ಕಾಂಗ್ರೆಸ್ ಗೆದ್ದರೆ ಗಲಭೆ ಗ್ಯಾರಂಟಿ: ಅಭಿವೃದ್ಧಿ ವಿಚಾರ ಮಾತನಾಡುವುದು ಬಿಟ್ಟು ಹಳೆಯ ಚಾಳಿ ಮುಂದುವರಿಸಿದ ಅಮಿತ್ ಶಾ
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ. ಅವರು ಚುನಾವಣಾ ರ್ಯಾಲಿಗಳು, ರೋಡ್ ಶೋಗಳು ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವರ ಮಾತುಗಳು ಮಾತ್ರ ಹಳೆಯ ನಿರೂಪಣೆಗೆ ಜೋತು ಬಿದ್ದಿವೆ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.
ಅಮಿತ್ ಶಾ ಹೇಳಿದ್ದೇನು?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದರೆ, ರಾಜ್ಯದಲ್ಲಿ ಗಲಭೆಗಳು ಆವರಿಸಿಕೊಳ್ಳಲಿವೆ ಎಂದು ಹೇಳಿದ್ದಾರೆ. ವಂಶಾಡಳಿತವು ರಾಜಕೀಯ ರಂಗದಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ರಚನೆಯಾದರೆ ಕರ್ನಾಟಕದ ಅಭಿವೃದ್ಧಿಯೂ 'ರಿವರ್ಸ್ ಗೇರ್' ಗೆ ಹೋಗುತ್ತದೆ ಎಂದು ಶಾ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ.
ಮೇ 10 ರಂದು ಮತದಾನ ನಡೆಯಲಿರುವ ಕರ್ನಾಟಕದಲ್ಲಿ ರಾಜಕೀಯ ಸ್ಥಿರತೆಯನ್ನು ತಂದು ಕೊಡಲು ಜನರಲ್ಲಿ ಕೇಳಿಕೊಂಡಿದ್ದಾರೆ. ಬಿಜೆಪಿ ಮಾತ್ರ ರಾಜ್ಯವನ್ನು ನವ ಕರ್ನಾಟಕದತ್ತ ಕೊಂಡೊಯ್ಯಬಹುದು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜವಂಶದ ರಾಜಕೀಯವು ಸಾರ್ವಕಾಲಿಕ ಉತ್ತುಂಗದಲ್ಲಿ ಇರಲಿದೆ. ಕರ್ನಾಟಕವು ಗಲಭೆ ಪೀಡಿತ ರಾಜ್ಯವಾಗಿ ಮಾರ್ಪಡಲಿದೆ ಎಂದು ಶಾ ತಿಳಿಸಿದ್ದಾರೆ.

ಜನರ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರವು ಸಾರ್ವಕಾಲಿಕವಾಗಿ ಹೆಚ್ಚಾಗುತ್ತದೆ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಕೋಟಾವನ್ನು ರದ್ದುಗೊಳಿಸುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಪಕ್ಷವು 'ಧರ್ಮ ಆಧಾರಿತ ಮೀಸಲಾತಿ'ಯಲ್ಲಿ ಎಂದಿಗೂ ನಂಬಿಕೆ ಹೊಂದಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಧರ್ಮಾಧಾರಿತ ಶೇಕಡ 4ರಷ್ಟು ಮೀಸಲಾತಿ ಇತ್ತು. ಮತಬ್ಯಾಂಕ್ ರಾಜಕಾರಣಕ್ಕೆ ಮಣಿಯದೆ ಬಿಜೆಪಿ ಸರಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

'ಧರ್ಮ ಆಧಾರಿತ ಮೀಸಲಾತಿ ನಡೆಯಬಾರದು ಎಂದು ನಾವು ನಂಬುತ್ತೇವೆ' ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದ ನಂತರ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ದಕ್ಷಿಣದ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಗೆ ಕಠಿಣ ಸವಾಲನ್ನು ಒಡ್ಡಿದೆ.
ಅಮಿತ್ ಶಾ ವಿರುದ್ಧ ಟೀಕೆ
ಅಮಿತ್ ಶಾ ಅವರು ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುವುದು ಬಿಟ್ಟು ಹಳೆಯ ರಾಗವನ್ನೇ ಮುಂದುವರಿಸಿದ್ದಾರೆಂದು ಸಾಮಾಜಿಕ ತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದೆ.
ಮುಸ್ಲಿಮರ ಬಗ್ಗೆ ಮಾತನಾಡುವುದು, ಕಾಂಗ್ರೆಸ್ ಅಧಿಕಾರದಲ್ಲಿ ಗಲಭೆಗಳು ಉಂಟಾಗಲಿವೆ ಎನ್ನುವುದು, ವಂಶರಾಜಕಾರನದ ಬಗ್ಗೆ ಪದೇಪದೇ ಹೇಳುವುದು ಅಮಿತ್ ಶಾ ಅವರಿಗೆ ಚಟವಾಗಿ ಪರಿಣಮಿಸಿದೆ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications