ನ್ಯಾ. ಭಾಸ್ಕರರಾವ್ ರಾಜೀನಾಮೆಗೆ ಆಪ್ ಬಿಗಿಪಟ್ಟು
ಬೆಂಗಳೂರು, ಜು.02 : ಶುಕ್ರವಾರ ಸಂಜೆಯೊಳಗೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆ ನೀಡದಿದ್ದರೆ ಶನಿವಾರ ಪಕ್ಷದ ನೂರಾರು ಕಾರ್ಯಕರ್ತರು ಲೋಕಾಯುಕ್ತರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಆಮ್ ಆದ್ಮಿ ಎಚ್ಚರಿಕೆ ನೀಡಿದೆ.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಎಪಿ ನಾಯಕ ರವಿಕೃಷ್ಣಾ ರೆಡ್ಡಿ ಮುಂತಾದವರು, ಲೋಕಾಯುಕ್ತದ ಭ್ರಷ್ಟಾಚಾರಗಳು ಬಯಲಾದರೂ, ಸರ್ಕಾರ ಮೌನವಹಿಸಿರುವುದೇಕೆ? ಎಂದು ಪ್ರಶ್ನಿಸಿದರು. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಜನಾಭಿಪ್ರಾಯಕ್ಕೆ ಒತ್ತಡಕ್ಕೆ ಮಣಿದ ಶಾಸಕರು ಮುಂಗಾರು ಅಧಿವೇಶನದಲ್ಲಿ ಲೋಕಾಯುಕ್ತದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದನ್ನು ಸ್ವಾಗತಿಸಿದ ಆಪ್ ನಾಯಕರು, ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. [ಲೋಕಾಯುಕ್ತರ ಪುತ್ರನ ವಿರುದ್ಧ ಎಫ್ ಐಆರ್]
ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ ಲೋಕಾಯುಕ್ತರಿಗೆ ವಾಗ್ದಂಡನೆ ವಿಧಿಸುವ ಅಧಿಕಾರವಿದೆ. ಆದರೆ, ಪ್ರತಿಯೊಬ್ಬ ಸದಸ್ಯರೂ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ದೂರಿದರು.
ಶುಕ್ರವಾರ ಸಂಜೆಯೊಳಗೆ ಲೋಕಾಯುಕ್ತರು ರಾಜೀನಾಮೆ ನೀಡದಿದ್ದರೆ, ಶನಿವಾರ ಬೆಳಗ್ಗೆ ಆಪ್ ಕಾರ್ಯಕರ್ತರು ಲೋಕಾಯುಕ್ತರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು. [ಲೋಕಾಯುಕ್ತ ಹಗರಣ : ಯಾರು, ಏನು ಹೇಳಿದರು?]
ಲೋಕಾಯುಕ್ತದಲ್ಲಿನ ವಿಚಾರದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಇಡೀ ಹಗರಣವನ್ನು ಮುಚ್ಚಿಹಾಕಲು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದಂತೆ ಕಾಣಿಸುತ್ತಿದೆ. ಸರ್ಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಕೂಡ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ರವಿಕೃಷ್ಣಾ ರೆಡ್ಡಿ ತಿಳಿಸಿದರು.












Click it and Unblock the Notifications