ಆನಂದಯಾನ 2022: ಆರ್ಥಿಕ ಹಿಂದುಳಿದ ಒಳಿತಿಗಾಗಿ ಮ್ಯಾರಾಥಾನ್
ಬೆಂಗಳೂರು, ಜೂ. 06: ಸೂರ್ಯ ಹುಟ್ಟುವ ಮುನ್ನವೇ ಅಲ್ಲಿ ಹರ್ಷೋದ್ಗಾರ.. ಗುರಿ ಮುಟ್ಟುವ ತವಕ... ಹೆಜ್ಜೆ ಹೆಜ್ಜೆಯಲ್ಲೂ ಮಂದಹಾಸದ ನಗು, ಸ್ಪೂರ್ತಿಯ ಮಾತುಗಳು ಇದೇ ಆನಂದಯಾನ. ಮಾತ್ರವಲ್ಲ ಈ ಯಾನದ ಹಿಂದೆ ಒಂದು ಮಹತ್ವದ ಉದ್ದೇಶವೂ ಇತ್ತು.
ಭಾನುವಾರ ಬೆಳಗ್ಗೆ ಸರ್ಜಾಪುರ ರಸ್ತೆಯ ಮಳ್ಳೂರಿನಲ್ಲಿ ನಡೆದ ಆನಂದಯಾನ 2022ರ ಚಿತ್ರಣವಿದು. ಸ್ನೇಹದಾನ್ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಈ ಆನಂದಯಾನದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಕೋವಿಡ್ ನಿಂದ ಎರಡು ವರ್ಷ ಸ್ಥಗಿತಗೊಂಡಿತ್ತು. ಈ ಭಾರಿ ಆಯೋಜಿಸಿದ್ದ ಆನಂದಯಾನ 2022 ಮ್ಯಾರಥಾನ್ ನಲ್ಲಿ ನೂರಾರು ಮಂದಿ ಸ್ವಯಂ ಪ್ರೇರಿತವಾರಿ ಪಾಲ್ಗೊಂಡಿದ್ದರು.
ಐದು ಕಿ.ಮೀ. ದೂರ ಹಾಗೂ ಹತ್ತು ಕಿ.ಮೀ. ದೂರ ಎರಡು ವಿಭಾಗದಲ್ಲಿ ಆನಂದಯಾನ ಆಯೋಜಿಸಲಾಗಿತ್ತು. ಶಾಲಾ ಮಕ್ಕಳು, ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು, ಹಿರಿಯ ನಾಗರಿಕರು ಈ ಆನಂದ ಯಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 6.35 ಕ್ಕೆ ಈ ಮಹಾಯಾನ ಆರಂಭವಾಯಿತು.
ಇದಕ್ಕೂ ಮುನ್ನ ನೂರಾರು ಸ್ವಯಂ ಸೇವಕರು ಬೆಳಗಿನ ಜಾವ ಐದು ಗಂಟೆಗೆ ಬಂದು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆನಂದಯಾನದಲ್ಲಿ ಪಾಲ್ಗೊಂಡವರಿಗೆ ಮಾರ್ಗದರ್ಶನ ನೀಡಿದರು. ಅವರ ಬೇಕು ಬೇಡುಗಳಿಗೆ ಕೊನೆ ವರೆಗೂ ಸ್ಪಂದಿಸಿದು. ಈ ಆನಂದಯಾನದಲ್ಲಿ ಒನ್ ಇಂಡಿಯಾ, ಒನ್ ಇಂಡಿಯಾ ಕನ್ನಡ, ಡೈಲಿಹಂಟ್ ಬಳಗ ಕೂಡ ಕೈ ಜೋಡಿಸಿ ಎಲ್ಲಾ ಉದ್ಯೋಗಿಗಳು ಪಾಲ್ಗೊಂಡಿದ್ದರು.
ನಿವೃತ್ತ ಬ್ರಿಗೇಡಿಯರ್ ವೆಂಕಟರಾಮನ್ ಮತ್ತು ಅವರ ಪತ್ನಿ ಶಾರದಾ ಅವರು ಕೂಡ ಈ ಮಹಾಯಾನದಲ್ಲಿ ಹೆಜ್ಜೆ ಹಾಕಿ ಯುವಕರಿಗೆ ಸ್ಫೂರ್ತಿ ತುಂಬಿದರು. ಮತ್ತೊಬ್ಬ ಹಿರಿಯ ನಾಗರಿಕರಾದ ವಿಜಯ್ ಕುಮಾರ್ ಅವರು ಮ್ಯಾರಥಾನ್ ಓಟ ಮುಗಿಸಿ ಇತರರಿಗೆ ಸ್ಫೂರ್ತಿ ತುಂಬಿದರು. ಪುಟಾಣಿಗಳು, ಮಹಿಳೆಯರು, ಪುರುಷರು ಸಾಕಷ್ಟು ಸಂಖ್ಯೆಯಲ್ಲಿ ಈ ಮ್ಯಾರಾಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಮಾತ್ರ ಮುಗಿಯಲಿಲ್ಲ ಈ ಮ್ಯಾರಥಾನ್. ಬ್ಯಾಂಡ್ ನ ಹಾಡುಗಳಿಗೆ ಮಕ್ಕಳು ಡ್ಯಾನ್ ಮಾಡಿ ಕುಣಿದು ಕುಪ್ಪಳಿಸಿದರು.
ನಗು, ಸಂಭ್ರಮ, ಉತ್ಸಾಹ, ಫಿಟ್ನೆಸ್ ಗೆ ಕಾರಣವಾಗಿದ್ದ ಆನಂದಯಾನ 2022 ಆಯೋಜನೆ ಹಿಂದೆ ದೊಡ್ಡ ಕಾರಣವಿತ್ತು. ಈ ಯಾನದ ಮೂಲ ಉದ್ದೇಶ ಅಥಿರ್ಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಸಂಗ್ರಹಿಸುವುದಾಗಿತ್ತು. ಈ ಯಾನದಲ್ಲಿ ಪಾಲ್ಗೊಳ್ಳಲು ಪಾವತಿಸಿದ ಸದಸ್ಯತ್ವದ ಶುಲ್ಕ ಅನಾಥ ಹಾಗೂ ಹಿಂದುಳಿದ ಮಕ್ಕಳ ಕಲಿಕೆಗೆ ಬಳಸಲಾಗುತ್ತದೆ. ಅಂತೂ ಫನ್, ಫಿಟ್ನೆಸ್ ನಿಂದ ಕೂಡಿದ್ದ ಈ ಆನಂದಯಾನ ವಿಶ್ವ ಪರಿಸರ ದಿನವೇ ಆಯೋಜಿಸಿದ್ದು ಮತ್ತೊಂದು ವಿಶೇಷ. ಅದೂ ಮಕ್ಕಳ ಭವಿಷ್ಯಕ್ಕಾಗಿ ಆಯೋಜಿಸಿದ್ದು ಇದರ ಮೂಲ ಉದ್ದೇಶ.