ಅಭಯಾಕ್ಷರ 'ಗೋವಧೆ' ಎನ್ನುವ ಅಸುರನನ್ನು ನಿಗ್ರಹಿಸಲಿದೆ
ಅಂತರಂಗದ ಭಾವ ಅಕ್ಷರರೂಪ ತಾಳಿ ಗೋಹತ್ಯೆ ಎಂಬ ಅಸುರನನ್ನು ನಿಗ್ರಹಿಸಲಿದೆ, ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಅಭಿಪ್ರಾಯ. ಮೈಸೂರು ಜಿಲ್ಲಾ ಗೋ ಪರಿವಾರದ ಮಾರ್ಗದರ್ಶನ ಸಭೆಯಲ್ಲಿ ಶ್ರೀಗಳ ಆಶೀರ್ವಚನ.
ಮೈಸೂರು, ಅ 10: ದೇವರ ಅಂತರಂಗಗಳು ಸೇರಿ ದೇವಜಾತೆಯ ಜನನವಾಗಿ ಮಹಿಷಾಸುರನ ಮರ್ದನವಾಯಿತು. ಅಂತೆಯೇ ಜನರ ಅಂತರಂಗದ ಭಾವ ಅಕ್ಷರರೂಪ ತಾಳಿ ಬ್ರಹ್ಮಾಸ್ತ್ರವಾಗಿ ಗೋಹತ್ಯೆ ಎಂಬ ಅಸುರನನ್ನು ನಿಗ್ರಹಿಸಲಿದೆ ಎಂದು ರಾಮಚಂದ್ರಾಪುರ ಮಠದ ಶ್ರೀಗಳು ನುಡಿದರು.
ಮಂಗಳವಾರ (ಅ 10) ನಗರದ ವಿಜಯವಿಠಲ ಶಿಕ್ಷಣ ಸಂಸ್ಥೆ ಆವರಣದ ವಿಶ್ವೇಶತೀರ್ಥ ಮಂಟಪದಲ್ಲಿ ಮೈಸೂರು ಜಿಲ್ಲಾ ಗೋ ಪರಿವಾರದ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡುತ್ತಾ, ದೇವರು ಕೂಡಾ ಒಬ್ಬೊಬ್ಬರಾಗಿ ಹೋರಾಡಿದಾಗ ಮಹಿಷಾಸುರ ಮರ್ದನ ಸಾಧ್ಯವಾಗಲಿಲ್ಲ. ಎಲ್ಲರ ಅಂತರಂಗಗಳು ಸೇರಿ, ಆರ್ವೀಭವಿಸಿದ ದೇವಜಾತೆ ಮಹಿಷಾಸುರನ್ನು ಮರ್ದಿಸಿದಳು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಅಂತೆಯೇ ಸ್ವಾತಂತ್ರ್ಯ ಬಂದ ಬಳಿಕ ದೇಶದಲ್ಲಿ ಗೋಹತ್ಯೆ ಹೆಚ್ಚಿದೆ. ಅದರ ವಿರುದ್ಧ ಸಂಘಟಿತ ಹೋರಾಟ ನಡೆಯದಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಕ್ರೋಢೀಕರಿಸಿ, ಆಳುವವರ್ಗಕ್ಕೆ ತಲುಪಿಸಿದಾಗ ಗೋಹತ್ಯೆ ನಿಷೇಧ ಸಾಧ್ಯವಾಗಬಹುದು ಎಂದು ಶ್ರೀಗಳು ವಿಶ್ಲೇಷಿಸಿದರು.
