ಅಪ್ಪು ನೋಡಲು ಹಿಮಾಚಲಪ್ರದೇಶದಿಂದ ಸೈಕಲ್ನಲ್ಲಿ ಬರುತ್ತಿರುವ ಅಭಿಮಾನಿ!
ಬೆಂಗಳೂರು, ಡಿ. 29: ದಿವಂಗತ ನಟ ಪುನೀತ್ ನಮ್ಮನ್ನಗಲಿ ಎರಡು ತಿಂಗಳಾಗಿದೆ. ಪುನೀತ್ ಹುಚ್ಚು ಅಭಿಮಾನಿಯೊಬ್ಬ ಹಿಮಾಚಲ ಪ್ರದೇಶದಿಂದ ಪುನೀತ್ ಸಮಾಧಿ ವರೆಗೆ ಸೈಕಲ್ ಪ್ರಯಾಣ ಆರಂಭಿಸಿದ್ದಾರೆ.
ಹಿಮಾಚಲ ಪ್ರದೇಶದ ಮಣಿಕರನ್ನಿಂದ ಹದಿನೈದು ದಿನದ ಹಿಂದೆ ಸೈಕಲ್ ಸವಾರಿ ಅರಂಭಿಸಿರುವ ಈ ಹುಚ್ಚು ಅಭಿಮಾನಿ ಈವರೆಗೂ 1500 ಕಿ.ಮೀ. ಕ್ರಮಿಸಿ ಉತ್ತರ ಪ್ರದೇಶ ತಲುಪಿದ್ದಾನೆ. ಕನಕಪುರ ಮೂಲದ ಪುನೀತ್ ಅಭಿಮಾನಿಯ ಸೈಕಲ್ ಸವಾರಿ ಹಿಂದೆ ಒಂದು ರೋಚಕ ಕಥೆಯಿದೆ. ಇಲ್ಲಿದೆ ನೋಡಿ.
ಆತನ ಹೆಸರು ಗುರುಪ್ರಕಾಶ್ ಗೌಡ. ಕನಕಪುರ ರಸ್ತೆಯ ಯಲಚಿಕಟ್ಟೆ ನಿವಾಸಿ. ಚಿಕ್ಕ ವಯಸ್ಸಿಗೆ ಶಾಲೆ ಬಿಟ್ಟು ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಇಬ್ಬರು ಸಹೋದರಿಯರಿಗೆ ಮದುವೆ ಮಾಡಿ ಮುಗಿಸಿ ಸಿನಿಮಾ ರಂಗದಲ್ಲಿ ಕೆಲಸಕ್ಕೆ ಸೇರಿದ್ದರು. ಮೌಂಟ್ ಎವರೆಸ್ಟ್ ಹತ್ತುವ ಕನಸು ಹೊತ್ತು ಒಂದೂವರೆ ವರ್ಷದ ಹಿಂದೆ ಊರು ಬಿಟ್ಟು ಹಿಮಾಚಲ ಪ್ರದೇಶಕ್ಕೆ ತೆರಳಿದರು. ಟ್ರಕ್ಕಿಂಗ್, ಸಾಹಸ ಎಂದರೆ ನಟ ಪುನೀತ್ ಗೆ ಪ್ರಾಣ. ಅದೇ ರೀತಿ, ಪುನೀತ್ ಹಾದಿ ಹಿಡಿದ ಗುರು ಪ್ರಸಾದ್ ಗೌಡ ಹಿಮಾಚಲ ಪ್ರದೇಶಕ್ಕೆ ತೆರಳಿ ಅಲ್ಲಿ ತರಬೇತಿಗೆ ಸೇರಿಕೊಂಡಿದ್ದಾರೆ. ಒಂದೂವರೆ ವರ್ಷದಿಂದ ಟಕ್ಕಿಂಗ್ ತರಬೇತಿ ಪಡೆದು ಹಿಮಾಚಲ ಪ್ರದೇಶದ ಬೆಟ್ಟ- ಗುಡ್ಡ ಹತ್ತಿ ಇಳಿದಿದ್ದಾರೆ.
ಪುನೀತ್
ನಿಧನದ
ನೋವು:
ನಟ ಪುನೀತ್ ನಿಧನದ ಸುದ್ದಿ ಕೇಳಿ ದಿಗ್ರ್ಬಾಂತನಾಗಿರುವ ಗುರು ಪ್ರಸಾದ್ ಇದೀಗ ಸೈಕಲ್ ಸವಾರಿ ಮೂಲಕ ನೆಚ್ಚಿನ ಅಪ್ಪುಗೆ ನಮನ ಸಲ್ಲಿಸಲು ಸೈಕಲ್ ಸವಾರಿ ಆರಂಭಿಸಿದ್ದಾರೆ. ಹದಿನೆಂಟು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಮಣಿಕರನ್ ನಿಂದ ಸೈಕಲ್ ತುಳಿದೇ ಅಪ್ಪು ಸಮಾಧಿ ನೋಡಲು ಬರುತ್ತಿದ್ದಾರೆ. ಈಗಾಗಲೇ 1500 ಕಿ.ಮೀ. ಕ್ರಮಿಸಿದ್ದು, ಮುಂದಿನ ಹದಿನೈದು ದಿನದಲ್ಲಿ ಬೆಂಗಳೂರಿನ ಅಪ್ಪು ಸಮಾಧಿ ತಲುಪಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸೈಕಲ್ ಖರೀದಿಸಿ ಅಪ್ಪು ಗಾಗಿ ಅಲ್ಲಿಂದ ಏಕಾಂಗಿಯಾಗಿ "ಸೋಲೋ" ಸೈಕಲ್ ಪ್ರಯಾಣ ಆರಂಭಿಸಿದ್ದಾರೆ.
