Breaking; ಬಳ್ಳಾರಿ ಸಮಾವೇಶದ ಬಳಿಕ ಭಾರತ್ ಜೋಡೋ ಮತ್ತೆ ಆರಂಭ
ಬೆಂಗಳೂರು, ಅಕ್ಟೋಬರ್ 16; ಶನಿವಾರ ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಭಾರತ್ ಜೋಡೋ ಯಾತ್ರೆ ಭಾನುವಾರ ಮತ್ತೆ ಆರಂಭವಾಗಿದೆ. ಸಂಜೆ ಯಾತ್ರೆ ಕರ್ನಾಟದಿಂದ ಆಂಧ್ರ ಪ್ರದೇಶ ತಲುಪಲಿದೆ.
ಭಾನುವಾರ ಬೆಳಗ್ಗೆ 6.30ಕ್ಕೆ ಬಳ್ಳಾರಿಯ ಸಂಗನಕಲ್ಲುವಿನಿಂದ ಪಾದಯಾತ್ರೆ ಪುನಃ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೂರಾರು ಪಕ್ಷದ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಯಾತ್ರೆ ಕುರಿತು ಟ್ವೀಟ್ ಮಾಡಿದ್ದು, ಯಶಸ್ವಿ ಸಮಾವೇಶದ ನಂತರ ಭಾರತ ಐಕ್ಯತಾ ಯಾತ್ರೆ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಮುಂದುವರೆಯಲಿದೆ. 1000 ಕಿಲೋಮೀಟರ್ ನಡಿಗೆ ಪೂರೈಸಿದ ನಂತರವೂ ಉತ್ಸಾಹ ಇಮ್ಮಡಿಯಾಗಿದೆ. ದಣಿವು ಮಾಯವಾಗಿದೆ' ಎಂದು ಹೇಳಿದೆ.
ಬೆಳಗ್ಗೆ 11 ಗಂಟೆಗೆ ಯಾತ್ರೆ ಬಳ್ಳಾರಿಯ ಮೋಕಾ ತಲುಪಲಿದೆ. ಹನಿ ಫಂಕ್ಷನ್ ಹಾಲ್ನಲ್ಲಿ ಬೆಳಗಿನ ವಿರಾಮ ಪಡೆಯಲಿದೆ. ಸಂಜೆ 4 ಗಂಟೆಗೆ ಯಾತ್ರೆ ಮತ್ತೆ ಆರಂಭವಾಗಲಿದೆ.
ಸಂಜೆ 4 ಗಂಟೆಗೆ ಮತ್ತೆ ಆರಂಭವಾಗಲಿರುವ ಪಾದಯಾತ್ರೆ ಇಂದು ಆಂಧ್ರ ಪ್ರದೇಶ ತಲುಪಲಿದೆ. ಕರ್ನಾಟಕ-ಆಂಧ್ರ ಪ್ರದೇಶ ಗಡಿಯ ಆಲೂರ್ ಚಿತ್ರಗುಡಿ ಹುನುಮಾನ್ ದೇವಾಲಯದ ಬಳಿ ರಾತ್ರಿ ವಾಸ್ತವ್ಯ ಹೂಡಲಿದೆ.
ಶನಿವಾರ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಮಾತನಾಡಿ ರಾಹುಲ್ ಗಾಂಧಿ, "ಕಳೆದ ಕೆಲವು ದಿನಗಳಿಂದ ಭಾರತ ಜೋಡೋ ಯಾತ್ರೆ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಸಾಗುತ್ತಿದ್ದೇವೆ. 3500 ಕಿ. ಮೀ. ಪ್ರಯಾಣ ಇದಾಗಿದ್ದು, ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ ಮಾರ್ಗವಾಗಿ, ಕರ್ನಾಟಕಕ್ಕೆ ತಲುಪಿದೆ. ಆರಂಭದಲ್ಲಿ 3500 ಕಿ. ಮೀ. ಸಾಗುವುದು ಸುಲಭದ ಕೆಲಸವಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಪ್ರಯಾಣ ಆರಂಭಿಸಿ ದಿನ ಕಳೆದಂತೆ ನಂತರ ಹೆಜ್ಜೆ ಹಾಕುವುದು ಸುಲಭವಾಯಿತು" ಎಂದರು.
LIVE: After a historic rally, Shri @RahulGandhi resumes #BharatJodoYatra from Sanganakal village, Ballari.https://t.co/1XLV3L6roT
— Karnataka Congress (@INCKarnataka) October 16, 2022
"ಈ ಯಾತ್ರೆಯಲ್ಲಿ ನಾವು ಬಳಲಿದಾಗ ಯಾವುದಾದರೂ ಒಂದು ಶಕ್ತಿ ನಮಗೆ ಪ್ರೇರಣೆ ನೀಡಿ ಮುಂದೆ ಸಾಗುವಂತೆ ಮಾಡಿತ್ತು. ಸಣ್ಣ ಮಕ್ಕಳು, ವಿಕಲಚೇತನರು, ವೃದ್ಧರು, ಬಡವರ ಮಾತುಗಳಿಂದ ನಮಗೆ ಪ್ರೇರಣೆ ನೀಡುತ್ತಿತ್ತು. ಈ ಯಾತ್ರೆ ನಾವು ಯಾಕೆ ಪ್ರಾರಂಭಿಸಿದ್ದೇವೆ?. ಇದರ ಉದ್ದೇಶವೇನು?. ಇದರಿಂದ ನಮಗೆ ಸಿಗುತ್ತಿರುವ ನೆರವು ಯಾಕೆ ಸಿಗುತ್ತಿದೆ?. ನಮಗೆ ಪ್ರೇರಣೆ ನೀಡುತ್ತಿರುವ ಶಕ್ತಿ ಯಾರಿಂದ ಸಿಗುತ್ತಿದೆ?. ಯಾಕೆ ಸಿಗುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ" ಎಂದು ಹೇಳಿದರು.
"ಈ ಯಾತ್ರೆಗೆ ನಾವು ಭಾರತ ಜೋಡೋ ಯಾತ್ರೆ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ ಆರ್ ಎಸ್ಎಸ್ ವಿಚಾರಧಾರೆ ದ್ವೇಷ, ಹಿಂಸಾಚಾರದ ವಿಚಾರವಾಗಿದ್ದು ಇವುಗಳಿಂದ ದೇಶ ವಿಭಜನೆಯಾಗುತ್ತಿವೆ. ಹಿಂದೂಸ್ಥಾನದ ಮೇಲೆ ಇದೊಂದು ದಾಳಿ. ಇದು ದೇಶಭಕ್ತಿಯಲ್ಲ, ದೇಶ ವಿರೋಧಿ ಕೆಲಸವಾಗಿದೆ. ಕಳೆದೊಂದು ತಿಗಳಿಂದ ಯಾತ್ರೆ ಮಾಡುತ್ತಿದ್ದು, ಬೇರೆ ಬೇರೆ ಧರ್ಮ, ಜಾತಿ, ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ, ಕಾಣುತ್ತಿಲ್ಲ" ಎಂದು ರಾಹುಲ್ ಬಣ್ಣಿಸಿದರು.












Click it and Unblock the Notifications