ಡಿ.ಕೆ.ಶಿವಕುಮಾರ್ ಜಂಘಾಬಲವನ್ನೇ ಅಲುಗಾಡಿಸಿದ ಇಡಿ: ಕನಕಪುರ ಬಂಡೆಗೆ ಯಾಕೀ 'ಜಿಗುಪ್ಸೆ'?
ತಿಹಾರ್ ಜೈಲಿನಿಂದ ಬಂಧಮುಕ್ತರಾಗಿ ಸದ್ಯ ಬೇಲ್ ನಲ್ಲಿರುವ ಡಿ.ಕೆ.ಶಿವಕುಮಾರ್, ಟೆಂಪಲ್ ರನ್ ಜೊತೆ, ವಿವಿಧ ಕಾರ್ಯಕ್ರಮಗಳಲ್ಲೇನೋ ಭಾಗವಹಿಸುತ್ತಿದ್ದಾರೆ. ಆದರೆ, ಅವರ ಹಿಂದಿನ ರಾಜಕಾರಣದ ಸ್ಟೈಲ್ ಕಾಣದಾಗುತ್ತಿದೆ.
ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿರುವ ಉಪಚುನಾವಣೆಯ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ, ವಿವಿಧ ವಿಚಾರಣೆಯ ಕುಣಿಕೆಗಳು ಬಲಗೊಳ್ಳುತ್ತಿವೆಯಾ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ.
ಇದಕ್ಕೆ ಕಾರಣ, ಕನಕಪುರದಲ್ಲಿ ವೈದ್ಯಕೀಯ ಕಾಲೇಜಿನ ವಿಚಾರವನ್ನು ಬಿಟ್ಟರೆ, ಮಿಕ್ಕ ಯಾವ 'ರಾಜಕೀಯ'ದಲ್ಲೂ ಡಿಕೆಶಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ. ಬೇರೆ ವಿಚಾರ ನನಗೆ ಬೇಡ ಎನ್ನುವ ಹೇಳಿಕೆಯನ್ನು ಡಿಕೆಶಿ ನೀಡುತ್ತಿದ್ದಾರೆ. ಶುಕ್ರವಾರ (ನ 1) ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಡಿಕೆಶಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿ ಹೈಕೋರ್ಟ್ ಬೇಲ್ ನೀಡಿರುವ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸರ್ವೋಚ್ಚ ನ್ಯಾಯಾಲಯದ ಕದತಟ್ಟಿದೆ. ಇಲ್ಲಿ ಏನು ತೀರ್ಪು ಬರುತ್ತದೆ ಎನ್ನುವುದು ಡಿಕೆಶಿಗೆ ಒಂದೆಡೆ ಆತಂಕ, ಜೊತೆಗೆ, ಬೇರೆ ಬೇರೆ ವಿಚಾರಣೆಗಳೂ ನಡೆಯುತ್ತಿದೆ ಎಂದು ಖುದ್ದು ಡಿಕೆಶಿ ಹೇಳಿದ್ದಾರೆ. ಡಿಕೆಶಿ ಇತ್ತೀಚಿನ ಹೇಳಿಕೆಗಳು, ಜಿಗುಪ್ಸೆ ಬಂದವರ ರೀತಿಯಲ್ಲಿ ಇರುವುದಂತೂ ಹೌದು.

ಡಿ.ಕೆ.ಶಿವಕುಮಾರ್ ಹಿಂಗೆ ಜಿಗುಪ್ಸೆ ಬಂದವರ ತರ ಆಡ್ತಾ ಇದ್ದಾರೆ
"ಕನಕಪುರಕ್ಕೆ ವೈದ್ಯಕೀಯ ಕಾಲೇಜು ನನ್ನ ಕನಸು, ಈ ವಿಚಾರದಲ್ಲಿ ರಾಜಕೀಯ ಮಾಡಿದರೆ ಸುಮ್ಮನಿರಲ್ಲ" ಇದೊಂದೇ ಖಡಕ್ ಹೇಳಿಕೆ, ಡಿ.ಕೆ.ಶಿವಕುಮಾರ್ ಅವರಿಂದ ಬಂದಿರುವುದು. ಇದು ಬಿಟ್ಟರೆ, ಕೇಂದ್ರ ಸರಕಾರ, ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ದ, ಬಿಡುಗಡೆಯ ನಂತರ, ಡಿಕೆಶಿ ತೀವ್ರವಾಗಿ ಏನೂ ಹರಿಹಾಯ್ದಿದಿಲ್ಲ.

