ಮುಂದಿನ ಮಂಡ್ಯ ಲೋಕಸಭಾ ಅಭ್ಯರ್ಥಿ ನಾನೇ: ರಮ್ಯಾ
ಮಂಡ್ಯ, ಅಕ್ಟೋಬರ್ 26: ಸಂಸದೆ, ನಟಿ ರಮ್ಯಾ ತಮಗಿನ್ನು ಮಂಡ್ಯವೇ ಕರ್ಮಭೂಮಿ ಎಂದು ಘೋಷಿಸಿಕೊಂಡಿದ್ದಾರೆ. ಸಾಕುತಂದೆಯ ಸಾವಿನ ನಡುವೆಯೂ ದೃಢಿಗೆಡದ ರಾಜಕೀಯ ಭವಿಷ್ಯ ರೂಪಿಸಿಕೊಂಡ ನಟಿ ರಮ್ಯಾ ಅದೇ ಗುಂಗಿನಲ್ಲಿ ಸಂಸದೆಯಾಗಿ ಭಾರಿ ಅಂತರದೊಂದಿಗೆ ಗೆದ್ದುಬಂದಿದ್ದೂ ಅಲ್ಲದೆ ಮುಂದೆಯೂ ಇದೇ ಮಂಡ್ಯದಿಂದ ಚುನಾವಣೆಗಳಿಗೆ ನಿಲ್ಲುವುದಾಗಿ ಪ್ರಕಟಿಸಿದ್ದಾರೆ.

ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಾಯಕಿಯಾಗಿ ಮನೋಜ್ಞ ಅಭಿನಯಕ್ಕಾಗಿ 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ನಿನ್ನೆಯಷ್ಟೇ ಭಾಜನರಾದ ಲೋಕಸಭೆ ಸದಸ್ಯೆ ರಮ್ಯಾ ಅವರು ಹಾಲಿ ಸಂಸದೆಯಾಗಿ ಈಗಾಗಲೇ ಮಂಡ್ಯದಲ್ಲಿ ಠಿಕಾಣಿ ಹೂಡಿದ್ದು, ಮುಂದಿನ ಚುನಾವಣೆಗೆ ತಮ್ಮ ಬೇಸ್ ಅನ್ನು ಭದ್ರಪಡಿಸಿಕೊಳ್ಳುತ್ತಿರುವುದು ಮಂಡ್ಯದ ಜನತೆಗೆ ಈಗಾಗಲೇ ಮನದಟ್ಟಾಗಿರುವ ವಿಷಯ. ಆದಾಗ್ಯೂ ಈಗ ಸ್ವತಃ ರಮ್ಯಾ ಅವರು ಮಂಡ್ಯ ಕ್ಷೇತ್ರದ ಮುಂದಿನ ಅಭ್ಯರ್ಥಿ ತಾವೇ ಎಂದು ಹೇಳುವ ಮೂಲಕ ಅಭಿಮಾನಿಗಳಿಗೂ ಸಿಹಿ ಸುದ್ದಿ ನೀಡಿದ್ದಾರೆ.
ಪಾಂಡವಪುರ ತಾಲೂಕಿನ ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುತ್ತಮುತ್ತಲ ನಾಲ್ಕಾರು ಗ್ರಾಮಗಳಿಗೆ ಭೇಟಿ ನೀಡಿ ಕಳೆದ ಚುನಾವಣೆಯಲ್ಲಿ ತಮಗೆ ಮತ ನೀಡಿ ಆಶೀರ್ವದಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಆ ಸಂದರ್ಭದಲ್ಲಿ ಮುಂದೆಯೂ ನಾನೇ ಕಣಕ್ಕಿಳಿಯಲಿದ್ದೇನೆ. ಆಗ ತಾವೆಲ್ಲಾ ನನಗೆ ಮತ ಹಾಕಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದೇ ಸಮನೆ ಮಂಡ್ಯ ಜಿಲ್ಲೆಯ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ದಿವ್ಯಸ್ಪಂದನ ಅವರಿಗೆ ಮಂಡ್ಯ ಜನ ಸಹ ಮನಸೋತಂತಿದ್ದಾರೆ. ತಮ್ಮ ಸಂಸದೆ ರಮ್ಯಾ ಗ್ರಾಮದತ್ತ ಬರುವುದನ್ನೇ ಕಾಯುವ ಗ್ರಾಮಸ್ಥರು ಅವರು ಬರುತ್ತಿದ್ದಂತೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾರೆ. ಅದಕ್ಕೆ ರಮ್ಯಾ ಸಹ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದಾರೆ.
ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಜನರು ತಮ್ಮ ಗ್ರಾಮಗಳ ಸಮಸ್ಯೆಗಳ ಬಗ್ಗೆ ಅಹವಾಲುಗಳಿದ್ದರೆ, ಮಂಡ್ಯದ ಕಾವೇರಿ ಭವನದಲ್ಲಿರುವ ತಮ್ಮ ಕಚೇರಿಗೆ ಅರ್ಜಿ ಸಲ್ಲಿಸಿದರೆ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ರಮ್ಯಾ ಭರವಸೆ ನೀಡಿದರು.












Click it and Unblock the Notifications