ಬೆಂಗಳೂರು- ದೊಡ್ಡಬಳ್ಳಾಪುರ ಸಂಚಾರ ಮಾರ್ಗ ಬದಲು
ಬೆಂಗಳೂರು, ನ. 19: ಬೆಂಗಳೂರು- ದೊಡ್ಡಬಳ್ಳಾಪುರ ನಡುವಣ ವಾಹನ ಸಂಚಾರ ಮಾರ್ಗ ಒಂದಷ್ಟು ಕಾಲ ಏರುಪೇರು ಆಗಲಿದೆ. ರಾಜಧಾನಿಯ ಉತ್ತರ ಭಾಗದಲ್ಲಿ ಯಲಹಂಕ ಉಪನಗರ ವ್ಯಾಪ್ತಿಯಲ್ಲಿ ಅಳ್ಳಾಳಸಂದ್ರ ಬಳಿ ರೈಲ್ವೆ ಮೇಲ್ಸೆತುವೆ (Road over bridge -ROB) ಕಾಮಗಾರಿ ಆರಂಭವಾಗಿರುವುದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
South Western Railways ವತಿಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಅತಿ ಹೆಚ್ಚು ವಾಹನ ದಟ್ಟಣೆಯ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ವಿವರ ಇಲ್ಲಿದೆ:

* ಬೆಂಗಳೂರು ನಗರದಿಂದ ದೊಡ್ಡಬಳ್ಳಾಪುರದ ಕಡೆ ಹಾದು ಹೋಗುವ ಎಲ್ಲಾ ವಾಹನಗಳು (ಕೆಎಸ್ಆರ್ಟಿಸಿ, ಬಿಎಂಟಿಸಿ ಹೊರತುಪಡಿಸಿ) ರಾಷ್ಟ್ರೀಯ ಹೆದ್ದಾರಿ-7 ರಸ್ತೆಯಲ್ಲಿ ಬೈಪಾಸ್ ಮೂಲಕ ನೇರವಾಗಿ ಸಂಚರಿಸಿ ಗಂಟಿಗಾನಹಳ್ಳಿ ಕ್ರಾಸ್ ಮತ್ತು ಎಂವಿಐಟಿ ಕ್ರಾಸ್ ಬಳಿ ಎಡ ತಿರುವು ಪಡೆದು ಸಂಚರಿಸಿ ರಾಜಾನುಕುಂಟೆ ಸಮೀಪ ಬೆಂಗಳೂರು-ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸೇರಬಹುದು.
* ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಆಗಮಿಸುವ ಎಲ್ಲಾ ವಾಹನಗಳು (ಬಿಎಂಟಿಸಿ ಬಸ್ ಹೊರತುಪಡಿಸಿ) ರಾಜಾನುಕುಂಟೆ ಬಳಿ ಎಡ ತಿರುವು ಪಡೆದು ಗಂಟಿಗಾನಹಳ್ಳಿ ಕ್ರಾಸ್ (ಆ್ಯಂಬಿಯನ್ಸ್ ಡಾಭಾ) ಸಮೀಪ ಎನ್ಎಚ್-7 ಮೂಲಕ ತೆರಳಬಹುದು.
* ಬೆಂಗಳೂರು ಕಡೆಯಿಂದ ಬರುವ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಸುಗಳು, ಕಾರುಗಳು ಇತರ ಲಘು ವಾಹನಗಳು ಬಿಬಿ ರಸ್ತೆ ಬೈಪಾಸ್ ಮೂಲಕ ನೇರವಾಗಿ ಸಂಚರಿಸಿ, ಕಾಫೀ ಡೆ ಬಳಿ ಸರ್ವೀಸ್ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಬಿಬಿ ರಸ್ತೆಗೆ ಬಂದು ಯಲಹಂಕ ಗಾಂಧಿನಗರ 1ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ತೆಗೆದುಕೊಂಡು ಬಿಬಿ ರಸ್ತೆಗೆ ಬಂದು ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ಹಾಗೂ ನ್ಯಾಯಾಂಗ ಬಡಾವಣೆ ಮುಂತಾದ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ.
* ಯಲಹಂಕ ಉಪನಗರ ಮತ್ತು ಸುತ್ತ-ಮುತ್ತಲಿನ ಇತರೆ ಬಡಾವಣೆಗಳಿಂದ ನಗರದ ಕಡೆ ಹಾದು ಹೋಗುವ ಭಾರಿ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳು ಮೇಜರ್ ಉನ್ನಿಕೃಷ್ಣನ್ ಜಂಕ್ಷನ್, ಮದರ್ ಡೈರಿ ಕ್ರಾಸ್, ಅಟ್ಟೂರು, ಚಿಕ್ಕಬೆಟ್ಟಹಳ್ಳಿ, ಎಂಎಸ್ ಪಾಳ್ಯ, ಬಿಇಎಲ್ ವೃತ್ತದ ಮೂಲಕ ಇತರ ಪ್ರದೇಶಗಳಿಗೆ ತೆರಳಬಹುದು.
* ಯಲಹಂಕ ಉಪನಗರ ಮತ್ತು ಸುತ್ತ ಮುತ್ತಲಿನ ಇತರೆ ಬಡಾವಣೆಗಳಿಂದ ಬೆಂಗಳೂರು ನಗರದ ವಿವಿಧ ಕಡೆಗಳಿಗೆ ಹಾದು ಹೋಗುವ ಬಿಎಂಟಿಸಿ ಬಸ್ಸುಗಳು ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಎಡ ತಿರುವು ಪಡೆದು ಯಲಹಂಕ ಸಂತೆ ವೃತ್ತ ತಲುಪಿ ಬಿಡಿಕೆ ಕಲ್ಯಾಣ ಮಂಟಪ ಮುಂಭಾಗದ ರಸ್ತೆಯಲ್ಲಿ ಹಾದು ಅಂಡರ್ ಪಾಸ್ ನಲ್ಲಿ ಬಲ ತಿರುವು ಪಡೆದು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದು. (ಚಿತ್ರ)












Click it and Unblock the Notifications