ಹೊಸಕೋಟೆ ಉಪ ಚುನಾವಣಾ ಅಖಾಡಕ್ಕೆ ಸ್ವಾಗತಿಸುತ್ತೇನೆ
"ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಡಿ. ಕೆ. ಶಿವಕುಮಾರ್ ಅವರನ್ನು ಹೊಸಕೋಟೆ ಉಪ ಚುನಾವಣಾ ಅಖಾಡಕ್ಕೆ ಸ್ವಾಗತಿಸುತ್ತೇನೆ" ಎಂದು ಅನರ್ಹ ಶಾಸಕ ಎಂಬಿಟಿ ನಾಗರಾಜ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, "ಈಗ ನನಗೆ ಯಾವ ವಿಚಾರವೂ ಬೇಡ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ".

ನನಗಾಗಿ ಜನರು ಅತ್ತಿದ್ದಾರೆ, ನೊಂದಿದ್ದಾರೆ
"ನನಗಾಗಿ ಜನರು ಅತ್ತಿದ್ದಾರೆ, ನೊಂದಿದ್ದಾರೆ. ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ. ಕೆಲವರು ಅಲ್ಲೇ ಇದ್ದಾರೆ. ಹೊಸ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಶಕ್ತಿ ಗೊತ್ತಿಲ್ಲ. ನಾನು ಯಾವ ಯುದ್ಧವನ್ನೂ ಗೆದ್ದಿಲ್ಲ. ಜನರ ಪ್ರೀತಿ- ವಿಶ್ವಾಸವನ್ನು ತಡೆಯುವುದಕ್ಕೆ ಸಾಧ್ಯವಾ? ಪ್ರೀತಿ, ಮಾನವೀಯತೆ ಸ್ವೀಕರಿಸಬೇಕು. ಸಂಸ್ಕೃತಿ ಉಳಿಸಬೇಕು. ಅದಕ್ಕೆ ನಾನು ಬದ್ಧ. ನನಗೆ ಸದ್ಯ ಇಷ್ಟೇ ಸಾಕು" ಎನ್ನುವ ಹೇಳಿಕೆಯನ್ನೂ ನೀಡಿದ್ದರು.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವಿನ ವಾಕ್ಸಮರ
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವಿನ ವಾಕ್ಸಮರದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, "ಅದೆಲ್ಲಾ ದೊಡ್ಡವರ ವಿಚಾರ, ನನಗೆ ಅದೆಲ್ಲಾ ಯಾಕೆ" ಎನ್ನುವ ಮಾತನ್ನು ಡಿಕೆಶಿ ಹೇಳಿದ್ದರು. ತಮ್ಮ ಆರೋಗ್ಯದ ಬಗ್ಗೆಯೂ ಡಿಕೆಶಿ ಹೇಳಿದ್ದರು.

ನನಗೆ ನನ್ನದೇ ಸಾವಿರವಿದೆ. ನನ್ನ ಆರೋಗ್ಯದ ಕಡೆಗೂ ನಾನು ಗಮನಕೊಡಬೇಕು
ಇದೇ ರೀತಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ನನಗೆ ನನ್ನದೇ ಸಾವಿರವಿದೆ. ನನ್ನ ಆರೋಗ್ಯದ ಕಡೆಗೂ ನಾನು ಗಮನಕೊಡಬೇಕು. ನನ್ನ ತಾಯಿ, ಪತ್ನಿ, ಮಗಳ ವಿಚಾರಣೆಯೂ ನಡೆಯುತ್ತಿದೆ. ನನಗೆ ಇದೇ ಸಾಕಾಗಿ ಹೋಗಿದೆ" ಎನ್ನುವ ಜಿಗುಪ್ಸೆಯ ಮಾತನ್ನು ಡಿಕೆಶಿ ಹೇಳಿದ್ದರು.











Click it and Unblock the Notifications