ಉತ್ತಮ ಮಳೆಯಾದರೂ 514 ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ: ಕ್ರಮಕ್ಕೆ ಮುಂದಾದ ಸರ್ಕಾರ
ಬೆಂಗಳೂರು, ಜುಲೈ 24: ರಾಜ್ಯದ 101 ತಾಲೂಕುಗಳ 514 ಗ್ರಾಮಗಳಿಗೆ 6.14 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಇಲಾಖೆ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಉತ್ತಮ ಮಳೆಯ ನಡುವೆಯೂ ನೀರಿನ ಅಭಾವ ಹೆಚ್ಚಿರುವ ಎಲ್ಲ ಗ್ರಾಮಗಳಿಗೆ ಪ್ರತಿದಿನ ಸುಮಾರು 703 ಟ್ರಿಪ್ಗಳ ಮೂಲಕ 254 ಟ್ಯಾಂಕರ್ಗಳಷ್ಟು ನೀರು ಪೂರೈಸಲು ಇಲಾಖೆ ಕ್ರಮ ಕೈಗೊಂಡಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸತತ ಸಭೆ ನಡೆಸಿ ಗಮನಕ್ಕೆ ತರಲಾಗಿದೆ ಎಂದು ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುವುದಲ್ಲದೆ, 101 ತಾಲೂಕುಗಳ 366 ಗ್ರಾಮ ಪಂಚಾಯಿತಿಗಳಲ್ಲಿ ನೀರು ಪೂರೈಕೆಗೆ ತೊಂದರೆಯಾಗಿರುವ 465 ಬೋರ್ವೆಲ್ಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲು 4.21 ಕೋಟಿ ರೂ., ಬೋರ್ವೆಲ್ ಬಾಡಿಗೆಗೆ 93 ಲಕ್ಷ ರೂ.ಗಳನ್ನು ಇಲಾಖೆ ಬಿಡುಗಡೆ ಮಾಡಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿ ಆಕಸ್ಮಿಕ ಯೋಜನೆ ರೂಪಿಸಿದ್ದು, ಮಳೆ ಕೊರತೆ ಹಾಗೂ ಗ್ರಾಮಗಳ ಕೆರೆಗಳಲ್ಲಿನ ನೀರಿನ ಮೂಲಗಳು ಬರಿದಾಗುತ್ತಿರುವ ಕುರಿತು ಹಲವು ನಿರ್ಣಾಯಕ ಅಂಶಗಳನ್ನು ವಿಶ್ಲೇಷಿಸಿ ಈ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
101 ತಾಲ್ಲೂಕುಗಳಲ್ಲಿ 366 ಗ್ರಾಮ ಪಂಚಾಯಿತಿಗಳ 514 ಗ್ರಾಮಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿಯು ತೋರಿಸಿದೆ. ಈ ಗ್ರಾಮಗಳಿಗೆ ನೀರು ಪೂರೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ, ಆದರೆ ಆರ್ಡಿಪಿಆರ್ ಇಲಾಖೆಯು ತನ್ನ ಯೋಜನೆಯಂತೆ ಈ ಗ್ರಾಮಗಳ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸಲು ಹೆಚ್ಚುವರಿಯಾಗಿ 5.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಯಾರಾದ ನಿಯೋಜಿತ ರೂಪುರೇಷೆ (ಕಂಟಿನ್ಜೆನ್ಸಿ ಪ್ಲಾನ್) ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆಯಿಂದ ಸರ್ಕಾರದ ವತಿಯಿಂದ ₹5.14 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿದೆ. ಇದರಿಂದ, ಈ ಹಿಂದೆ ಒದಗಿಸಿದ್ದ 1 ಕೋಟಿ ಹಣ ಸೇರಿದಂತೆ ಸರ್ಕಾರ ಈವರೆಗೂ ಒಟ್ಟು ₹6.14 ಕೋಟಿ ಹಣ ನೀಡಿದಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.












Click it and Unblock the Notifications