ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು
ಬೆಂಗಳೂರು, ಜೂ. 18 : ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ 'ಶೂರರು' ಮಾತ್ರವಲ್ಲ ನಮ್ಮ ಅಜ್ಞಾನಿ ಜನ, ದುರಂತ ಸಂಭವಿಸಿದಾಗ ಮಾತ್ರ ಕೆಲಸಕ್ಕೆ ಬಾರದ ಬಾವಿಯನ್ನು ಮುಚ್ಚುವವರು. ಇದು ಬಾವಿ ತೋಡುವ ಜನರಿಗೆ ಮಾತ್ರವಲ್ಲ, ನಿರ್ಲಕ್ಷ್ಯ ತೋರುವ ಜಿಲ್ಲಾಡಳಿತಕ್ಕೂ ಅನ್ವಯಿಸುತ್ತದೆ.
ತೆರೆದ ಬಾವಿಯಲ್ಲಿ ಮಕ್ಕಳು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರೂ, ಬಾವಿ ತೋಡಿದ ಜಮೀನು ಮಾಲಿಕ ಅದನ್ನು ಮುಚ್ಚುವ ಜವಾಬ್ದಾರಿ ತೋರುವುದಿಲ್ಲ. ಇಂಥ ತೆರೆದ ಬಾವಿಗಳು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವುದಿಲ್ಲ.
ಬಿಜಾಪುರದ ನಾಗಠಾಣಾ ಗ್ರಾಮದಲ್ಲಿ ಇಂಥದೇ ದುರಂತವೊಂದು ಸಂಭವಿಸಿದೆ. ತೆರೆದ ಕೊಳವೆಬಾವಿಗೆ ಬಿದ್ದಿರುವ 4 ವರ್ಷದ ಬಾಲಕಿ ಅಕ್ಷತಾ ಜೀವನ್ಮರಣದ ಜೊತೆ ಹೋರಾಟ ನಡೆಸಿದ್ದಾಳೆ. ಆಕೆಯನ್ನು ಬದುಕಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ. ಜಾಗೃತೆ ವಹಿಸಿದ್ದರೆ ಇಂಥ ದುರಂತ ಸಂಭವಿಸುವುದನ್ನು ತಡೆಯಲು ಖಂಡಿತ ಸಾಧ್ಯವಿತ್ತು. [ಬಿಜಾಪುರದಲ್ಲಿ ಕೊಳವೆಬಾವಿಗೆ ಬಿದ್ದ ಬಾಲಕಿ]
ಇಂಥ ಅನಾಹುತಗಳು ಸಂಭವಿಸುವುದನ್ನು ತಡೆಯಲೆಂದೇ ಭಾರತದ ಸರ್ವೋಚ್ಚ ನ್ಯಾಯಾಲಯ ಹಲವಾರು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ಭೂಮಾಲಿಕರು, ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆಯೆ? ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಹಲವಾರು ಕಡೆಗಳಲ್ಲಿ ಜರುಗುತ್ತಿರುವ ಇಂಥ ಘಟನೆಗಳನ್ನು ನೋಡಿದರೆ ನಿಯಮಗಳನ್ನು ಗಾಳಿಗೆ ತೂರಲಾಗಿರುವುದು ಸ್ಪಷ್ಟ.
ಸುಪ್ರೀಂಕೋರ್ಟ್ ಪರಿಷ್ಕರಿಸಿರುವ ಆ ನಿಮಯಗಳು
* ಬೋರ್ವೆಲ್ ಅಥವಾ ಬಾವಿಯನ್ನು ಕೊರೆಯುವ ಮೊದಲು ಭೂಮಾಲಿಕ ಸ್ಥಳೀಯ ಅಧಿಕಾರಿಗೆ 15 ದಿನಗಳ ಮೊದಲೇ ಲಿಖಿತ ರೂಪದಲ್ಲಿ ತಿಳಿಸಿರಬೇಕು.
* ಭೂಮಿ ಕೊರೆಯುವ ಸರಕಾರಿ ಅಥವಾ ಅರೆಸರಕಾರಿ ಅಥವಾ ಖಾಸಗಿ ಏಜೆನ್ಸಿಗಳು ಜಿಲ್ಲಾಡಳಿತ ಅಥವಾ ಶಾಸನಬದ್ಧ ಪ್ರಾಧಿಕಾರದೊಂದಿಗೆ ನೋಂದಣಿ ಮಾಡಿಸಿರಬೇಕು.
* ಕೊರೆಯಲಾದ ಬೋರ್ ವೆಲ್ ಅಥವಾ ಕೊಳವೆಬಾವಿಯ ಬಳಿ ಎಲ್ಲ ವಿವರಗಳಿರುವ ನಾಮಫಲಕ ನಿಲ್ಲಿಸುವುದು ಕಡ್ಡಾಯ.
ನಾಮಫಲಕದಲ್ಲಿ ಏನೇನಿರಬೇಕು?
