ಎಎಪಿಯಿಂದ 5 ದಿನ ಕರ್ನಾಟಕದಾದ್ಯಂತ ಪ್ರವಾಸ: ಒಂದು ದೇಶ-ಒಂದು ಚುನಾವಣೆಗೆ ಕಿಡಿ
ಬೆಂಗಳೂರು, ಸೆಪ್ಟಂಬರ್ 05: ಬಿಜೆಪಿಯನ್ನು ನಿರ್ಮೂಲನೆ ಮಾಡುವುದು ಒಂದೇ ದೇಶ, ಒಂದೇ ಪರಿಹಾರವಾಗಿದೆ. ಒಂದು ದೇಶ, ಒಂದೇ ಶಿಕ್ಷಣ ಎಂಬುದನ್ನು ನಮ್ಮ ನಾಯಕ ಅರವಿಂದ ಕೇಜ್ರಿವಾಲರು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅಗತ್ಯವಾದದ್ದನ್ನು ಬದಗಿಟ್ಟು ಬೇರೆಲ್ಲ ತರುತ್ತಿದೆ ಎಂದು ಒಂದು ದೇಶ-ಒಂದು ಚುನಾವಣೆ ಕುರಿತು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಬೆಂಗಳೂರಿನ ಎಎಪಿ ಕಚೇರಿಯಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಘೋಷಣೆ ಮತ್ತು ಜಿಲ್ಲಾ ಸಮಿತಿ ರಚನೆಗೆ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಾವ ಸಮಯದಲ್ಲಿ ಬೇಕಾದರೂ ಚುನಾವಣೆ ಬರಬಹುದು. ಈ ಸಂಬಂಧ ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತಿದ್ದೇವೆ. ಸೆಪ್ಟೆಂಬರ್ 10ರ ನಂತರ ಪಕ್ಷದ ಬಲವರ್ಧನೆಗಾಗಿ ಕರ್ನಾಟಕದಾದ್ಯಂತ ನಾವು ಪ್ರವಾಸ ಮಾಡಲಿದ್ದೇವೆ. ಇದೇ ವೇಳೆ ನೂತನ ಸದಸ್ಯತ್ವ ನೋಂದಣಿಗೆ ಚಿಂತನೆ ನಡೆಸಿದ್ದೇವೆ ಎಂದರು.

ರಾಜ್ಯದಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳು ಯಾವಾಗ ಬೇಕಾದರೂ ಬರುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯ ತಯಾರಿ ಮಾಡಿಕೊಂಡು ಮೂರು ಪಕ್ಷಗಳ ವಿರುದ್ಧ ಸ್ಪರ್ಧೆ ಮಾಡಬೇಕಿದೆ. ಇದೆಲ್ಲ ದೃಷ್ಟಿಯಿಂದಲೇ ರಾಜ್ಯಪ್ರವಾಸ ಮಾಡಿ ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಲಿದ್ದೇವೆ. ಅಲ್ಲಿ ಜನಸಾಮಾನ್ಯರ ಜೊತೆಗೆ ಮಾತುಕತೆ ನಡೆಸಲಿದ್ದೇವೆ ಎಂದು ಅವರು ವಿವರಿಸಿದರು.
ರಾಜ್ಯದ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಐದು ದಿನ ಭೇಟಿ ಕೊಟ್ಟು ಪಕ್ಷ ಬಲಪಡಿಸಲಾಗುವುದು. ಚುನಾವಣೆಯ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಅವೆಲ್ಲವೂ ಕೇವಲ ರಾಮಮಂದಿರ ಉದ್ಘಾಟನೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದೆ. ನಾವುಗಳು ಯಾರು ಶ್ರೀರಾಮನ ವಿರೋಧಿಗಳು ಅಲ್ಲ.

