಧನದ ಕಾರಣ ಇಂದು 1 ನೇ ಎಸಿಎಂಎಂ ಸೆಷನ್ಸ್ ನ್ಯಾಯಾಲಯದ ಎಲ್ಲಾ ಕಲಾಪಗಳಿಗೆ ರಜೆ ಘೋಷಿಸಲಾಗಿದೆ ಹಾಗಾಗಿ ರೆಡ್ಡಿ ಅವರ ವಕೀಲರಿಗೆ ಇಂದು ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902
ನಿನ್ನೆ ಸಿಸಿಬಿಯಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರೆಡ್ಡಿ ಅವರಿಗಾಗಿ ಇಂದು ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸಲಾಗಿತ್ತು. ಆದರೆ ಅನಂತ್ಕುಮಾರ್ ನಿಧನದ ಕಾರಣ ಇಂದು ಜಾಮೀನು ಅರ್ಜಿ ಸಲ್ಲಿಸಲಾಗುತ್ತಿಲ್ಲ.
ಹಾಗಾಗಿ ಇಂದು ಪೂರ್ತಿ ರೆಡ್ಡಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ಒದಗಿ ಬಂದಿದೆ. ನಿನ್ನೆ ಸಹ ಅವರು ಪರಪ್ಪನ ಅಗ್ರಹಾರದಲ್ಲಿಯೇ ರಾತ್ರಿ ಕಳೆದಿದ್ದಾರೆ.
ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ
ನಾಳೆ ರೆಡ್ಡಿ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಅವರು ಆಂಬಿಡೆಂಟ್ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಆರನೇ ಆರೋಪಿ ಆಗಿದ್ದಾರೆ. ಲಂಚ ಪಡೆದ ಮತ್ತು ನೀಡಿದ ಆರೋಪ ಸೇರಿದಂತೆ ಇನ್ನೂ ಕೆಲವು ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.