ಚುನಾವಣಾ ಸೋಲಿನ ಬಳಿಕ ಮೌನ ಮುರಿದ ಮಾಧುಸ್ವಾಮಿ; ದುಡ್ಡೇ ಶ್ರೇಷ್ಠವಾಯ್ತಾ ಎಂದು ಹೇಳಿದ್ಯಾಕೆ?
ತುಮಕೂರು,ಜುಲೈ 03: ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮೊದಲ ಬಾರಿಗೆ ಮಾಜಿ ಸಚಿವ ಮಾಧುಸ್ವಾಮಿ ಮೌನ ಮುರಿದಿದ್ದಾರೆ. ಕೆಲಸ ಮಾಡಿದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ ಆದರೆ, ಜನ ಕಡೆಗಣಿಸಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಧುಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ. ಯಾಕೆಂದರೆ ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸ ಅನಿಸಲೇ ಇಲ್ಲ. ಅವರು ಕೊಡುವ ಅಕ್ಕಿ, ಅವರು ಕೊಡುವ ದುಡ್ಡೇ ಶ್ರೇಷ್ಠ ಅನಿಸಿತು ಎಂದು ಬೇಸರ ಹೊರಹಾಕಿದ್ದಾರೆ.

ಕಾಂಗ್ರೆಸ್ ನವರು ಉಚಿತ ಭಾಗ್ಯದ ಮುಂದೆ ನಮ್ಮ ಎಲ್ಲಾ ಕೆಲಸ ಕೊಚ್ಚಿಕೊಂಡು ಹೋಯಿತು. ನಾವು ಯಾವ ನೀರು ಕುಡಿದಿದ್ದಿವಿ, ಯಾವ ರಸ್ತೆಯಲ್ಲಿ ಓಡಾಡುತಿದ್ದೀವಿ ಅನ್ನೋದನ್ನು ಜನರು ಮರೆತರು. ಇದೇ ರೀತಿ ಉಚಿತ ಭಾಗ್ಯ ಮುಂದುವರೆದರೆ ಮುಂದೆ ಚುನಾವಣೆ ಮಾಡೋದು ತುಂಬಾ ಕಷ್ಟವಾಗುತ್ತದೆ. ತೆರಿಗೆದಾರರ ದುಡ್ಡನ್ನು ನಮಗೆ ಇಷ್ಟ ಬಂದ ಹಾಗೆ ಮನೆಯಲ್ಲಿ ಕುಂತವರಿಗೆ ಇಷ್ಟ ಬಂದಹಾಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ ಎಂದು ಪ್ರಶ್ನಿಸಿದರು.
ಕೆಲ ವಿದ್ಯಾವಂತ, ಉದ್ಯೋಗಸ್ಥ ಯುವಕರು ನನ್ನ ಬಳಿ ಬಂದು ಕೇಳಿದ್ರು. ನಾವು ತೆರಿಗೆ ಕಟ್ಟೋರು ಉಚಿತ ಭಾಗ್ಯದ ವಿರುದ್ಧ ಹೋರಾಟ ಮಾಡಿದ್ರೆ ಮಾತ್ರ ಇದು ನಿಲ್ಲಬಹುದೇನೋ ಎಂದು ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಮಾಡಿದ ಪಾಪಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಟ್ಟಿಲ್ಲ ಎಂದು ಸುಮ್ಮನೆ ದೂಷಣೆ ಮಾಡುತ್ತಾರೆ ಎಂದು ಹೇಳಿದರು.
ನಾವೂ ಕೂಡ ರಾಜ್ಯದಲ್ಲಿ ಕನಿಷ್ಠ 7 ಕೆ.ಜಿ.ಅಕ್ಕಿ ಕೊಡಬೇಕು ಎಂದು 10 ಬಾರಿ ಪ್ರಯತ್ನ ಪಟ್ವಿ. ಆದರೆ, ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ಮೋದಿ ಒಪ್ಪಿಲ್ಲ, ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ತಿಂಗಳಿಗೆ 5ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ.
ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ ಸಂಕಷ್ಟ ಕಾಲದಲ್ಲಿ ಕೊಡಲು ಅಕ್ಕಿಯನ್ನ ದಾಸ್ತಾನು ಮಾಡಲಾಗಿದೆ. ನಮ್ಮಲ್ಲಿ ಅಕ್ಕಿ ಇದೆ ಎಂದೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ?ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೆಕೊಡುತ್ತಾರೆ. ಮನೆಯಲ್ಲಿ ಸಂಸಾರ ನಡೆಸೋರು ಕಷ್ಟ ಕಾಲಕ್ಕೆ ಆಗಲಿ ಎಂದೇಳಿ ದುಡ್ಡು ಕೂಡಿಡುತ್ತಾರೆ. ಅದನ್ನು ನಾನು ಸಿನಿಮಾ ನೋಡೋಕೆ ಹೋಗ್ಬೇಕು, ಸ್ವೀಟ್ ತಿನ್ನೋಕೆ ಹೋಗ್ಬೇಕು ಕೊಡು ಅಂದರೆ ಕೊಡಕಾಗುತ್ತಾ? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕುಟುಕಿದರು.












Click it and Unblock the Notifications