ಬರ ಪೀಡಿತವಲ್ಲ, ಈಗ 'ಬರ ಮುಕ್ತ' ಕರ್ನಾಟಕ
ಬೆಂಗಳೂರು, ಅಕ್ಟೋಬರ್ 6: 2017ರ ಮಳೆ ಕರ್ನಾಟಕದ ಪಾಲಿಗೆ ಸಂಭ್ರಮ ತಂದಿದೆ. ಕರ್ನಾಟಕದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ 2011ರ ನಂತರ ಮೊದಲ ಬಾರಿಗೆ ಹಲವು ಕಡೆಗಳಲ್ಲಿ ಕರೆ ಕಟ್ಟೆಗಳು ತುಂಬಿವೆ. ಇದರಿಂದ ಜನರು ಮತ್ತು ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ.
ಕೋಟೆ ನಾಡಿನ ಮೇಲೆ ಕರುಣೆ ತೋರಿದ ವರುಣ, ರೈತರಲ್ಲಿ ಸಂತಸ
ಒಂದೆಡೆ ಸಾಮಾನ್ಯಕ್ಕೆ ಸಿಗುವ ಮಾಹಿತಿಗಳು ಹೀಗಾದರೆ ಬುಧವಾರ ಕಂದಾಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಗಳೂ ಇದನ್ನೇ ಹೇಳುತ್ತಿವೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಮಳೆ ಪ್ರಮಾಣದ ಮಾಹಿತಿ ಪ್ರಕಾರ ಕರ್ನಾಟಕದಾದ್ಯಂತ ಮಳೆ ಸುರಿದಿದೆ.
ಹಾಗೆ ನೋಡಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಕರ್ನಾಟಕದಲ್ಲಿ ನಿಗದಿಗಿಂತ ಶೇಕಡಾ 8ರಷ್ಟು ಮಳೆಯೇನೋ ಕಡಿಮೆಯಾಗಿದೆ. ಆದರೆ ಕೇಂದ್ರ ಸರ್ಕಾರದ ಬರ ನಿಗದಿ ಮಾನದಂಡಗಳಿಗಿಂತ ಹೆಚ್ಚಾಗಿ ಮಳೆ ಸುರಿದಿರುವುದರಿಂದ ಕರ್ನಾಟಕ ಬರಮುಕ್ತ ರಾಜ್ಯವಾಗಿದೆ.
In Pics:ಕುಂಭದ್ರೋಣ ಮಳೆಗೆ ಮುಳುಗುತಿಹುದು ಬೆಂಗಳೂರು
ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, "ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಾತ್ರ ಶೇ. 27ರಷ್ಟು ಹೆಚ್ಚುವರಿ ಮಳೆಯಾಗಿದೆ. ಉಳಿದ ಕಡೆ ಸರಾಸರಿಗಿಂತ ಕಡಿಮೆ ಮಳೆ ಬಿದ್ದಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ಕುಸಿಯುವ ನೀರಿಗೆ ಸಮಸ್ಯೆಯಾಗದು ಎಂದುಕೊಂಡಿದ್ದೇವೆ," ಎಂದು ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿಗರು ತತ್ತರ
ಮಳೆ ಪ್ರಮಾಣವನ್ನು ನೋಡಿಕೊಂಡು ಮುಂದಿನ ವಾರದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಿನ ತಾಲೂಕುಗಳನ್ನು ಕೈ ಬಿಡುವ ಸಾಧ್ಯತೆ ಇದೆ. ಕಳೆದ ಜನವರಿಯಲ್ಲಿ 139 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ನಂತರ ಇದಕ್ಕೆ ಮತ್ತೊಂದಷ್ಟು ತಾಲೂಕುಗಳನ್ನು ಸೇರಿಸಲಾಗಿತ್ತು.
ಹರಿದ ತುಂಗಭದ್ರಾ ನದಿ ನೀರು, ಗದಗದ ಭೀಷ್ಮ ಕೆರೆ ಭರ್ತಿ
ದಕ್ಷಿಣ ಕರ್ನಾಟಕದ 11 ಜಿಲ್ಲೆಗಳಲ್ಲಿ ಮಂಡ್ಯದಲ್ಲಿ ಶೇಕಡಾ 67ರಷ್ಟು ಹೆಚ್ಚುವರಿ ಮಳೆ ಬಿದ್ದಿದ್ದರೆ, ಚಾಮರಾಜನಗರದಲ್ಲಿ ಶೇಕಡಾ 47 ಮತ್ತು ಬೆಂಗಳೂರು ನಗರದಲ್ಲಿ ಶೇಕಡಾ 45 ರಷ್ಟು ಹೆಚ್ಚುವರಿ ಮಳೆಯಾಗಿದೆ.