ಕೃಷ್ಣ ಸೇರಿದ್ದೇ ಸೇರಿದ್ದು, ಬಿಜೆಪಿ ಲೆಕ್ಕಾಚಾರವೂ ಬದಲು!
ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಎಂ ಕೃಷ್ಣ ಬಿಜೆಪಿಗೆ ಸೇರಿದ ನಂತರ, ರಾಜ್ಯ ಬಿಜೆಪಿಯ ಗೆಲುವಿನ ಲೆಕ್ಕಾಚಾರವೂ ಬದಲಾಗಿದೆ. ಕೃಷ್ಣ ಅವರ ವರ್ಚಸ್ಸನ್ನು ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.
ಕೆಲವು ರಾಜಕಾರಣಿಗಳ ವರ್ಚಸ್ಸೇ ಹಾಗೇ.. ಮುಂಬರುವ ದಿನಗಳಲ್ಲಿ ಅವರ ಪ್ರಭಾವ ಮತಬ್ಯಾಂಕುಗಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎನ್ನುವುದಕ್ಕಿಂದ, ಆ ಕ್ಷಣದಲ್ಲಿ ಪಕ್ಷಕ್ಕೆ ಅವರ ಆಗಮನ ಕಾರ್ಯಕರ್ತರಲ್ಲಿ ಮತ್ತು ಮುಖಂಡರಿಗೆ ಹೊಸ ಹುಮ್ಮಸ್ಸು ಮೂಡುತ್ತದೆ.
ಮೊದಲೇ ಉತ್ತರಪ್ರದೇಶದ ಅಭೂತಪೂರ್ವ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಾಜ್ಯ ಬಿಜೆಪಿ ಘಟಕಕ್ಕೆ, ಮಾಸ್ ಮುಖಂಡ ಎಸ್ ಎಂ ಕೃಷ್ಣ ಅವರ ಆಗಮನ ಮತ್ತಷ್ಟು ಚೈತನ್ಯ ತುಂಬಿದೆ. ಹಾಗಾಗಿ, ಬಿಜೆಪಿಯ ಮುಂಬರುವ ಅಸೆಂಬ್ಲಿ ಚುನಾವಣೆಯ ಗೆಲುವಿನ ಲೆಕ್ಕಾಚಾರವೂ ಬದಲಾಗಿದೆ. (ಮೋದಿ ಆದರ್ಶಕ್ಕೆ ಮರುಳಾದೆ, ಕೃಷ್ಣ)
ಒಂದು ಕಡೆ ದೇವೇಗೌಡ, ಕುಮಾರಸ್ವಾಮಿ ಇನ್ನೊಂದೆಡೆ ಯಡಿಯೂರಪ್ಪ ತಮ್ಮ ತಮ್ಮ ಪಕ್ಷಗಳನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯವೆಲ್ಲಾ ಸುತ್ತುತ್ತಿರುವ ಈ ಹೊಸ್ತಿಲಲ್ಲಿ ಕೃಷ್ಣಾಗಮನ ಮೇಲ್ನೋಟಕ್ಕೆ ಬಿಜೆಪಿಗೆ ಪ್ಲಸ್ ಪಾಯಿಂಟ್.
ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣ ಅವರ ವರ್ಚಸ್ಸು ಅಷ್ಟು ಪ್ರಾಮುಖ್ಯತೆ ಪಡೆಯದಿದ್ದರೂ, ಆ ಭಾಗದಲ್ಲಿ ಯಡಿಯೂರಪ್ಪನವರು ಪ್ರಭಾವ ಹೆಚ್ಚಾಗಿರುವುದರಿಂದ ಬಿಜೆಪಿಗೆ ಕೃಷ್ಣ ಅವರ ಬಲಬೇಕಾಗಿರುವುದು ಹಳೇ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ. [ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?]
ಇದುವರೆಗೆ ನೂರೈವತ್ತು ಸೀಟ್ ಎನ್ನುತ್ತಿದ್ದ ಬಿಜೆಪಿ ಮುಖಂಡರು ಎಸ್ ಎಂ ಕೃಷ್ಣ ಆಗಮನದಿಂದ 175 ಸೀಟ್ ಗ್ಯಾರಂಟಿ ಅನ್ನುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 175 ಸ್ಥಾನ ಗೆಲ್ಲಲಿದೆ ಎಂದು ಆರ್ ಅಶೋಕ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ತಲೆಯಾಡಿಸಿದ್ದಾರೆ. ಮುಂದೆ ಓದಿ..
ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆ
2018ರ ಅಸೆಂಬ್ಲಿ ಚುನಾವಣೆಗೆ 13-14 ತಿಂಗಳು ಬಾಕಿ ಇರುವಾಗ ಎದುರಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅಗ್ನಿಪರೀಕ್ಷೆಯಾಗಲಿದೆ. ಪ್ರಮುಖವಾಗಿ ನಂಜನಗೂಡಿನಲ್ಲಿ ಕೃಷ್ಣ ಅವರ ಪ್ರಭಾವವನ್ನು ಬಳಸಿಕೊಳ್ಳಲು ಬಿಜೆಪಿ ತುದಿಗಾಲಿನಲ್ಲಿ ನಿಂತಿದೆ.
