ಕೆಪಿಸಿಸಿ ಅಧ್ಯಕ್ಷ ಹುದ್ದೆ: ಎಲ್ಲರೂ ಒಪ್ಪುವ ಅಂತಿಮ ಸೂತ್ರ ಫೈನಲ್ ಮಾಡಿದ ಸೋನಿಯಾ ಗಾಂಧಿ
ಹಲವು ಸುತ್ತಿನ ಮಾತುಕತೆ, ಅಭಿಪ್ರಾಯ ಆಲಿಸಿದ ನಂತರ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಘಟಕದ ಎರಡು ಆಯಕಟ್ಟಿನ ಹುದ್ದೆಗೆ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎನ್ನುವ ಎರಡು ಬಣಗಳು, ತಾವಿಟ್ಟ ಬೇಡಿಕೆಗಳಿಗೆ ಮನ್ನಣೆ ಸಿಗಬೇಕು ಎನ್ನುವ ಹಠ ಮುಂದುವರಿಸಿರುವುದರಿಂದ, ಎಲ್ಲರಿಗೂ ಒಪ್ಪುವ ಸೂತ್ರವನ್ನು ಸೋನಿಯಾ ಗಾಂಧಿ ಹಣೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಹಲವು ತಿಂಗಳಾಗಿದ್ದರೂ, ಅವರಿಬ್ಬರ ರಾಜೀನಾಮೆ ಆಂಗೀಕಾರಗೊಂಡಿರಲಿಲ್ಲ.
ಕರ್ನಾಟಕ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ (ಫೆ 17) ಆರಂಭಗೊಳ್ಳುತ್ತಿರುವುದರಿಂದ, ಅದಕ್ಕೂ ಮೊದಲು, ಈ ಎರಡು ಹುದ್ದೆಗೆ ಹೆಸರನ್ನು ಸೋನಿಯಾ, ವಾರಾಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.

ಸೋನಿಯಾ ಗಾಂಧಿ ಭೇಟಿಯಾದ ಕೆ.ಜೆ.ಜಾರ್ಜ್
ಸಿದ್ದರಾಮಯ್ಯನವರನ್ನೇ ವಿರೋಧ ಪಕ್ಷದ ಮತ್ತು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮುಂದುವರಿಸಬೇಕೆಂದು ಅವರ ಆಪ್ತರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಮಾಜಿ ಸಚಿವ ಮತ್ತು ಶಾಸಕ ಕೆ.ಜೆ.ಜಾರ್ಜ್, ಶುಕ್ರವಾರ (ಫೆ 14) ಹೈಕಮಾಂಡ್ ಅನ್ನು ಭೇಟಿಯಾಗಿದ್ದಾರೆ.

ಮನಮೋಹನ್ ಸಿಂಗ್ ಭೇಟಿಯಾದ ಎಚ್.ಕೆ.ಪಾಟೀಲ್
ಅಧಿವೇಶನದ ವೇಳೆ ಆಡಳಿತಾರೂಢ ಬಿಜೆಪಿಯಿಂದ ಮುಜುಗರಕ್ಕೀಡಾಗಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಶ್ರೀಘ್ರದಲ್ಲೇ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದ ಮತ್ತೋರ್ವ ಹಿರಿಯ ಮುಖಂಡ, ಎಚ್.ಕೆ.ಪಾಟೀಲ್ ಕೂಡಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.

ವಿರೋಧ ಪಕ್ಷ, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ
ಸದ್ಯಕ್ಕೆ ಯಾವುದೇ ಸಾಹಸಕ್ಕೆ ಕೈಹಾಕುವುದು ಬೇಡವೆಂದು ಎರಡೂ ಬಣಕ್ಕೂ ಸಮಾನವಾಗಿ ಹುದ್ದೆ ನೀಡಲು ಸೋನಿಯಾ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಂತೇ, ವಿರೋಧ ಪಕ್ಷದ ಮತ್ತು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯನವರ ಹೆಸರನ್ನೇ ಹೈಕಮಾಂಡ್ ಘೋಷಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್
ಇನ್ನು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಸೋನಿಯಾ ಗಾಂಧಿ ಅಂತಿಮಗೊಳಿಸಿದ್ದಾರೆ. ಆ ಮೂಲಕ, ಎರಡೂ ಬಣವನ್ನು ಸಮಾಧಾನಗೊಳಿಸುವುದು ಸೋನಿಯಾ ಗಾಂಧಿಯವರ ಉದ್ದೇಶ. ಭಾನುವಾರ (ಫೆ 16), ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಲ್ಪಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಘೋಷಣೆ ಹೊರಬೀಳಬಹುದು.












Click it and Unblock the Notifications