ಡಿಕೆಶಿ ಮನೆಯಲ್ಲಿ ಗುಲಾಂ ನಬಿ ಆಜಾದ್: ಗರಿಗೆದರಿತೇ ಕೆಪಿಸಿಸಿ ಅಧ್ಯಕ್ಷ ಆಯ್ಕೆ?
ಬೆಂಗಳೂರು, ಫೆ 29: ಕರ್ನಾಟಕ ಪ್ರದೇಶ ಕಾಂಗ್ರೆಸ್ ಘಟಕಕ್ಕೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ವಿಚಾರದಲ್ಲಿ, ಸೋನಿಯಾ ಗಾಂಧಿ, ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ ಎನ್ನುವ ಸುದ್ದಿಯ ನಡುವೆ, ಹೊಸ ಬೆಳವಣಿಗೆಯೊಂದು ನಡೆದಿದೆ.
ಶುಕ್ರವಾರ (ಫೆ 28) ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ಹಲವು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ.
ಶನಿವಾರ ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರಕ್ಕೆ ಭೇಟಿ ನೀಡಿರುವ ಆಜಾದ್, ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ನಿವಾಸಕ್ಕೆ ಆಗಮಿಸಿದ ಗುಲಾಂ ನಬಿ ಆಜಾದ್ ಅವರನ್ನು ಡಿಕೆಶಿ, ಹಾರ, ಶಾಲು ಹಾಕಿ ಸ್ವಾಗತಿಸಿದ್ದಾರೆ.

ಅಧ್ಯಕ್ಷ ಆಯ್ಕೆ ಸಂಬಂಧ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹೈಕಮಾಂಡ್ ಅವರನ್ನು ಭೇಟಿಯಾಗಿದ್ದರು. "ಆದಷ್ಟು ಬೇಗ ಅಧ್ಯಕ್ಷ ಹುದ್ದೆಗೆ ಯಾರನ್ನಾದರೂ ಆಯ್ಕೆ ಮಾಡಿ ಎಂದು ಹೈಕಮಾಂಡ್ ಅವರಲ್ಲಿ ಮನವಿ ಮಾಡಿದ್ದೇನೆ" ಎಂದು ದಿನೇಶ್ ಹೇಳಿದ್ದರು.
ಡಿಕೆಶಿ ಸೇರಿದಂತೆ ಹಲವು ಹಿರಿಯ ಮುಖಂಡರ ಹೆಸರು, ಅಧ್ಯಕ್ಷ ಹುದ್ದೆಗೆ ಕೇಳಿಬಂದಿತ್ತು. ಕೊನೆಗೆ, ಡಿ.ಕೆ.ಶಿವಕುಮಾರ್ ಅವರ ಹೆಸರೇ ಅಂತಿಮವಾಗಿ, ಇನ್ನೇನು ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿತ್ತು. ಆದರೆ, ಆನಂತರ ಪ್ರಕ್ರಿಯೆ ಮುಂದಕ್ಕೆ ಹೋಗಿರಲಿಲ್ಲ.
ಹಾಗಾಗಿ, ಇಂದು ಗುಲಾಂ ನಬಿ ಆಜಾದ್, ಡಿಕೆಶಿಯನ್ನು ಭೇಟಿಯಾಗಿದ್ದು ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯ ಪ್ರಕ್ರಿಯೆ ಮತ್ತೆ ಗರಿಗೆದರಿದೆ ಎಂದು ಹೇಳಲಾಗುತ್ತಿದೆ. ಗುಲಾಂ ನಬಿ ಈ ಹಿಂದೆ ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿಯಾಗಿದ್ದರು.












Click it and Unblock the Notifications