ಕೃಷ್ಣ ಅಧಿಕೃತವಾಗಿ ಬಿಜೆಪಿಗೆ
ಅರ್ಹತೆ, ಯೋಗ್ಯತೆ ಇಲ್ಲದಿದ್ದರೆ ವಂಶ ಪಾರಂಪರ್ಯ ರಾಜಕಾರಣ ಒಪ್ಪಲು ಸಾಧ್ಯವಿಲ್ಲ ಎಂದು ನಾಲ್ಕು ದಶಕಗಳ ಸುದೀರ್ಘ ಕಾಂಗ್ರೆಸ್ ಒಡನಾಟಕ್ಕೆ ವಿದಾಯ ಹೇಳಿರುವ ಎಸ್ ಎಂ ಕೃಷ್ಣ ಈಗ ಬಿಜೆಪಿಯ ಮುಖಂಡ. ಕೃಷ್ಣ ಬಿಜೆಪಿ ಸೇರಿದ್ದಾರೆ ಎನ್ನುವುದು ರಾಜ್ಯದ ಕೆಲವು ಪ್ರಭಾವಿ ಮುಖಂಡರಿಗೆ ಇನ್ನೂ ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಕೃಷ್ಣ ನಡೆದ ದಾರಿಯಲ್ಲೇ ಅವರ ಬೆಂಬಲಿಗರು?
ಕೃಷ್ಣ ಜೊತೆ ಅವರ ಅಪಾರ ಬೆಂಬಲಿಗರು ಮತ್ತು ಮುಖಂಡರು ಕೃಷ್ಣ ನಡೆದ ದಾರಿಯಲ್ಲೇ ಸಾಗಬಹುದು ಎನ್ನುವ ಖಚಿತ ವಿಶ್ವಾಸದಲ್ಲಿ ಬಿಜೆಪಿ ಇರುವುದರಿಂದ, ಕೃಷ್ಣ ಅವರ ವಿದಾಯದ ಛಾಯೆ ಕಾಂಗ್ರೆಸ್ಸಿಗೆ ತಟ್ಟಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಈ ಎಲ್ಲಾ ಲೆಕ್ಕಾಚಾರದಿಂದಲೇ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಖಚಿತ ಭರವಸೆಯನ್ನು ಹೊಂದಿದೆ.
ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಯತ್ನ
ಒಂದೆಡೆ ಮೋದಿ ಅಲೆ, ಜೊತೆಗೆ ಚುನಾವಣೆಯ ವೇಳೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೈಜಂಪ್ ಮಾಡುವವರು ಇರುವಾಗ, ಎಸ್ ಎಂ ಕೃಷ್ಣ ಅವರ ಮೂಲಕ ಮಂಡ್ಯ ಮತ್ತು ಮೈಸೂರು ಭಾಗದ ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವುದು ಬಿಜೆಪಿಯ ಇನ್ನೊಂದು ಉದ್ದೇಶವಾಗಿರಬಹುದು. ಆ ಮೂಲಕ ಆ ಭಾಗದಲ್ಲಿ ಸೊರಗಿರುವ ಪಕ್ಷದ ವರ್ಚಸ್ಸನ್ನು ಮೇಲೆತ್ತುವುದು ಬಿಜೆಪಿ ಹಿರಿಯ ಮುಖಂಡರ ಲೆಕ್ಕಾಚಾರ.
ಒಕ್ಕಲಿಗ ಸಮುದಾಯದ ಮೇಲೆ ಕಣ್ಣು
ಇನ್ನು ಚುನಾವಣೆ ನಡೆಯುವುದು ಜಾತಿ ಸಮೀಕರಣದಿಂದ. ರಾಜ್ಯದ ಪ್ರಭಾವಿ ಒಕ್ಕಲಿಗ ಸಮುದಾಯದ ಆದ್ಯತೆ ಯಾರಿಗೆ ಎಂದಾಗ ಮೊದಲಿಗೆ ಕೇಳಿ ಬರುವುದು ಜೆಡಿಎಸ್ ಹೆಸರು, ನಂತರ ಕಾಂಗ್ರೆಸ್. ಈಗ ಎಸ್ ಎಂ ಕೃಷ್ಣ ಮೂಲಕ ಆ ಸಮುದಾಯದ ಮತದಾರರ ಕೈಗೆ ಕಮಲಕೊಡುವ ಉದ್ದೇಶ ಬಿಜೆಪಿ ಹೊಂದಿದೆ ಎನ್ನುವುದು ಸ್ಪಷ್ಟ. ಒಟ್ಟಿನಲ್ಲಿ ಬಿಜೆಪಿಗೆ ಕೃಷ್ಣಾಗಮನ ಪಕ್ಷಕ್ಕೆ ಹೊಸ ಹುರುಪನ್ನು ತಂದಿದ್ದಂತೂ ನಿಜ.