ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ: ಬಿ.ಸಿ.ಪಾಟೀಲ್
ಬೆಂಗಳೂರು, ಜನವರಿ 6: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವುದೇ ಊಹಾಪೋಹಗಳಿಗೆ ಇಲ್ಲಿ ಬೆಲೆ ಇಲ್ಲ. ಸಂಪುಟ ವಿಸ್ತರಣೆ ಯಾವಾಗ ಅಂತ ಸಿಎಂ ಅವ್ರೇ ಸ್ಪಷ್ಟಪಡಿಸುತ್ತಾರೆ. ಮೊಲಿನಿಂದಲೂ ಧನುರ್ಮಾಸ ಕಳೆದ ಮೇಲೆ ಮಾಡ್ತೀವಿ ಅಂದಿದ್ದಾರೆ. ಧನುರ್ಮಾಸ ಕಳೆದ್ಮೇಲೆ ಸಂಪುಟ ವಿಸ್ತರಣೆ ಆಗಬಹುದು. ನಾನು ಯಾವ ಖಾತೆಯನ್ನೂ ಸಿಎಂ ಬಳಿ ಕೇಳಿಲ್ಲ. ಕೆಲವರು ನಾನು ಪೊಲೀಸ್ ಇಲಾಖೆಯಿಲ್ಲಿ ಇದ್ದಿದ್ದರಿಂದ ಗೃಹ ಖಾತೆ ತಗೋಬಹುದು ಅಂತ ಭಾವಿಸಿದ್ದಾರೆ. ಸಿಎಂ ಯಾವ ಖಾತೆ ಕೊಡ್ತಾರೆ ಅಂತ ಮುಂದೆ ನೋಡೋಣ ಎಂದರು.
ದೊಡ್ಡ ಖಾತೆಗಳನ್ನ ಹಿರಿಯ ನಾಯಕರು ಬಿಟ್ಟು ಕೊಡಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರೂ ಕೂಡ ಇಲ್ಲಿ ಸೈಕಾಲಜಿ ಸ್ಟಡಿ ಮಾಡಿದವರಿಲ್ಲ. ಇಲ್ಲಿ ಖಾತೆ ಬಿಟ್ಟು ಕೊಡುವ ಪ್ರಶ್ನೆ ಬರಲ್ಲ. ಸಿಎಂ ಹಾಗೂ ಪಕ್ಷದ ತೀರ್ಮಾನವೇ ಅಂತಿಮ ಆಗುತ್ತೆ ಎಂದರು.

ಹಿರೇಕೆರೂರು ಶಾಸಕರಾಗಿರುವ ಬಿ.ಸಿ.ಪಾಟೀಲ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಕಳೆದ ತಿಂಗಳು ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಈಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.












Click it and Unblock the Notifications