ದಿಗ್ವಿಜಯ್ ಸಿಂಗ್ರಿಂದ ಸಿದ್ದರಾಮಯ್ಯಗೆ ಫೋನ್ ಕರೆ!
ಬೆಂಗಳೂರು, ಏಪ್ರಿಲ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿಯಿಂದ ಸೂಚನೆಯೊಂದು ಬಂದಿದೆ. ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ನಿರ್ದೇಶಕ ಸ್ಥಾನದಿಂದ ಪುತ್ರ ಡಾ. ಯತೀಂದ್ರ ಅವರ ರಾಜೀನಾಮೆ ಪಡೆಯಿರಿ ಎಂದು ದೂರವಾಣಿ ಕರೆ ಮಾಡಿ ಸೂಚನೆ ನೀಡಲಾಗಿದೆ.
ಡಾ.ಯತೀಂದ್ರ ಅವರು ನಿರ್ದೇಶಕರಾದ ಬಳಿಕ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ಮಾಡಿರುವ ಮ್ಯಾಜಿಕ್ ಈಗ ಹೈಕಮಾಂಡ್ ಅಂಗಳ ತಲುಪಿದೆ. ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪುತ್ರನ ರಾಜೀನಾಮೆ ಪಡೆಯಲು ಸೂಚನೆ ಕೊಟ್ಟಿದ್ದಾರೆ. [ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?]

ಡಾ.ಯತೀಂದ್ರ ಮತ್ತು ಸಿದ್ದರಾಮಯ್ಯ ಅವರು ಆಸ್ಪತ್ರೆಗಳಲ್ಲಿ ಲ್ಯಾಬ್ ಸ್ಥಾಪನೆ ಮಾಡಲು ನೀಡಿರುವ ಟೆಂಡರ್ನಲ್ಲಿ ಲೋಪವಾಗಿಲ್ಲ ಎಂದು ಸ್ಪಷ್ಟನೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ, ಪ್ರತಿಪಕ್ಷಗಳು ಒಂದೇ ಕಂಪನಿಗೆ ಮೂರು ಸರ್ಕಾರಿ ಟೆಂಡರ್ ಸಿಕ್ಕಿದ್ದು ಹೇಗೆ? ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿವೆ. [ಸಿದ್ದರಾಮಯ್ಯ ಮಗನಿಗೆ ಸಿಕ್ಕಿದ್ದು ಇದೊಂದೇ ಪ್ರಾಜೆಕ್ಟಾ?]
ಟೆಂಡರ್ ನೀಡಿರುವ ವಿವಾದ ರಾಷ್ಟ್ರೀಯ ವಾಹಿನಿಗಳಲ್ಲಿಯೂ ಸುದ್ದಿಯಾಗುತ್ತಿದೆ. ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿರುವ ಹೈಕಮಾಂಡ್ ನಾಯಕರು, ಅದರ ನಡುವೆಯೂ ಕರ್ನಾಟಕದ ವಿದ್ಯಮಾನಗಳನ್ನು ಗಮನಿಸಿ, ಸೂಚನೆ ಕೊಟ್ಟಿದ್ದಾರೆ.
ಏನಿದು ವಿವಾದ? : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ನಿರ್ದೇಶಕರಾದ ಬಳಿಕ ಮೂರು ಪ್ರಮುಖ ಸರ್ಕಾರಿ ಟೆಂಡರ್ಗಳು ಈ ಸಂಸ್ಥೆಯ ಪಾಲಾಗಿವೆ. 2014ರ ಸೆಪ್ಟೆಂಬರ್ 8ರಂದು ಯತೀಂದ್ರ ಅವರು ನಿರ್ದೇಶಕರಾಗುತ್ತಾರೆ.
2014ರ ನವೆಂಬರ್ 18ರಂದು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯಲು ಟೆಂಡರ್ ಕರೆಯಲಾಯಿತು. ಈ ಟೆಂಡರ್ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ಪಾಲಾಯಿತು. ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯಲು ಕರೆದ ಟೆಂಡರ್ ಲಿಮಿಟೆಡ್ ಪಾಲಾಯಿತು. ಪುನಃ 2015ರ ಅಕ್ಟೋಬರ್ನಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್ ಸ್ಥಾಪನೆ ಮಾಡುವ ಟೆಂಡರ್ ಅನ್ನು ಕಂಪನಿಗೆ ನೀಡಲಾಯಿತು.
ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರ ಪುತ್ರ ವ್ಯಾವೋಹದ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಿವೆ. ಟೆಂಡರ್ ನೀಡಿರುವ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತಿವೆ. ಆದ್ದರಿಂದ, ನಿರ್ದೇಶಕರ ಸ್ಥಾನಕ್ಕೆ ಡಾ.ಯತೀಂದ್ರ ಅವರು ರಾಜೀನಾಮೆ ನೀಡಲಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ.












Click it and Unblock the Notifications