ಸುಭಾಸ್ ಚಂದ್ರ ಭೋಸರು ನಮಗೆ ರಕ್ತ ಕೊಡಿ, ನಾವು ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದಿದ್ದರು. ಆದರೆ ನಮಗೆ ಕೇವಲ ಹಸ್ತಾಕ್ಷರ ನೀಡಿ. ನಾವು ಗೋಹತ್ಯೆ ನಿಷೇಧ ಜಾರಿಗೊಳಿಸುತ್ತೇವೆ. ಅಭಯಾಕ್ಷರ ಅರ್ಜಿಗಳು ಪ್ರತಿ ಮನೆ- ಮನಗಳನ್ನು ತಲುಪಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ವ್ಯವಸ್ಥಿತವಾಗಿ ಸಹಿ ಸಂಗ್ರಹಿಸಲು ತಾಲೂಕು, ಗ್ರಾಮ ಗೋ ಪರಿವಾರಗಳು ಶ್ರಮಿಸಬೇಕು ಎಂದು ಶ್ರೀಗಳು ಈ ಸಂದರ್ಭದಲ್ಲಿ ಸೂಚಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹಳ್ಳಿಹಳ್ಳಿಯಿಂದ ಇಟ್ಟಿಗೆ ಸಾಗಿದಂತೆ, ಗೋಮಾತೆಯ ರಕ್ಷಣೆಗಾಗಿ ಸಂಗ್ರಹಿಸಿದ ಅಭಯಾಕ್ಷರದ ಭವ್ಯ ಮೆರವಣಿಗೆ ಗೋಯಾತ್ರೆ ಸಂದರ್ಭದಲ್ಲಿ ನಡೆಯಲಿದೆ. ಪ್ರತಿಯೊಬ್ಬರ ಹೃದಯದಲ್ಲೂ ಗೋಮಾತೆಯ ಬಗ್ಗೆ ಅಪಾರ ಪ್ರೀತಿ ಇದೆ. ಇದನ್ನು ಅಭಿವ್ಯಕ್ತಗೊಳಿಸುವ ಕಾರ್ಯ ಅಭಯಾಕ್ಷರದ ಮೂಲಕ ಆಗುತ್ತಿದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಗೋವಿಗಾಗಿ ದುಡಿಯುವವರು, ಗೋವಿಗಾಗಿ ಮಡಿಯಲೂ ಸಿದ್ಧವಿರುವವರು ನಮ್ಮ ಬಂಧುಗಳು. ಅಭಯಾಕ್ಷರ ಅರ್ಜಿಯನ್ನು ಪ್ರತಿಮನೆಮನೆಗೆ ತಲುಪಿಸುವುದು ಗೋಕಿಂಕರರ ಕೆಲಸ. ಅದನ್ನು ಆಳುವವರ್ಗಕ್ಕೆ ತಲುಪಿಸುವುದು ನಮ್ಮ ಜವಾಬ್ದಾರಿ. ಗೋಪ್ರೇಮ ಇರುವ ಎಲ್ಲರೂ ಇದಕ್ಕೆ ಶಕ್ತಿಮೀರಿ ಶ್ರಮಿಸಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಸಂಘಟನೆಯ ಜಾಲ ರೂಪುಗೊಳ್ಳಬೇಕು ಎಂದು ಶ್ರೀಗಳು ನುಡಿದಿದ್ದಾರೆ.
ಮೈಸೂರು ರಾಜವಂಶ ಗೋಸಂರಕ್ಷಣೆಗೆ ಅದ್ಭುತ ಕೊಡುಗೆ ನೀಡಿದೆ. ಆದರೆ ನಮ್ಮ ರಾಜಕಾರಣಿಗಳಿಗೆ ಇದರ ಅರಿವು ಇಲ್ಲ. ಒಂದು ಅಪೂರ್ವ ತಳಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಲ್ಲದೇ, 12 ಸಾವಿರ ಎಕರೆ ಪ್ರದೇಶವನ್ನು ಅಮೃತಮಹಲ್ ಕಾವಲ್ ಆಗಿ ಮೀಸಲಿರಿಸಿದ್ದರು.
ಗೋಗ್ರಾಸ ನೀಡಿ ಗಂಟೆ ಬಡಿದ ಬಳಿಕವಷ್ಟೇ ಕೃಷ್ಣರಾಜೇಂದ್ರ ಒಡೆಯರ್ ಊಟ ಮಾಡುತ್ತಿದ್ದರು. ಇಂಥ ಪರಂಪರೆಯ ಮೈಸೂರಿನಲ್ಲಿ ಅಭಯಾಕ್ಷರ ಅಭಿಯಾನ ಯಶಸ್ವಿಯಾಗಬೇಕು ಎಂದು ಶ್ರೀಗಳು ಹೇಳಿದರು. ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಅಧ್ಯಕ್ಷ ಪಾಂಡುರಂಗ ಮಹಾರಾಜ್, ಡಾ.ಭಾನುಪ್ರಕಾಶ್ ಪಂಡಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.