ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?
ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಬಿಜೆಪಿ ಸೇರಲು ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಂದ ಅಧಿಕೃತ ಆಹ್ವಾನ ಹೋಗುತ್ತಿದ್ದಂತೆ ಪಕ್ಷದಲ್ಲಿ ಭಾರೀ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಲ್ಲದೆ, ಕೇಂದ್ರ ವಿದೇಶಾಂಗ ಸಚಿವ ಸ್ಥಾನ, ಮಹಾರಾಷ್ಟ್ರದ ರಾಜ್ಯಪಾಲರ ಸ್ಥಾನವನ್ನೂ ಅಲಂಕರಿಸಿದ್ದ ಹೈಪ್ರೊಫೈಲ್ ರಾಜಕಾರಣಿ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಕ್ಷ ಸೇರುತ್ತಿರುವುದು ಖಂಡಿತವಾಗಿ ಬಿಜೆಪಿಯಲ್ಲಿ ಹುಮ್ಮಸ್ಸು ಮೂಡಿಸಿದೆ. [ಎಸ್ಸೆಂ ಕೃಷ್ಣ ಅವರಿಗೆ ಬಿಜೆಪಿಗೆ ಸೇರುವಂತೆ ಬಿಎಸ್ವೈರಿಂದ ಆಹ್ವಾನ]
84 ವರ್ಷದ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರು ಮಾರ್ಚ್ 22ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ಬಿಜೆಪಿ ಸೇರಿದ್ದಾರೆ. ಡಿವಿ ಸದಾನಂದ ಗೌಡ, ಅನಂತ್ ಕುಮಾರ್ ಭಾಗವಹಿಸಿದ್ದ ಸಭೆಯಲ್ಲಿ ಅಧಿಕೃತವಾಗಿ ಕಮಲದ ಪುಷ್ಪವನ್ನು ಸ್ವೀಕರಿಸಿದ್ದಾರೆ.[ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?]
ಸದಾಶಿವನಗರದಲ್ಲಿರುವ ಎಸ್ಎಂ ಕೃಷ್ಣ ಅವರ ಮನೆಗೆ ಯಡಿಯೂರಪ್ಪ ಮತ್ತು ಆರ್ ಅಶೋಕ ಅವರು ಭೇಟಿಯಾಗಿ, ಮಾರ್ಚ್ 7 ಸೋಮವಾರ ಮಾತುಕತೆ ನಡೆಸಿದ್ದರು. ಇದೊಂದು ಸೌಜನ್ಯಕರ ಭೇಟಿಯಾಗಿತ್ತು ಎಂದು ಯಡಿಯೂರಪ್ಪ ಹೇಳಿದ್ದರೂ, ಕೃಷ್ಣ ಅವರಿಗೆ ಆಹ್ವಾನ ಹೋಗಿದ್ದಂತೂ ರಹಸ್ಯವಾಗೇನೂ ಉಳಿದಿಲ್ಲ.[ಕೃಷ್ಣ ರಾಜೀನಾಮೆ: ಮಂಡ್ಯದಲ್ಲಿ ಅತಂತ್ರವಾಯ್ತು ಕಾಂಗ್ರೆಸ್!]
ಎಸ್ಎಂ ಕೃಷ್ಣ ಅವರ ಸೇರ್ಪಡೆಯ ಲಾಭನಷ್ಟಗಳೇನು
ಎಸ್ಎಂ ಕೃಷ್ಣ ಅವರು ಕಾಂಗ್ರೆಸ್ ನಾಯಕರಿಗೆ, ಅದರಲ್ಲಿಯೂ 'ಯುವ' ನೇತಾರ ರಾಹುಲ್ ಗಾಂಧಿ ಅವರಿಗೆ ಬೇಡವಾಗಿದ್ದರು ಎಂಬುದು ಗುಟ್ಟಾಗಿರುವ ವಿಷಯವಾಗೇನೂ ಉಳಿದಿಲ್ಲ. ಸಿದ್ದರಾಮಯ್ಯನವರ ರಾಜ್ಯಭಾರ ಆರಂಭವಾದಾಗಿನಿಂದ ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಮರ್ಯಾದೆಯೂ ಸಿಗುತ್ತಿಲ್ಲ ಎಂಬುದು ಅವರ ನಿಷ್ಠರು ಕೂಡ ಒಪ್ಪಿಕೊಳ್ಳುತ್ತಾರೆ.
