Breaking: ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಬೊಮ್ಮಾಯಿ ಸರ್ಕಾರ ಆದೇಶ
ಬೆಂಗಳೂರು, ಜನವರಿ 12: ಮೇಕೆದಾಟು ಯೋಜನೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ರಾಮನಗರದ ಸಂಗಮದಿಂದ ಮೇಕೆದಾಟುವಿಗೆ ಕೈಗೊಂಡಿರುವ ಪಾದಯಾತ್ರೆಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತವಾಗಿ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಅವರು ಬುಧವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿದೆ. ಪಾದಯಾತ್ರೆ ಕೈಗೊಳ್ಳುವುದು, ಉದ್ದೇಶಿತ ಮಾರ್ಗದಲ್ಲಿ ವಾಹನ ಸಂಚಾರ, ಜನ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸರ್ಕಾರದ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.
ಕಾಂಗ್ರೆಸ್ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಬೊಮ್ಮಾಯಿ ಸರ್ಕಾರ ಆದೇಶ#KarnatakaGovt #Padayatre #Mekedatu #ಒನ್ಇಂಡಿಯಾಕನ್ನಡಸುದ್ದಿ pic.twitter.com/mYxPWpRcMm
— oneindiakannada (@OneindiaKannada) January 12, 2022
ಕೊರೊನಾವೈರಸ್ ಸೋಂಕು ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೇದಾಟು ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡಿದೆಯೇ? ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. "ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಸಂಪೂರ್ಣವಾಗಿ ಅಸಮರ್ಥವಾಗಿದೆಯೇ? ರಾಮನಗರ ಜಿಲ್ಲಾಧಿಕಾರಿಯನ್ನು ವಜಾ ಮಾಡಲು ನ್ಯಾಯಿಕ ಆದೇಶ ಹೊರಡಿಸಬೇಕೆ?" ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

"ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವಿಶೇಷವಾಗಿ ಕೆಪಿಸಿಸಿಗೆ ಪಾದಯಾತ್ರೆ ನಡೆಸಲು ರಾಜ್ಯ ಸರ್ಕಾರವು ಹೇಗೆ ಮತ್ತು ಏಕೆ ಅನುಮತಿ ನೀಡಿದೆ. ಪಾದಯಾತ್ರೆ ನಡೆಸುವವರ ವಿರುದ್ಧ ಸೂಕ್ತ ಕ್ರಮವನ್ನು ಏಕೆ ಜರುಗಿಸಿಲ್ಲ. ಆರನೇ ಪ್ರತಿವಾದಿಯಾದ ಕೆಪಿಸಿಸಿಯು ಪಾದಯಾತ್ರೆ ನಡೆಸಲು ಅಗತ್ಯ ಅನುಮತಿ ಪಡೆದಿದೆಯೇ? ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯಸೂಚಿಯನ್ನು (ಎಸ್ಒಪಿ) ಜಾರಿಗೊಳಿಸುವ ಕುರಿತು ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ. ಒಂದೊಮ್ಮೆ ಎಸ್ಒಪಿ ಉಲ್ಲಂಘನೆಯಾದರೆ ಯಾವ ಕ್ರಮಕೈಗೊಳ್ಳಬಹುದು ಎಂದು ಹೇಳಲು ಬಯಸುತ್ತೀರಾ? ಎಂಬುದರ ಕುರಿತು ವಿವರಣೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಶುಕ್ರವಾರದ (ಜ.14) ಪಟ್ಟಿಯಲ್ಲಿ ಮೊದಲ ಪ್ರಕರಣವನ್ನಾಗಿ ಪಟ್ಟಿ ಮಾಡಬೇಕು" ಎಂದು ಹೇಳಿದ ಪೀಠವು ವಿಚಾರಣೆ ಮುಂದೂಡಿತು.
ರಾಮನಗರ: ಜಿಲ್ಲೆಯೊಳಗೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ವಾಹನ ಸಂಚಾರ ನಿಷೇಧ@CMofKarnataka #Ramanagara #Mekedatu #NammaNeeruNammaHakku pic.twitter.com/VyFHiYhAgr
— oneindiakannada (@OneindiaKannada) January 12, 2022
ಕೆಪಿಸಿಸಿ ನಡೆಸುತ್ತಿರುವ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂದು ಕೋರಿ ಬೆಂಗಳೂರಿನ ತಿಂಡ್ಲು ನಿವಾಸಿ ಎ ವಿ ನಾಗೇಂದ್ರ ಪ್ರಸಾದ್ ಸಲ್ಲಿಸಿದ್ದ ಮನವಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂಬ ವಕೀಲ ಶ್ರೀಧರ್ ಪ್ರಭು ಅವರ ಕೋರಿಕೆ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸುಬ್ರಹ್ಮಣ್ಯ ಅವರು "ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಭೆ, ಸಮಾರಂಭ, ಸಮಾವೇಶ, ಪಾದಯಾತ್ರೆ, ಹಬ್ಬ-ಹರಿದಿನ, ಸಮಾವೇಶಗಳನ್ನು ನಿರ್ಬಂಧಿಸಿ ಜನವರಿ 4ರಂದು ಆದೇಶ ಹೊರಡಿಸಿದೆ. ರಾಮನಗರವೂ ಪ್ರವಾಸಿ ತಾಣವಾಗಿದ್ದು, ಅದನ್ನೂ ಒಳಗೊಂಡು ಎಲ್ಲಾ ಪ್ರವಾಸಿ ತಾಣಗಳ ಭೇಟಿಗೂ ನಿರ್ಬಂಧ ವಿಧಿಸಿ ಜನವರಿ 5ರಂದು ಆದೇಶ ಮಾಡಲಾಗಿದೆ. ಜನವರಿ 6ರಂದು ಕೆಪಿಸಿಸಿಗೆ ರಾಮನಗರ ಜಿಲ್ಲಾಧಿಕಾರಿ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಪಾದಯಾತ್ರೆ ಸಾಗುವ ಉದ್ದಕ್ಕೂ ಕೆಪಿಸಿಸಿ ಮತ್ತು ಅದರಲ್ಲಿ ಭಾಗವಹಿಸುವವರ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ" ಎಂದರು.
Recommended Video
"ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಸಂಪೂರ್ಣವಾಗಿ ಅಸಮರ್ಥವಾಗಿದೆಯೇ? ರಾಮನಗರ ಜಿಲ್ಲಾಧಿಕಾರಿಯನ್ನು ವಜಾ ಮಾಡಲು ನ್ಯಾಯಿಕ ಆದೇಶ ಹೊರಡಿಸಬೇಕೆ?" ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿತು. ಇದಾದ ಬಳಿಕ ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪಾದಯಾತ್ರೆಗೆ ನಿರ್ಬಂಧ ಹೇರಿ ಅಧಿಕೃತ ಆದೇಶ ಹೊರಡಿಸಿದೆ. ಈಗಾಗಲೇ 60ಕ್ಕೂ ಅಧಿಕ ಎಫ್ಐಆರ್ ದಾಖಲಾಗಿದ್ದು, ಪಾದಯಾತ್ರೆಯ ಮಾರ್ಗದಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿವೆ.












Click it and Unblock the Notifications