ಅಮಿತ್ ಶಾ ಜತೆ ಭೇಟಿ ಅಚ್ಚರಿಯಾದರೂ, ನಿರೀಕ್ಷಿತ: ಯತ್ನಾಳ್
ವಿಜಯಪುರ, ಫೆಬ್ರವರಿ 14: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿ ಸೇರುವ ಸಾಧ್ಯತೆ ಇದೆ ಸುದ್ದಿಗೆ ಭೀಮಬಲ ಬಂದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿರುವ ಯತ್ನಾಳ್ ಅವರು ತುಂಬಾ ಹುಮ್ಮಸ್ಸಿನಲ್ಲಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರಲು ಮೂರು ಷರತ್ತುಗಳನ್ನು ವಿಧಿಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಷರತ್ತುಗಳೇನು ಇಲ್ಲ, ನಾನು ಕಳೆದ ಮೂರು ದಶಕಗಳಿಂದ ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದಿದ್ದೀನಿ, ನಾನು ಬಿಜೆಪಿ ಸೇರೋದು ಜನರ ಅಪೇಕ್ಷೆ ಎಂದಿದ್ದಾರೆ.
ಕೇಂದ್ರದ ನಾಯಕರು ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳಲೇಬೇಕು ಎಂದು ನಿರ್ಧರಿಸಿದ್ದಾರೆ, ಯಾವುದೇ ಭ್ರಷ್ಟಾಚಾರದಲ್ಲಿ, ಹಗರಣದಲ್ಲಿ ಇಲ್ಲದ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಅನುಕೂಲ ಆಗಲಿದೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ, ಹಾಗಾಗಿ ನನ್ನನ್ನು ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬಂದಿದ್ದಾನೆ, ಈಗ ನನಗೆ ಏರುವ ಕಾಲ ಬಂದಿದೆ ಇನ್ನು ಐದು ವರ್ಷದಲ್ಲಿ ಕರ್ನಾಟಕದಲ್ಲಿ ವಿಜಯಪುರ ಇತಿಹಾಸದಲ್ಲಿ ಉಳಿಯುವ ಕೆಲಸ ಆಗಲಿದೆ ಎಂದು ಯತ್ನಾಳ್ ಹೇಳಿದರು.