ರಾಜೀನಾಮೆ ನೀಡಿದ ಸರಕಾರಿ ವೈದ್ಯರ ಅಳಲುಗಳು
ಬೆಂಗಳೂರು, ಅ. 27: 'ನಾವು ನಮಗೋಸ್ಕರ ಪ್ರತಿಭಟನೆ ಮಾಡುತ್ತಿಲ್ಲ, ಜನರಿಗೋಸ್ಕರ ಮಾಡುತ್ತಿದ್ದೇವೆ, ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ, ರೇಬಿಸ್ ಗೆ ಔಷಧವಿಲ್ಲ. ಸುರಕ್ಷತಾ ಕ್ರಮಗಳು ಮೊದಲಿಲ್ಲ. ಖಾಲಿ ಇರುವ ಸಿಬ್ಬಂದಿ ನೇಮಕವಾಗಿಲ್ಲ. ಮೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಒಬ್ಬನೇ ವೈದ್ಯ ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದೆ' ಇದು ಸೋಮವಾರ ರಾಜೀನಾಮೆ ನೀಡಿ ಹೊರಬಂದ ವೈದ್ಯರ ಮಾತು.
ಅನೇಕ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರಿ ವೈದ್ಯರು ಸೋಮವಾರ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ವೈದ್ಯಕೀಯ ಅಧೀಕ್ಷಕರ ಕಚೇರಿಗೆ ಒಬ್ಬೊಬ್ಬರಾಗಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ರಾಜ್ಯದ 4,500 ಸಾವಿರ ವೈದ್ಯರಲ್ಲಿ 915 ಜನ ಸೋಮವಾರ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕ ಭಾಗದ ವೈದ್ಯರ ಸಂಖ್ಯೆಯೆ ಹೆಚ್ಚು. ಆದರೆ ಆರೋಗ್ಯ ಇಲಾಖೆ ಇಲ್ಲಿಯವರೆಗೆ ಯಾವ ರಾಜೀನಾಮೆಯನ್ನು ಅಂಗೀಕಾರ ಮಾಡಿಲ್ಲ.
ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಮೂರು ವಾರಗಳ ಗಡುವು ನೀಡಿದ್ದು ಅಷ್ಟರೊಳಗೆ ಸ್ಪಂದಿಸದಿದ್ದರೆ ಕೆಲಸಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.[ವೈದ್ಯರ ಸಾಮೂಹಿಕ ರಾಜೀನಾಮೆ ಎಲ್ಲಿಗೆ ಬಂತು?]
ರಾಜೀನಾಮೆ ನೀಡಿ ಹೊರಬಂದ ವೈದ್ಯರನ್ನು ಮಾತನಾಡಿಸದರೆ ಅನೇಕ ಮಾಹಿತಿಗಳು ಹೊರಬಂದವು. ಕೆಲವರು ಸಂಘಟನೆಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದು ತಿಳಿದುಬಂದಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯರು ಫ್ರೀಡಂ ಪಾರ್ಕ್ ನಿಂದ ಕಾಲ್ನಡಿಗೆಯಲ್ಲಿ ಆನಂದರಾವ್ ವೃತ್ತದ ಅಧೀಕ್ಷಕರ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.[ಸರ್ಕಾರಿ ವೈದ್ಯರ ಬೇಡಿಕೆಗಳೇನು?]
ವೈದ್ಯರು ನೀಡಿದ ಗಡುವಿನೊಳಗೆ ಸರ್ಕಾರ ಸ್ಪಂದಿಸಿದರೆ ಸಾಮಾನ್ಯ ಮನುಷ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯ. ಇಲ್ಲವಾದರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ನಾಗರಿಕರು ಖಾಸಗಿ ಆಸ್ಪತ್ರಗೆ ತೆರಳಿ ಹೆಚ್ಚಿನ ಹಣ ತೆರಬೇಕಾಗುತ್ತದೆ.
ರಾಜೀನಾಮೇನ ಪರಿಹಾರ ಬಿಡ್ರೀǃ
'ನಾನು ಕಳೆದ ನಲವತ್ತು ವರ್ಷದಿಂದ ಕೆಲಸ ಮಾಡ್ತಿದೇನ್ರೀ, ನಾಲ್ಕೈದು ಸಾವಿರಕ್ಕೂ ದುಡಿದಿದೇನ್ರೀ, ಆದರೆ ಸರ್ಕಾರ ನಮ್ಮ ಸೇವೆಗೆ ಯಾವ ಬೆಲಿ ನೀಡ್ಲಿಲ್ಲ. ಬೇಡಿಕೆ ಇಟ್ಟು ಇಟ್ಟು ಮೂರು ವರ್ಷಾ ಕಳೀತ್ರೀ. ಈಗ ರಾಜೀನಾಮೇನ ಪರಿಹಾರ ಅಂತ ನೀಡಿವ್ರೀ' ಇದು ಬಾಗಲಕೋಟೆ ಜಿಲ್ಲೆಯ ವೈದ್ಯ ಡಾ. ಲೇಬಗೇರಿ ಮಾತು. ಲೇಬಗೇರಿ ಮಾತಿಗೆ ಅವರ ಸಹದ್ಯೋಗಿಗಳಾದ ಡಾ.ಕರಿಯಣ್ಣನವರ್, ಡಾ. ಸಚಿನ್ ಧ್ವನಿಗೂಡಿಸಿದರು.
ಸುರಕ್ಷತೆ ಅಂದರೆ ಏನು?
