ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್, ಹಿಂದಿನ ಕಾಂಗ್ರೆಸ್ ಸರ್ಕಾರದ ಕನಸು ಭಗ್ನ
ಬೆಂಗಳೂರು, ಆ.11. ಭ್ರಷ್ಟಚಾರ ನಿಗ್ರಹ ದಳ-ಎಸಿಬಿ ರಚನೆ ಮಾಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ 2016ರಲ್ಲಿ ಮಾಡಿದ್ದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಅಲ್ಲದೆ, ಲೋಕಾಯುಕ್ತಕ್ಕೆ ಮೊದಲು ನೀಡಿದ್ದ ಅಧಿಕಾರವನ್ನು ಮರಳಿ ನೀಡಬೇಕು, ಅದಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಆಗಬೇಕು ಎಂದು ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ತೀರ್ಪು ಪ್ರಕಟಿಸಿತು.
ವಕೀಲರಾದ ಚಿದಾನಂದ ಅರಸ್, ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಪೀಠ ಸುದೀರ್ಘ ತೀರ್ಪು ನೀಡಿದೆ.
ವಾದ-ಪ್ರತಿವಾದ ಆಲಿಸಿ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್ ಎಸಿಬಿ ರಚನೆಯನ್ನೇ ರದ್ದುಗೊಳಿಸಿದೆ.

ಎಲ್ಲ ಕೇಸ್ ಲೋಕಾಯುಕ್ತಕ್ಕೆ: ಸದ್ಯ ಎಸಿಬಿಯ ಮುಂದಿರುವ ಎಲ್ಲ ಕೇಸ್ ಲೋಕಾಯುಕ್ತಕ್ಕೆ ವರ್ಗಾವಣೆಗೊಳ್ಳಲಿವೆ. ಎಸಿಬಿ ಈವರೆಗೂ ನಡೆಸಿರುವ ತನಿಖೆಯು, ವಿಚಾರಣೆಯು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿದೆ. ಎಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳು ಪುನರ್ ಸ್ಥಾಪನೆಯಾಗಲಿವೆ. ಎಸಿಬಿಯಲ್ಲಿರುವ ಪೊಲೀಸರು ಲೋಕಾಯುಕ್ತ ಅಡಿಗೆ ಬರಲಿವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು, ಅದಕ್ಕೆ ಕಾನೂನು ತಿದ್ದುಪಡಿ ಮಾಡಬೇಕು. ಜಾತಿ ಧರ್ಮ ಬಿಟ್ಟು ಪ್ರಾಮಾಣಿಕವಾಗಿವವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು, ಎಸಿಬಿಯಲ್ಲಿರುವ ಪೊಲೀಸರನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ವಾದವೇನು?:
ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, 'ಸಂಸ್ಥೆಯನ್ನು ಎಂತಹ ಪ್ರಾಮಾಣಿಕ ಅಧಿಕಾರಿಗಳು ನಡೆಸುತ್ತಾರೆ ಎಂಬುದರ ಮೇಲೆ ಅದರ ಯಶಸ್ಸು ಅಡಗಿದೆ' ಎಂದು ತಿಳಿಸಿದ್ದರು.
ಲೋಕಾಯುಕ್ತರ ವಾದ ಏನಾಗಿತ್ತು?:
ಲೋಕಾಯುಕ್ತ ಪರ ಹಿರಿಯ ವಕೀಲರು, ಎಸಿಬಿ ರಚನೆ ಮಾಡುವ ಮೂಲಕ ಸರ್ಕಾರ ಲೋಕಾಯುಕ್ತಕ್ಕೆ ನೀಡಿದ್ದ ಪೊಲೀಸ್ ತನಿಖಾಧಿಕಾರವನ್ನು ಕಿತ್ತುಕೊಂಡಿದೆ. ಲೋಕಾಯುಕ್ತದ ಅಧಿಕಾರಗಳನ್ನು ದುರ್ಬಲಗೊಳಿಸಲಾಗಿದೆ. ಇದರಿಂದಾಗಿ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ' ಎಂದು ತಿಳಿಸಿದರು.

ಈಗಿನ ಪರಿಸ್ಥಿತಿಯಲ್ಲಿ ಎಡಿಜಿಪಿ ಅವರಿಗೆ ಈ ಮೊದಲು ಇದ್ದ ಪೊಲೀಸ್ ತನಿಖಾ ಅಧಿಕಾರ ಕಿತ್ತುಕೊಳ್ಳಲಾಗಿದೆ. ಇದರಿಂದಾಗಿ ಅವರೀಗ ಕೇವಲ ವಿಚಾರಣಾ ಅಧಿಕಾರಿಗಳಾಗಿದ್ದಾರೆ. ಲೋಕಾಯುಕ್ತ ಎಂಬುದು ಒಂದು ವಿಚಾರಣಾ ಆಯೋಗದಂತಾಗಿದೆ' ಎಂದರು.
'ಸರ್ಕಾರದ ಆದೇಶದ ಪ್ರಕಾರ ಲೋಕಾಯುಕ್ತ ಸ್ವತಂತ್ರ ತನಿಖೆ ನಡೆಸಬೇಕು. ಆದರೆ ಈಗ, ತನಿಖಾಧಿಕಾರಿ ವಿಚಾರಣೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕಿದೆ. ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮಾಡುವಂತಿಲ್ಲ. ಇದರಿಂದಾಗಿ ಭ್ರಷ್ಟಾಚಾರ ತಡೆ ಅಸಾಧ್ಯವಾಗಿದೆ. ಲೋಕಾಯುಕ್ತದ ಮೂಲ ಉದ್ದೇಶವೇ ಸೋತು ಹೋಗಿದೆ' ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ:
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗುವ ಪ್ರಕರಣ ತನಿಖೆಗೆ ಎಸಿಬಿಯನ್ನು ರಚನೆ ಮಾಡಿ 2016ರ ಮಾರ್ಚ್ 14ರಂದು ಅಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. 2016ರ ಮಾರ್ಚ್ 19ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದು ಆದೇಶಿಸಲಾಗಿತ್ತು.
ಈ ಆದೇಶಗಳನ್ನು ಪ್ರಶ್ನಿಸಿ 2016ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಎಸಿಬಿ, ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ಅನುಗುಣವಾಗಿ ರಚನೆಯಾಗಿಲ್ಲ. ಪೊಲೀಸ್ ಠಾಣೆ ಸ್ಥಾನಮಾನ ನೀಡಲು ಈ ಕಾಯ್ದೆಯಡಿಯಲ್ಲೇ ಅಧಿಸೂಚನೆ ಹೊರಡಿಸಬೇಕು. ಆದರೆ ರಾಜಕೀಯ ಉದ್ದೇಶಗಳಿಂದ ಇದನ್ನು ರಚನೆ ಮಾಡಲಾಗಿದೆ. ಹಾಗೂ ಎಸಿಬಿಗೆ ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿ ಇಲ್ಲ' ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.












Click it and Unblock the Notifications