Petrol Price: ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಅನ್ನೋರು ಪಾಕಿಸ್ತಾನಕ್ಕೆ ಹೋಗ್ರಿ; ಯತ್ನಾಳ್ ಹಳೇ ವಿಡಿಯೋ ವೈರಲ್
ಇಂಧನದ ಮೇಲಿನ ತೆರಿಗೆ ಹೆಚ್ಚಳದೊಂದಿಗೆ, ಪೆಟ್ರೋಲ್ ಬೆಲೆ ಲೀಟರ್ಗೆ ₹ 3 ಏರಿಕೆಯಾಗಿದೆ, ಬೆಂಗಳೂರಿನಲ್ಲಿ ₹ 99.84 ರಿಂದ ₹ 102.84 ಕ್ಕೆ ತಲುಪಿದೆ. ಡೀಸೆಲ್ ಬೆಲೆ ಲೀಟರ್ಗೆ ₹3.02ರಷ್ಟು ಏರಿಕೆಯಾಗಿದ್ದು, ಈಗ ₹85.93 ರಿಂದ ₹88.95ಕ್ಕೆ ಏರಿಕೆಯಾಗಿದೆ.
ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.25.92 ರಿಂದ ಶೇ.29.84ಕ್ಕೆ ಹೆಚ್ಚಿಸಲಾಗಿದ್ದು, ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರವು ಶೇ.14.3 ರಿಂದ ಶೇ.18.4 ಕ್ಕೆ ಏರಿಸಿದೆ.

ವ್ಯಾಪಕ ವಿರೋಧ
ಇನ್ನು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು, ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಉಚಿತ ಭಾಗ್ಯಗಳನ್ನು ನೀಡಲು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿದೆ ಎಂದು ಟೀಕಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದಾಗ ಸಿಎಂ ಸಿದ್ದರಾಮಯ್ಯನವರೇ ಈ ಬಗ್ಗೆ ವಿರೋಧ ಮಾಡಿದ್ದರು. ಈಗ ಅವರೇ ಸಿಎಂ ಆಗಿದ್ದು, ಅವರ ಸರ್ಕಾರದ ಅವಧಿಯಲ್ಲೇ ಬೆಲೆ ಹೆಚ್ಚಳ ಮಾಡಿರುವುದನ್ನು ಪ್ರಶ್ನೆ ಮಾಡಲಾಗುತ್ತಿದೆ.
ಬಸನಗೌಡ ಪಾಟೀಲ್ ಯತ್ನಾಳ್ ವಿಡಿಯೋ
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವನ್ನು ಬಿಜೆಪಿ ವಿರೋಧಿಸುತ್ತಿರುವುದನ್ನು ಟೀಕಿಸಲು ಕಾಂಗ್ರೆಸ್ ಬೆಂಬಲಿಗರು ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹಳೆಯ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದಾರೆ.
ಕೇಂದ್ರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದಾಗ ಮಾಡುತ್ತಿದ್ದ ಟೀಕೆಗಳ ಬಗ್ಗೆ ಮಾತನಾಡಿದ್ದ ಯತ್ನಾಳ್, ಪೆಟ್ರೋಲ್ ಬೆಲೆ ಹೆಚ್ಚಾದರೆ ಸಾಕು ಪಾಕಿಸ್ತಾನದಲ್ಲಿ ಕಡಿಮೆ ಇದೆ ಎಂದೆಲ್ಲಾ ಮಾತನಾಡುತ್ತಾರೆ, ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದ್ದರು.
ಈಗ ಅದೇ ವಿಡಿಯೋ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಬೆಂಬಲಿಗರು, ಬೆಲೆ ಏರಿಕೆ ವಿರೋಧಿಸುವ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಹೊಗ್ರಪಾ ಮತ್ತೆ ಅಲ್ಲೇ ಹೋಗಿರ್ರಿ...ಪಾಕಿಸ್ತಾನ...@BasanagoudaBJP ಸಾಹೇಬ್ರು ಹೇಳಾಕತ್ತಾರ...
— LATPOTBABA (@LATPOTBABA1) June 15, 2024
🤣🤣 pic.twitter.com/ZvQLV5e3vA
ಆರ್ ಅಶೋಕ್ ಖಂಡನೆ
ಆರ್ ಅಶೋಕ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೆ ಜನರಿಗೆ ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿಯೇ ಗತಿ ಎಂದು ಬೈಕ್ ಗಳ ಶವಯಾತ್ರೆ ನಡೆಸಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಹುಡುಕಿಕೊಡಿ ಎಂದು ಕೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾದರೆ ತರಕಾರಿ ಮತ್ತಿತರ ದಿನಬಳಕೆ ವಸ್ತುಗಳ ಬೆಲೆ ಜಾಸ್ತಿ ಆಗುತ್ತದೆ ಎಂದು ಬೊಬ್ಬಿಡುತ್ತಿದ್ದ, ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಮಾಡುವುದು ಬಡವರನ್ನು ಉಪವಾಸ ಬೀಳಿಸಿ ಸಾಯಿಸುವ ಫ್ಯಾಸಿಸ್ಟ್ ಮನಸ್ಸಿನ ಕ್ರೌರ್ಯ ಎನ್ನುತ್ತಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಹುಡುಕಿಕೊಡಿ ಎಂದು ವ್ಯಂಗ್ಯವಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಗ್ರಾಹಕರಿಗೆ ₹25 ರೂಪಾಯಿಗೆ ಪೆಟ್ರೋಲ್ ಹಾಕಿ ಪ್ರತಿಭಟನೆ ನಡೆಸಿದ್ದ ಸಿದ್ದರಾಮಯ್ಯನವರು ಕಾಣೆಯಾಗಿದ್ದಾರೆ, ಆಷಾಢಭೂತಿತನಕ್ಕೆ, ಬೂಟಾಟಿಕೆಗೆ ಯಾವುದಾದರೂ ನೋಬೆಲ್ ಅಥವಾ ಆಸ್ಕರ್ ಪ್ರಶಸ್ತಿ ಇದ್ದರೆ ಅದು ನಿಶ್ಚಿತವಾಗಿ ಡೋಂಗಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು ಎಂದಿದ್ದಾರೆ.












Click it and Unblock the Notifications