Government Employee: ಸರ್ಕಾರಿ ನೌಕರರ ಹಾಜರಾತಿಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಫೆಬ್ರವರಿ 03: ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿಯೊಂದು ಇಲ್ಲಿದೆ. ಸರ್ಕಾರಿ ನೌಕರರು ಸರಿಯಾದ ಸಮಯಕ್ಕೆ ಕಛೇರಿಗೆ ಬರುವುದಿಲ್ಲ, ಬೇಗ ನಿರ್ಗಮಿಸುತ್ತಾರೆ ಮುಂತಾದ ಆರೋಪಗಳ ಹಿನ್ನಲೆಯಲ್ಲಿ ಕಛೇರಿ ಹಾಜರಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಛೇರಿಗಳಿಗೆ ತಡವಾಗಿ ಬರುವ ನೌಕರರಿಗೆ ಬಿಸಿ ಮಟ್ಟಿಸಲು ಎಐ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಪುಸ್ತಕದಲ್ಲಿ ಸಹಿ ಹಾಕುವುದು, ಬೆರಳಚ್ಚು ಮಾದರಿಯನ್ನು ಬಿಟ್ಟು ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯಳ್ಳ ಹೊಸ ವ್ಯವಸ್ಥೆಯನ್ನು ತರಲಾಗುತ್ತದೆ.

ಮಾಹಿತಿಗಳ ಪ್ರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ವಿಭಾಗ ' ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ'ಯನ್ನು ಅಭಿವೃದ್ಧಿಗೊಳಿಸಿದೆ. ಇದನ್ನು ಪರೀಕ್ಷೆಗೆ ಒಳಪಡಿಸಿದ್ದು, ಶೀಘ್ರವೇ ವಿವಿಧ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.
ಫೋಟೋ ಸಹಿತ ಹಾಜರಿ ವ್ಯವಸ್ಥೆ: ಈ ಹಿಂದೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಸಹಿ ಹಾಕುವ ಪದ್ಧತಿಯ ಹಾಜರಾತಿ ವ್ಯವಸ್ಥೆ ಇತ್ತು. ಆದರೆ ಈ ವ್ಯವಸ್ಥೆ ಬಗ್ಗೆ ಹಲವಾರು ಆರೋಪಗಳು ಕೇಳಿ ಬರುತ್ತಿತ್ತು. ಆದ್ದರಿಂದ ನಂತರ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿತು. ಕಛೇರಿ ಒಳಗೆ ನೌಕರರು ಬರುವ ಮೊದಲು ಬೆರಳಚ್ಚು ಮೂಲಕ ಹಾಜರಿ ನೀಡಬೇಕಾಗಿತ್ತು.
ಸದ್ಯ ಹಲವು ಕಛೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯೇ ಜಾರಿಯಲ್ಲಿದೆ. ಅಲ್ಲದೇ ಸಹಿ ಹಾಕುವ ವ್ಯವಸ್ಥೆ ಕೂಡ ಕೆಲವು ಕಛೇರಿಗಳಲ್ಲಿ ಇದೆ. ಆದರೆ ನೌಕರರು ತಮ್ಮ ಪ್ರಭಾವ ಬಳಕೆ ಮಾಡಿಕೊಂಡು ತಾವು ಕಛೇರಿಗೆ ಬಂದಾಗಲೇ ಪುಸ್ತಕಕ್ಕೆ ಸಹಿ ಹಾಕುತ್ತಿದ್ದರು.
ಬೆರಳಚ್ಚು ವ್ಯವಸ್ಥೆಯಲ್ಲಿ ನೌಕರರು ಕಛೇರಿಗೆ ಆಗಮಿಸಿದ/ ನಿರ್ಗಮಿಸಿದ ಸಮಯ ಸರಿಯಾಗಿ ಸಿಗುತ್ತಿತ್ತು. ಆದರೆ ಬಯೋಮೆಟ್ರಿಕ್ ವ್ಯವಸ್ಥೆ ಕೆಟ್ಟಿದೆ, ದುರಸ್ತಿಯಲ್ಲಿದೆ ಎಂದು ಹಲವು ಕಛೇರಿಗಳು ಪುನಃ ಪುಸ್ತಕ ಹಾಜರಾತಿಗೆ ಮರಳಿದ್ದವು.
ಆದ್ದರಿಂದ ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಐ ತಂತ್ರಜ್ಞಾನದ ಮೂಲಕ ಸರ್ಕಾರಿ ನೌಕರರ ಹಾಜರಾತಿಯನ್ನು ಪಡೆಯಲು ಹೊಸ ವ್ಯವಸ್ಥೆ ಜಾರಿಗೊಳಿಸಲಿದೆ. ಇದಕ್ಕಾಗಿಯೇ ಹೊಸ ಸಾಫ್ಟ್ವೇರ್ ಸಿದ್ಧಗೊಳಿಸಲಾಗಿದೆ.
ಮಾಹಿತಿಯಂತೆ ಈ ಹೊಸ ತಂತ್ರಾಂಶ ನೌಕರರ ಜಿಪಿಎಸ್ ಟ್ರಾಕಿಂಗ್, ಫೋಟೋ ಜೊತೆಗೆ ಹಾಜರಾತಿಯನ್ನು ಖಚಿತಪಡಿಸಲಿದೆ. ಆದ್ದರಿಂದ ನೌಕರರು ಕಡ್ಡಾಯವಾಗಿ ಕಛೇರಿಗೆ ಆಗಮಿಸಿಯೇ ಹಾಜರಾತಿ ಹಾಕಬೇಕಿದೆ. ಇದನ್ನು ಯಾವಾಗ ಜಾರಿಗೊಳಿಸಲಾಗುತ್ತದೆ? ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಕೆಲವು ದಿನಗಳ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು, ಚಲನ-ವಲನ ವಹಿಯನ್ನು ನಿರ್ವಹಿಸದಿರುವುದು, ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿ/ ಸಿಬ್ಬಂದಿಗಳ ಹೆಸರು ಮತ್ತು ಹುದ್ದೆಯ ನಾಮ ಫಲಕಗಳನ್ನು ಅಳವಡಿಸದಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಸುತ್ತೋಲೆ ಮೂಲಕ ಅಧಿಕಾರಿ/ ಸಿಬ್ಬಂದಿಗಳಿಗೆ ಸೂಚನೆಯೊಂದನ್ನು ನೀಡಲಾಗಿತ್ತು.
* ಕಛೇರಿಗೆ ಬರುವ ವೇಳೆ ಹಾಗೂ ಕಛೇರಿಯಿಂದ ಹೊರಡುವ ವೇಳೆಯನ್ನು ಪಾಲನೆ ಮಾಡುವುದು.
* ಕಛೇರಿ ಅವಧಿ ಪೂರ್ಣವಾಗುವ ತನಕ ನಿಗದಿಪಡಿಸಿದ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸತಕ್ಕದ್ದು.
* ಕಛೇರಿ ಸಮಯದಲ್ಲಿ ನೌಕರರು/ ಅಧಿಕಾರಿಗಳು ಕಛೇರಿ ಕೆಲಸದ ನಿಮಿತ್ತ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ, ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯತಕ್ಕದ್ದು.
* ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸುವುದು.
* ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ/ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಿತ್ತು.












Click it and Unblock the Notifications