ಪ್ರಜ್ಞಾವಂತ ಮತದಾರರಿಗೆ ದೇವೇಗೌಡರ ಭಾವನಾತ್ಮಕ ಬಹಿರಂಗ ಪತ್ರ
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಾಡಿನ ಸಮಸ್ತ ಮತದಾರರಿಗೆ ಆತ್ಮೀಯ ಪತ್ರವೊಂದನ್ನು ಬರೆದಿದ್ದಾರೆ. ಗೌಡರ ಪತ್ರ, ಎಲ್ಲಾ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿದೆ. ಅದರ ಸಾರಾಂಶ ಇಂತಿದೆ.
' ನನ್ನ ಅರವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಸಂಸದನಾಗಿ, ಸಿಎಂ ಆಗಿ, ಪ್ರಧಾನಿಯಾಗಿ, ಕೆಲಸ ಮಾಡಲು ಸಿಕ್ಕಿದ ಅವಕಾಶ ಜನತಂತ್ರದ ಸೊಬಗು ಮತ್ತು ನಿಮ್ಮೆಲ್ಲರ ಆಶೀರ್ವಾದದ ಫಲ'.
'ಹದಿನೆಂಟು ತಿಂಗಳು ಸಿಎಂ ಆಗಿ, ಹತ್ತು ತಿಂಗಳು ಪ್ರಧಾನಿಯಾಗಿ ಸಿಕ್ಕ ಅವಕಾಶದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಮತ್ತು ಈ ನಾಡಿಗೆ ಅಂಟದಂತೆ ಪ್ರಾಮಾಣಿಕ, ಪಾರದರ್ಶಕ, ದಕ್ಷ ಆಡಳಿತ ನೀಡಿದ್ದೇನೆಂಬ ಆತ್ಮತೃಪ್ತಿ ನನಗಿದೆಯೇ ಹೊರತು, ಇದು ಖಂಡಿತ ದುರಂಹಕಾರದ ಮಾತಲ್ಲ'.

'ನನ್ನ ಈ ಇಳಿವಯಸ್ಸಿನಲ್ಲಿ ನನ್ನ ಬಗ್ಗೆ ಲಘುವಾಗಿ, ಹಗುರವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನನಗೆ ಸಿಟ್ಟಿಲ್ಲ, ಮರುಕವಿದೆ. ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ನನ್ನ ಭಾವಚಿತ್ರವನ್ನು ಎಸ್ ಎಂ ಕೃಷ್ಣ, ಯಡಿಯೂರಪ್ಪ ಅವರಾಗಲಿ ತೆಗೆದು ಹಾಕಲಿಲ್ಲ, ಬದಲಿಗೆ ಈಗಿನ ಮುಖ್ಯಮಂತ್ರಿಗಳು ಆ ಕೆಲಸವನ್ನು ಮಾಡಿದರು. ಆದರೂ, ಅವರ ಬಗ್ಗೆ ನನಗೆ ಸಿಟ್ಟಿಲ್ಲ'.
'ಹತ್ತು ತಿಂಗಳು ಪ್ರಧಾನಿಯಾಗಿ, ಕರ್ನಾಟಕಕ್ಕೆ ಕೊಟ್ಟ ಕೊಡುಗೆಯ ದೊಡ್ಡ ಪಟ್ಟಿಯನ್ನು ನಾನು ಮುಂದಿಡಬಯಸುವುದಿಲ್ಲ. ರಾಜ್ಯದ ನೀರಾವರಿ ಯೋಜನೆಗೆ 25ಸಾವಿರ ಕೋಟಿ ರೂಪಾಯಿ ಹಣ ನೀಡಿದ್ದನ್ನು ನಾಡಿನ ರೈತಾಪಿ ವರ್ಗ ಮರೆಯಬಾರದು'.
'ಮೇ ಹನ್ನೆರಡರಂದು ನೀವು ತೆಗೆದುಕೊಳ್ಳುವ ನಿರ್ಧಾರ, ನೀಡುವ ಮತ, ಕರ್ನಾಟಕವನ್ನು ಉಳಿಸಲಿ, ರಾಷ್ಟ್ರೀಯ ಪಕ್ಷಗಳಿಗೆ ಪಾಠವಾಗಲಿ ಎಂದು ಕೋರುತ್ತಾ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿಮ್ಮ ಆಯ್ಕೆಯಾಗಲಿ ಎಂದು ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ'.












Click it and Unblock the Notifications