ರಾಜ್ಯಸಭಾ ಚುನಾವಣೆ, ಹೈಕಮಾಂಡ್ ಒಲವು ಯಾರತ್ತ? ಸಿದ್ದರಾಮಯ್ಯ Vs ಡಿ.ಕೆ.ಶಿವಕುಮಾರ್
2013ರ ವಿಧಾನಸಭಾ ಚುನಾವಣೆ ಗೆದ್ದ ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಯಾವ ರೀತಿ ಹಿಡಿತ ಸಾಧಿಸುತ್ತಾ ಬಂದರು ಎನ್ನುವುದರ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ಮೂಲ, ವಲಸೆ ಕಾಂಗ್ರೆಸ್ ಎನ್ನುವ ತಿಕ್ಕಾಟವನ್ನು ಚಿವುಟಿ ಹಾಕಿ, ಜನನಾಯಕರಾಗಿ ಹೊರಹೊಮ್ಮಿದ್ದಂತೂ ಹೌದು.
Recommended Video
ಕ್ಯಾಬಿನೆಟ್ ವಿಸ್ತರಣೆಯಿಂದ ಹಿಡಿದು, ಉಪಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲೂ ಸಿದ್ದರಾಮಯ್ಯನವರ ಮಾತೇ ಅಂತಿಮವಾಗಿತ್ತು. ಯಾರು ಎಷ್ಟೇ ತಕರಾರು ಎತ್ತಿದರೂ, ಕೊನೆಗೂ ಸಿದ್ದರಾಮಯ್ಯನವರೇ ಮೇಲುಗೈ ಸಾಧಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ ಮುಂತಾದ ಮೂಲ ಕಾಂಗ್ರೆಸ್ಸಿಗರ ವಿರೋಧವಿದ್ದರೂ, ಹೈಕಮಾಂಡ್ ಮಣೆ ಹಾಕುತ್ತಿದ್ದದ್ದು ಸಿದ್ದರಾಮಯ್ಯನವರ ಮಾತಿಗೆ ಎನ್ನುವುದು ಗುಟ್ಟಾಗೇನೂ ಉಳಿದಿರಲಿಲ್ಲ.
ತಾಜಾ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಆಪರೇಷನ್ ಕಮಲದ ನಂತರ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ, ಮುನಿಯಪ್ಪ ಮತ್ತು ಸಿದ್ದರಾಮಯ್ಯ ನಡುವೆ ಬಯ್ದಾಟ ನಡೆದದ್ದು ಗೊತ್ತೇ ಇದೆ. ಅಲ್ಲೂ, ಗೆದ್ದಿದ್ದು ಸಿದ್ದರಾಮಯ್ಯನೇ.

ರಾಜ್ಯಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ
ಈಗ ರಾಜ್ಯಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಿಯೋಜಿತರಾಗಿದ್ದಾರೆ. ಪದಗ್ರಹಣವನ್ನು ವಿಶಿಷ್ಟ ರೀತಿಯಲ್ಲಿ ಮಾಡಲು ಕೆಪಿಸಿಸಿ ಸಜ್ಜಾಗಿದೆ. ಇಡೀ ಕರ್ನಾಟಕಕ್ಕೆ ಡಿಜಿಟಲ್ ತಂತ್ರಜ್ಞಾನದ ಮೂಲಕ ನೇರಪ್ರಸಾರ ಮಾಡಲು ಸಜ್ಜಾಗಿದೆ. ಒಟ್ಟಾರೆ, ಕಾಂಗ್ರೆಸ್ ಬದಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್
ಹಿಂದಿನ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೂ ಈಗಿನ ಡಿ.ಕೆ.ಶಿವಕುಮಾರ್ ಅವರಿಗೂ ಪಕ್ಷ ಸಂಘಟನೆ, ಕಾರ್ಯಕರ್ತರ ಬೇಸ್ ವಿಚಾರಕ್ಕೆ ಬಂದಾಗ ಅಜಗಜಾಂತಾರ ವ್ಯತ್ಯಾಸವಿದೆ. ಹಾಗಾಗಿಯೇ, ಸಿದ್ದರಾಮಯ್ಯನವರಿಗೆ ಹಿಡಿದ ಪಟ್ಟು ಬಿಡದಿರಲು ಸುಲಭವಾಗುತ್ತಿತ್ತು ಎನ್ನುವುದು ಕೆಪಿಸಿಸಿ ವಲಯದಲ್ಲೇ ಕೇಳಿಬರುತ್ತಿದ್ದ ವಿಚಾರ.

ಎಐಸಿಸಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ
ಈಗ ರಾಜ್ಯಸಭಾ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲಬಹುದಾದ ಒಂದು ಸ್ಥಾನಕ್ಕೆ ಮತ್ತು ಹೊಂದಾಣಿಕೆ ಮಾಡಿಕೊಂಡರೆ ಗೆಲ್ಲಬಹುದಾದ ಇನ್ನೊಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಾಗಿದೆ. ಕೇಂದ್ರ ಮಟ್ಟದಲ್ಲೂ ಎಐಸಿಸಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಹಾಗಾಗಿ, ಈ ರಾಜ್ಯಸಭಾ ಚುನಾವಣೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದಲ್ಲಿ ತಮಗೆಷ್ಟು ಹಿಡಿತವಿದೆ ಎಂದು ತೋರಿಸುವ ಕಾಲವಿದು. ಕೇಂದ್ರದಲ್ಲಿ ಯಾರ ಮಾತಿಗೆ ಹೆಚ್ಚಿನ ತೂಕ ಎಂದು ಅಳೆಯುವ ಸಮಯವಿದು. ಜೊತೆಗೆ, ಪ್ರತಿಷ್ಠೆಯ ವಿಚಾರ ಕೂಡಾ.

ಹೊಸದಾಗಿ ಪಕ್ಷದ ಅಧ್ಯಕ್ಷರಾಗಿರುವ ಹುಮ್ಮಸ್ಸಿನಲ್ಲಿರುವ ಡಿಕೆಶಿ
ಹೊಸದಾಗಿ ಪಕ್ಷದ ಅಧ್ಯಕ್ಷರಾಗಿರುವ ಹುಮ್ಮಸ್ಸಿನಲ್ಲಿರುವ ಡಿಕೆಶಿಗೆ ತನ್ನ ಛಾಪು ತೋರಿಸುವ ಸಮಯವಿದು. ಕೊರೊನಾ, ಲಾಕ್ ಡೌನ್ ವಿಚಾರದಲ್ಲಿ ಈಗಾಗಲೇ ಪರಿಣಾಮಕಾರಿಯಾಗಿ ಡಿಕೆಶಿ, ಸರಕಾರದ ವಿರುದ್ದ ಹೈಕಮಾಂಡ್ ಗಮನ ಸೆಳೆಯುವ ಹೋರಾಟ ಮಾಡಿದ್ದಾರೆ. ಹಾಗಾಗಿ, ರಾಜ್ಯಸಭಾ ಚುನಾವಣೆ ಮತ್ತು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ ಕೈಮೇಲಾಗಲಿದೆ? ಸಿದ್ದರಾಮಯ್ಯನವರದ್ದೋ ಅಥವಾ ಡಿ.ಕೆ.ಶಿವಕುಮಾರ್ ಅವರದ್ದೋ? ಹೈಕಮಾಂಡ್ ಒಲವು ಯಾರ ಕಡೆ ಎನ್ನುವುದು ಗೊತ್ತಾಗಲಿದೆ.












Click it and Unblock the Notifications