ಈ ಕುರಿತಾಗಿ ಒನ್ಇಂಡಿಯಾ ಕೇಳಿದ ಪ್ರಶ್ನೆ
ಕೃಷ್ಣ ಅವರು ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ ಸೇರಿದರೆ ಆಗುವ ಲಾಭನಷ್ಟಗಳೇನು ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡಲಾಗಿತ್ತು. ಇದಕ್ಕೆ ಶೇ.38ರಷ್ಟು ಓದುಗರು ಲಾಭವೂ ಇಲ್ಲ ನಷ್ಟವೂ ಇಲ್ಲ ಎಂದಿದ್ದರೆ, ಶೇ.32ರಷ್ಟು ಮಂದಿ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಎಂದಿದ್ದಾರೆ. ಶೇ.24ರಷ್ಟು ಓದುಗರು ಬಿಜೆಪಿಗೆ ಆನೆಬಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ.7ರಷ್ಟು ಏನನ್ನೂ ಹೇಳುವುದು ಕಷ್ಟ ಎಂದು ನುಡಿದಿದ್ದಾರೆ.
ಇದರಿಂದ ಒಂದು ವಿಷಯವಂತೂ ಸ್ಪಷ್ಟ
ಕೃಷ್ಣ ಬಿಜೆಪಿ ಸೇರುವುದರಿಂದ ಒಂದಿಷ್ಟು ಮರ್ಯಾದೆ ಸಿಗಬಹುದು, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಕ್ಯಾಂಪೇನರ್ ಎಂಬ ಪಟ್ಟವೂ ಸಿಗಬಹುದು. ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಒಂದಿಷ್ಟು ಹೆಚ್ಚಿನ ಮತಗಳು ಸಿಕ್ಕರೂ ಸಿಗಬಹುದು. ಆದರೆ, ಅವರೇ ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಸ್ಪರ್ಧಿಸಿದರೂ ಎಲ್ಲಿಂದ? ಆ ಮಟ್ಟಿನ ಹುಮ್ಮಸ್ಸು ಅವರಲ್ಲಿದೆಯಾ?
ಬಿಜೆಪಿಯಲ್ಲಿ ಅವರಿಗೆ ಯಾವ ಸ್ಥಾನ?
ಇದು ಸದ್ಯಕ್ಕೆ ಬಹುಚರ್ಚಿತವಾಗುತ್ತಿರುವ ಪ್ರಶ್ನೆ. ಬಿಜೆಪಿ ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿದರೂ ಮುಖ್ಯಮಂತ್ರಿ ಪಟ್ಟಕ್ಕೆ ಯಡಿಯೂರಪ್ಪ ಎಂದಿದ್ದರೂ ಗಟ್ಟಿ. ಈಶ್ವರಪ್ಪ ತಮ್ಮ ಟವೆಲ್ಲನ್ನು ಹಾಕಿದರೂ ಸಿಗುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿಯಲ್ಲಿ ಕೃಷ್ಣ ಅವರಿಗೆ ಸಿಗುವ ಸ್ಥಾನಮಾನಗಳೇನು? ಅಥವಾ ಕೇಂದ್ರದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಬಹುದಾ? ಅಥವಾ ಅಲ್ಲಿಯೂ ಮೂಲೆಗುಂಪಾಗಲಿದ್ದಾರಾ?
ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ಸಿಗಾಗುವ ನಷ್ಟ
ಪ್ರತ್ಯಕ್ಷವಾಗಿ ಕಾಂಗ್ರೆಸ್ಸಿಗೆ ನಷ್ಟವಾಗದಿದ್ದರೂ ಪರೋಕ್ಷವಾಗಿ ಹೊಡೆತ ಬೀಳುವುದಂತೂ ಗ್ಯಾರಂಟಿ. ಅವರ ಹಿಂದೆ ಕೆಲ ತಲೆಗಳು ಪಕ್ಷಾಂತರಗೊಂಡರೂ ಅಚ್ಚರಿಯಿಲ್ಲ. ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಕುರ್ಚಿ ಅಲ್ಲಾಡುತ್ತಿದೆ, ಹಲವಾರು ದಿಗ್ಗಜರು ಕಣ್ಣಿಟ್ಟಂತೂ ಕುಳಿತಿದ್ದಾರೆ. ಉತ್ತರಪ್ರದೇಶದ ಚುನಾವಣೆಯ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿರುವ ಕೆಲವರ ಹೆಸರುಗಳು ಈಗಾಗಲೆ ಬ್ರೇಕಿಂಗ್ ನ್ಯೂಸಲ್ಲಿ ಕಾಣಲು ಶುರುವಾಗಿದೆ.