ಜೆಡಿಎಸ್ಗೆ ಗುಡ್ ಬೈ ಹೇಳಿದ ಇಬ್ಬರು ನಾಯಕರು
ಬೆಂಗಳೂರು, ನ.3 : ಜೆಡಿಎಸ್ನ ಇಬ್ಬರು ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಮತ್ತು ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಅವರು ಪಕ್ಷದ ಸದಸ್ಯತ್ವ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿರುವ ಪತ್ರವನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಭಾನುವಾರ ಕಳುಹಿಸಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ನ.5ರಂದು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಅಜೀಂ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅಜೀಂ ಸೋಲು ಅನುಭವಿಸಿದ್ದರು. ನಂತರ ಪಕ್ಷದಲ್ಲಿನ ವಿದ್ಯಮಾನಗಳಿಂದ ಬೇಸತ್ತು ಪಕ್ಷ ಬಿಡುವ ತೀರ್ಮಾನ ಕೈಗೊಂಡಿದ್ದಾರೆ. [ಜೆಡಿಎಸ್ಸಿಗೆ ದೊಡ್ಡ ಸಲಾಂ ಹೊಡೆದ ಅಬ್ದುಲ್ ಅಜೀಂ]
ಪಕ್ಷ ತೊರೆಯಲಿದ್ದಾರೆ ಸುನಿಲ್ ಹೆಗಡೆ : ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗಡೆ ಹಾಗೂ ಅವರ ತಂದೆ ವಿ.ಡಿ.ಹೆಗಡೆ ಅವರು ಬಿಜೆಪಿ ಸೇರಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರೊಂದಿಗೆ ಭಾನುವಾರ ಸಭೆ ನಡೆಸಿದ ಬಳಿಕ ಜೆಡಿಎಸ್ ತೊರೆಯುವುದಾಗಿ ಸುನಿಲ್ ಹೆಗಡೆ ಘೋಷಿಸಿದ್ದಾರೆ. [2014ರ ಲೋಕಸಭೆ ಚುನಾವಣೆ ಫಲಿತಾಂಶ ಇಲ್ಲಿದೆ]
ಜೆಡಿಎಸ್ ಪಕ್ಷದ ಇತ್ತೀಚಿನ ಬೆಳವಣಿಗೆಗಳು ಬೇಸರ ಮೂಡಿಸಿವೆ. ಅದರಲ್ಲೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಕಣದಿಂದ ಹಿಂದೆ ಸರಿದದ್ದು, ಈ ವಿದ್ಯಮಾನಕ್ಕೆ ಜೆಡಿಎಸ್ ನಾಯಕರ ಪ್ರತಿಕ್ರಿಯೆಯಿಂದ ಕಾರ್ಯಕರ್ತರು ಭ್ರಮನಿರಸಗೊಂಡಿದ್ದರು ಆದ್ದರಿಂದ ಪಕ್ಷ ತೊರೆಯುತ್ತಿದ್ದೇನೆ ಎಂದು ಸುನೀಲ್ ಹೆಗಡೆ ಹೇಳಿದ್ದಾರೆ.












Click it and Unblock the Notifications