ಹೆಣ್ಣು ವೈದ್ಯರ ಪರಿಸ್ಥಿತಿ ಯಾರಿಗೂ ಬೇಡ. ಸುರಕ್ಷತೆ ಎಂಬುದರ ಅರ್ಥವೇ ಗೊತ್ತಿಲ್ಲದಂತಾಗಿದೆ. ಕೆಲವೊಮ್ಮೆ ಎಲ್ಲಾ ಕೆಲಸವನ್ನು ನಾನೊಬ್ಬಳೇ ನಿರ್ವಹಿಸಿದ್ದೂ ಇದೆ. ಇವಕ್ಕೆಲ್ಲ ಸಕರ್ಕಾರ ಇನ್ನಾದರೂ ಮುಕ್ತಿ ನೀಡಲಿ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯೆ ಪ್ರಿಯಲತಾ.
ನಾವೇ ಆಸ್ಪತ್ರೆ ಸೇರಬೇಕಾಗುತ್ತದೆ.
ಗ್ರಾಮೀಣ ಭಾಗಕ್ಕೆ ತೆರಳಿ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗಲ್ಲ. ಅಲ್ಲಿ ಅಗತ್ಯ ಮೂಲ ಸೌಕರ್ಯವನ್ನು ನೀಡಿರಬೇಕಾಗುತ್ತದೆ. ಇಲಾಖೆ ನೀಡುವ ಮನೆಗಳಲ್ಲಿ ವಾಸಿಸುವ ಧೈರ್ಯ ಮಾಡಿದರೆ ನಾವೇ ಆಸ್ಪತ್ರೆ ಸೇರಬೇಕಾಗುತ್ತದೆ ಎಂದು ಪರಿಸ್ಥಿತಿ ಬಿಚ್ಚಿಟ್ಟರು ತುಮಕೂರಿನ ವೈದ್ಯೆ ಗೀತಾ.
ಮಾತನಾಡದೇ ದೂರ ಸರಿದರು
ಕೆಲವರನ್ನು ಮಾತನಾಡಿಸಲು ಪ್ರಯತ್ನಿಸಿದರೆ, ಅಥವಾ ರಾಜೀನಾಮೆ ನೀಡಿದ್ದೀರಿ ಮುಂದೇನು? ಅಂದರೆ ಮಾರು ದೂರ ಓಡಿಹೋದರು. ಇನ್ನು ಕೆಲವರು ಸಂಘಟನೆ ಹೇಳದಂತೆ ನಡೆದುಕೊಳ್ಳುತ್ತೇವೆ ಎಂದರು. ಮತ್ತೆ ಕೆಲವರು ನಮ್ಮ ಸಂಘದ ಅಧ್ಯಕ್ಷ ಕಾರ್ಯದರ್ಶಿ ಬಳಿ ಕೇಳ್ರಿ ಅಂಥ ನಮಗೆ ತಿರುಗಿ ಪ್ರಶ್ನೆ ಹಾಕಿದರು.
ಶಿವಶೈಲಂ ವಿರುದ್ಧ ಆಕ್ರೋಶ
ವೈದ್ಯರಿಗೆ ಸರ್ಕಾರಕ್ಕಿಂತ ಹೆಚ್ಚಾಗಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಶಿವಶೈಲಂ ಮೇಲೆ ಹೆಚ್ಚಿನ ಆಕ್ರೋಶವದ್ದಂತೆ ಕಂಡುಬಂತು. ಶಿವಶೈಲಂಗೆ ಇನ್ನಾದರೂ ಒಳ್ಳೆ ಬುದ್ಧಿ ಬರಲಿ ಎಂದು ಹಲವರು ವ್ಯಂಗ್ಯವಾಡಿದರು.
ಪೊಲೀಸ್ ಬಿಗಿ ಭದ್ರತೆ
ವೈದ್ಯರ ಸಾಮೂಹಿಕ ರಾಜೀನಾಮೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಆನಂದರಾವ್ ಸುತ್ತಲ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.
ಸರ್ಕಾರದ ಬೆದರಿಕೆಗೆ ಬಗ್ಗಲ್ಲ
ಆರೋಗ್ಯ ಸಚಿವರು ಮತ್ತು ಸರ್ಕಾರದ ಬೆದರಿಕೆಗಳಿಗೆ ಬಗ್ಗಲ್ಲ. ಹಿಂದೆ ತಮಿಳುನಾಡು ಸರ್ಕಾರ ಮಾಡಿದಂತೆ ಮಾಡಿದರೂ ನಮಗೆ ಬೇಸರವಿಲ್ಲ ಎಂಬುದು ವೈದ್ಯರ ಒಕ್ಕೋರಲ ಅಭಿಪ್ರಾಯ.
ರಾಜೀನಾಮೆ ಬರವಣಿಗೆ
ಸಾಮೂಹಿಕ ರಾಜೀನಾಮೆ ನೀಡಲು ಸನ್ನದ್ಧರಾಗಿದ್ದ ವೈದ್ಯರು.
ರಾಜೀನಾಮೆ ಪರಿಶೀಲನೆ
ರಾಜೀನಾಮೆಗಳನ್ನು ಜಿಲ್ಲಾವಾರು ರೀತಿಯಲ್ಲಿಯೇ ಪರಿಶೀಲಿಸಿದ ಮುಖ್ಯ ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿ.
ಮೂರು ವಾರ ಅಷ್ಟೇ
ರಾಜೀನಾಮೆ ನೀಡಿ ತೆರಳಿದ ವೈದ್ಯರು ಸಮ್ಮ ಸೇವೆ ನಿಮಗೆ ಇನ್ನು ಮೂರೇ ವಾರ ಎಂದು ಪರೋಕ್ಷವಾಗಿ ಘೋಷಿಸಿದಂತಿತ್ತು.