ಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ ಶುಭ ಸುದ್ದಿ ನೀಡಲಿದೆ ಸರ್ಕಾರ
ಧಾರವಾಡ, ಜೂನ್ 26: ಸರ್ಕಾರಿ ಅನುದಾನಿತ ಶಾಲೆಯ ಶಿಕ್ಷಕರಿಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯಗಳನ್ನೂ ಇನ್ನು ಮುಂದೆ ಅನುದಾನಿತ ಖಾಸಗಿ ಶಾಲೆಗಳಿಗೆ ನೀಡುವ ಭರವಸೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಹೇಶ್ ಹೇಳಿದ್ದಾರೆ.
ನಿನ್ನೆ ತಮ್ಮನ್ನು ಭೇಟಿಯಾಗಿದ್ದ ಅನುದಾನಿತ ಖಾಸಗಿ ಶಿಕ್ಷಕರ ಸಂಘದ ಸದಸ್ಯರೊಂದಿಗೆ ಮಾತನಾಡಿ ಸಚಿವರು ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ.
25,600 ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಸುತ್ತೋಲೆ
ಅನುದಾನಿತ ಖಾಸಗಿ ಶಾಲಾ ಶಿಕ್ಷಕರು ಸಮಾನ ಸೌಲಭ್ಯಕ್ಕಾಗಿ ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದು ಅವರಿಗೆ ಸೂಕ್ತ ಸೌಲಭ್ಯಗಳು ಇನ್ನೂ ಲಭಿಸಿಲ್ಲ ಹಾಗಾಗಿ ನಿನ್ನೆ ಧಾರವಾಡದಲ್ಲಿ ಅನುದಾನಿತ ಖಾಸಗಿ ಶಾಲಾ ಶಿಕ್ಷಕ ಸಂಘದ ಸದಸ್ಯರು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಭಡ್ತಿ ಸೌಲಭ್ಯ, ಪಿಂಚಣಿ ಯೋಜನೆ, ಮುಖ್ಯೋಪಾಧ್ಯಾಯರುಗಳಿಗೆ ವಿಶೇಷ ಬಡ್ತಿ ಸೌಲಭ್ಯ ಸೇರಿದಂತೆ, ಶಿಕ್ಷಕರ ಅನುಪಾತವನ್ನು 40:1 ರ ಬದಲಿಗೆ 30:1 ಮಾಡುವಂತೆ ಹಾಗೂ ಎಲ್ಲಾ ಶಾಲೆಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕ ಮಾಡುವಂತೆ ಸಹ ಇದೇ ಸಮಯದಲ್ಲಿ ಸಚಿವರನ್ನು ಒತ್ತಾಯಿಸಲಾಯಿತು.
ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು
ಸಂಘದ ಸದಸ್ಯರ ಮನವಿಗಳನ್ನು ಆಲಿಸಿದ ಸಚಿವ ಎನ್.ಮಹೇಶ್ ಅವರು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.