* ಬೋರ್ ವೆಲ್ ಕೊರೆಯುವ ಸಂಸ್ಥೆಯ ಪೂರ್ಣ ವಿಳಾಸ.
* ಬಾವಿ ಕೊರೆಸುವ ಮಾಲಿಕ ಅಥವಾ ಸಂಸ್ಥೆಯ ಪೂರ್ಣ ವಿಳಾಸ.
* ಆ ಸ್ಥಳದ ಸುತ್ತ ತಂತಿ ಬೇಲಿ ಅಥವಾ ಸೂಕ್ತವಾದ ತಡೆಗಟ್ಟು ನಿರ್ಮಿಸತಕ್ಕದ್ದು.
* ಬಾವಿಯ ಕೇಸಿಂಗ್ ಸುತ್ತ 0.30 ಮೀಟರ್ ಎತ್ತರದಲ್ಲಿ ಅಥವಾ ಆಳದಲ್ಲಿ ಸಿಮೆಂಟ್ ಕಟ್ಟೆ ನಿರ್ಮಿಸಿರಬೇಕು.
* ಕೇಸಿಂಗ್ ಪೈಪನ್ನು ಕಬ್ಬಿಣದ ಪ್ಲೇಟ್ ನಿಂದ ನಟ್ ಮತ್ತು ಬೋಲ್ಟ್ ಗಳಿಂದ ಗಟ್ಟಿಯಾಗಿ ಮುಚ್ಚಿರಬೇಕು.
* ಪಂಪ್ ರಿಪೇರಿ ಮಾಡುವಾಗ ಬಾವಿಯನ್ನು ಹಾಗೆಯೇ ತೆರೆದಿಡುವಂತಿಲ್ಲ.
* ಕೊರೆಯುವ ಕೆಲಸ ಮುಗಿದ ಮೇಲೆ ಅದರ ಸುತ್ತಲಿನ ಜಾಗವನ್ನು ಕಲ್ಲು, ಮಣ್ಣಿನಿಂದ ಮುಚ್ಚಿರಬೇಕು.
* ನಿರುಪಯೋಗಿ ಬೋರ್ ವೆಲ್ ಗಳನ್ನು ಕೂಡ ಕಲ್ಲು, ಮಣ್ಣು, ಮರಳಿನಿಂದ ತುಂಬಿಸಿ, ಮೊದಲಿದ್ದಂತೆಯೆ ನೆಲವನ್ನು ಸಮತಟ್ಟಾಗಿಸಬೇಕು.
* ಕೊರೆಯುವ ಕೆಲಸ ಮುಗಿದ ಮೇಲೆ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೆ ಇಲ್ಲವೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿ ಕಡ್ಡಾಯವಾಗಿ ಪರಿಶೀಲಿಸಬೇಕು.
* ಗ್ರಾಮ ಅಥವಾ ಬ್ಲಾಕ್ ಅಥವಾ ಜಿಲ್ಲೆಯಲ್ಲಿರುವ ಎಲ್ಲ ಬೋರ್ ವೆಲ್ ಅಥವಾ ಬಾವಿಗಳ ಸ್ಥಿತಿಗತಿಗಳನ್ನು ಗ್ರಾಮದ ಸರಪಂಚ್ ಅಥವಾ ಕೃಷಿ ಇಲಾಖೆಯ ಎಕ್ಸಿಕ್ಯೂಟಿವ್ ಅಧಿಕಾರಿಗಳು ದಾಖಲಿಸಿರಬೇಕು.
* ನಗರಗಳಲ್ಲಿ ಕಾರ್ಪೊರೇಷನ್ ಅಥವಾ ಸಾರ್ವಜನಿಕ ಆರೋಗ್ಯ ಅಥವಾ ಇತರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೋರ್ ವೆಲ್ ಅಥವಾ ಕೊಳವೆಬಾವಿಗಳ ದಾಖಲೆ ಇಟ್ಟುಕೊಂಡಿರಬೇಕು.
* ಯಾವುದೇ ಬೋರ್ ವೆಲ್ ಅಥವಾ ಬಾವಿ ನಿಷ್ಪ್ರಯೋಜಕವಾಗಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಈ ಬಗ್ಗೆ ಪ್ರಮಾಣಪತ್ರ ಪಡೆದುಕೊಂಡಿರಬೇಕು.
ಈ ಎಲ್ಲ ನಿಮಯಗಳನ್ನು ನೋಡಿದಾಗ, ನಿಯಮ ಗಾಳಿಗೆ ತೂರಿದ ಭೂಮಾಲಿಕ ಅಥವಾ ಭೂಮಿ ಕೊರೆಯುವ ಸಂಸ್ಥೆ ಮತ್ತು ಕರ್ತವ್ಯ ಪಾಲಿಸದ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ತೆರೆದ ಬಾವಿಯಲ್ಲಿ ಮಕ್ಕಳು ಬೀಳುವಂಥ ಅವಘಡಗಳನ್ನು ನಿಲ್ಲಿಸಬಹುದು.