ಚುನಾವಣೆ ವರ್ಷವೇ ರಾಮಮಂದಿರ ಉದ್ಘಾಟನೆ ಏಕೆ?
ನಾವು ಸಹ ರಾಮ ಭಕ್ತರೆ. ಆದರೆ, ಸಾವಿರಾರು ಕೋಟಿ ರೂ. ಖರ್ಚು ಮಾಡಿ ರಾಮಮಂದಿರ ನಿರ್ಮಿಸುವ ಬದಲು ಎಲ್ಲ ಊರುಗಳಲ್ಲಿನ ದೇಗುಲಗಳನ್ನು ಉದ್ಧಾರ ಮಾಡಬೇಕಿತ್ತು. ಚುನಾವಣೆಯ ವರ್ಷದಲ್ಲಿಯೇ ರಾಮಮಂದಿರ ಉದ್ಘಾಟನೆ ಅಗತ್ಯ ಏನಿತ್ತು. ಸರ್ಕಾರದ ಇತರೆ ಕಾರ್ಯಕ್ರಮಗಳು ಜನರನ್ನು ಮುಟ್ಟುವಲ್ಲಿ ವಿಫಲವಾಗಿವೆ. ಹೀಗಾಗಿ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಜನರನ್ನು ಮುಟ್ಟಲಾಗುತ್ತಿದೆ ಎಂದು ಅವರು ದೂರಿದರು.
ಕೇಂದ್ರ ಬಿಜೆಪಿಯವರದ್ದು ಕೇವಲ ರಾಮಮಂದಿರದ ನಿರ್ಮಾಣ ಮಾತ್ರವೇ ಉದ್ದೇಶವಲ್ಲ. ದೇವರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುವ ಉದ್ದೆ ಹೊಂದಿದೆ. ಕಳೆದ 9 ವರ್ಷದಿಂದ ಅವರೇ ಅಧಿಕಾರದಲ್ಲಿದ್ದಲೂ ಮಹಿಳಾ ಮೀಸಲಾತಿ ಜಾರಿಗೆ ತರಲಿಲ್ಲ. ವಿಶೇಷ ಅಧಿವೇಶನ ಕರೆದಿದಿದ್ದು ಯಾಕೆ?. ನಿಮಗೆ ಬೇಕಾದಂತೆ ಚುನಾವಣೆ ಮಾಡಿಕೊಳ್ಳುತ್ತೀರಿ? ಇದಕ್ಕೆ ಸ್ಪಷ್ಟ ಉದಾಹರಣೆ ದೆಹಲಿಯ ಸುಗ್ರೀವಾಜ್ಞೆ ಎಂದು ಅವರು ಕೇಂದ್ರ ಬಿಜೆಪಿ ವಿರುದ್ಧ ಆಪಾದಿಸಿದರು.
ನೂತನ ಪದಾಧಿಕಾರಿಗಳ ಘೋಷಣೆ
ಎಎಪಿ ರಾಜ್ಯದ ಘಟಕದ ನೂತನ ಕಾರ್ಯದರ್ಶಿಗಳಾಗಿ ಅನಂತ್ ಕುಮಾರ್ ಬುಗಾಡಿ, ಬಸವರಾಜ್ ಮುದಿಗೌಡರ, ಗುರುಮೂರ್ತಿ ಬಿ, ಜವರೇಗೌಡ, ಕಾರ್ತಿಕ್ ಕೃಷ್ಣ, ಸೀತಾರಾಮ್ ಜಿ, ರವಿಕುಮಾರ್, ಸಿದ್ದರಾಜು ಎಂ, ಸುರೇಶ್ ಬಿ, ಉಷಾ ಮೋಹನ್ ಆಯ್ಕೆಯಾಗಿದ್ದಾರೆ.
ಜಂಟಿ ಕಾರ್ಯದರ್ಶಿಗಳಾಗಿ ಅಹಮದ್ ಶಾನ್, ಮಹದೇವಸ್ವಾಮಿ, ಪ್ರೇಮಕುಮಾರ್, ರಾಘವೇಂದ್ರ ಕೆಎಲ್, ರಾಜಾ ಶ್ಯಾಂಸುಂದರ್ ನಾಯಕ, ಸಂತೋಷ್ ಕಾಮತ್, ಶರಣಪ್ಪ ಸಜ್ಜಿಹೊಲ, ವೇಣುಗೋಪಾಲ್ ಪುಚ್ಚಪ್ಪಾಡಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಜಿಲ್ಲಾಧ್ಯಕ್ಷರುಗಳ ಆಯ್ಕೆ ಸಹ ನಡೆದಿದೆ ಎಂದು ತಿಳಿಸಿದರು.












Click it and Unblock the Notifications