ಅಪ್ಪು ಬಳಿ ಶಹಬ್ಬಾಸ್ ಪಡೆಯಲು ಆಸೆ:
ನನ್ನ ದಾಯಾದಿಗಳು ಮೋಸ ಮಾಡಿ ಆಸ್ತಿ ಕಬಳಿಸಿಬಿಟ್ಟರು. ಇಬ್ಬರ ಸಹೋದರಿಯ ಜೀವನ ಸೆಟ್ಲ್ ಮಾಡಿ ನಾನು ಸಿನಿಮಾ ರಂಗದಲ್ಲಿ ಕೆಲಸಕ್ಕೆ ಸೇರಿದೆ. ಅಪ್ಪು ಅವರ ಸರಳತನ ನೋಡಿ ಅವರಿಂದ ಶಹಬ್ಬಾಸ್ ಗಿರಿ ಪಡೆದು ಬೆನ್ನು ತಟ್ಟಿಸಿಕೊಳ್ಳುವ ಆಸೆ ಪಟ್ಟೆ. ಮೊದಲು ಜಿಮ್ ಟ್ರೈನರ್ ಆಗಿದ್ದವನು, ಸಿನಿಮಾ ರಂಗ ಸೇರಿಕೊಂಡೆ. ಒಂದು ದಿನ ನಾನು ಮೌಂಟ್ ಎವರೆಸ್ಟ್ ಹತ್ತಬೇಕು. ಕನ್ನಡ ನಾಡಿಗೆ ಹೆಸರು - ಕೀರ್ತಿ ತರಬೇಕು. ನನ್ನ ಸಾಹಸ ನೋಡಿ ಅಪ್ಪು ಖುಷಿ ಪಟ್ಟು ಬೆನ್ನುತಟ್ಟಬೇಕು ಎಂಬ ಆಸೆ ಹೊತ್ತು ನಾನು ಹಿಮಾಚಲ ಪ್ರದೇಶಕ್ಕೆ ತೆರಳಿದೆ. ಅಲ್ಲಿ ಮೂರು ವರ್ಷ ತರಬೇತಿ ಪಡೆಯುವ ಅನಿವಾರ್ಯತೆ ಎದುರಾಯಿತು. ತರಬೇತಿಗೆ ಲಕ್ಷಾಂತರ ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ನಾನು ಅಪ್ಪು ಅಣ್ಣನನ್ನು ಭೇಟಿ ಮಾಡಿ ಮೌಂಟ್ ಎವೆರಸ್ಟ್ ಹತ್ತುವ ಕನಸು ಹಂಚಿಕೊಳ್ಳಲು ಯೋಜಿಸಿದ್ದೆ. ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಗುರು ಪ್ರಕಾಶ್ ಗೌಡ ತನ್ನ ನೋವು ಒನ್ ಇಂಡಿಯಾ ಕನ್ನಡ ಜತೆ ತೋಡಿಕೊಂಡರು.
ಅಪ್ಪುಗೆ ನಮನ ಪ್ರಯಾಣ:
ಅಪ್ಪುಗೆ ನಮನ ಸಲ್ಲಿಸುವ ಸಲುವಾಗಿ ಹಿಮಾಚಲ ಪ್ರದೇಶದಿಂದ ಬೆಂಗಳೂರು ಅಪ್ಪು ಸಮಾಧಿ ವರೆಗೆ ಸೈಕಲ್ ಪ್ರಯಾಣ ಆರಂಭಿಸಿದ್ದಾರೆ. ಮುಂದಿನ ಹದಿನೈದು ದಿನದಲ್ಲಿ ಅಪ್ಪು ಸಮಾಧಿ ತಲುಪಲಿದ್ದು, ಆ ಬಳಿಕ ಪುನಃ ನೇಪಾಳಕ್ಕೆ ತರಬೇತಿಗೆ ತೆರಳುತ್ತೇನೆ. ಇನ್ನು ಒಂದೂವರೆ ವರ್ಷ ತರಬೇತಿ ಮುಗಿಸಿಕೊಂಡು ಆನಂತರ ಮೌಂಟ್ ಎವೆರೆಸ್ಟ್ ಹತ್ತುತ್ತೇನೆ. ಕರ್ನಾಟಕ ಕೀರ್ತಿ ತರುವ ಆಸೆ ಹೊಂದಿದ್ದೇನೆ ಎಂದು ಗುರು ಪ್ರಕಾಶ್ ಗೌಡ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.