ಬೀದರ್: ಉದ್ಯೋಗ ಕಳೆದುಕೊಂಡ ಎಎಪಿ ಅಭ್ಯರ್ಥಿ
ಬೀದರ್, ಏ.1: ಆಮ್ ಆದ್ಮಿ ಪಕ್ಷದ ಟಿಕೆಟ್ ಪಡೆದುಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪ್ರೊ. ಚಂದ್ರಕಾಂತ್ ಕುಲಕರ್ಣಿ ಅವರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಜಿಎನ್ ಡಿ ಕಾಲೇಜ್ ಆಡಳಿತ ಮಂಡಳಿ ಸಹಾಯಕ ಪ್ರೊಫೆಸರ್ ಚಂದ್ರಕಾಂತ್ ಅವರಿಗೆ ಅಮಾನತು ಆದೇಶ ಪತ್ರ ರವಾನಿಸಿದೆ.
ಗುರು ನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ತನ್ನ ಕಾಲೇಜಿನ ಸಹಾಯಕ ಪ್ರೊಫೆಸರ್ ಚಂದ್ರಕಾಂತ್ ಮೇಲೆ ಗದಾಪ್ರಹಾರ ಮಾಡಿದ್ದು, ತನ್ನ ಸಂಸ್ಥೆಯ ಉದ್ಯೋಗಿಗಳು ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಘೋಷಿಸಿದೆ. ಸಂಸ್ಥೆಯ ನಿಯಮಗಳ ಪ್ರಕಾರ ಚಂದ್ರಕಾಂತ್ ಅವರನ್ನು ಸೇವೆಯಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಿನ್ಸಿಪಾಲ್ ಅಶೋಕ್ ಬಿರಾದರ್ ಹೇಳಿದ್ದಾರೆ.

ಸುದ್ದಿಯನ್ನು ಖಚಿತಪಡಿಸಿದ ಸಹಾಯಕ ಪ್ರಾಧ್ಯಾಪಕ ಚಂದ್ರಕಾಂತ್, ಜಿಎನ್ ಡಿ ವಿದ್ಯಾಸಂಸ್ತೆಯಿಂದ ಟರ್ಮಿನೇಷನ್ ನೋಟಿಸ್ ಕಳಿಸಿದ್ದಾರೆ. ನೋಟಿಸ್ ಗೆ ಉತ್ತರಿಸಲು ನನಗೆ ಮೂರು ದಿನಗಳ ಗಡುವು ನೀಡಲಾಗಿದೆ. ನಾನು ಆಡಳಿತ ಮಂಡಳಿ ನಿರ್ಣಯವನ್ನು ಖಂಡಿಸುತ್ತೇನೆ. ಸಂಸ್ಥೆ ಏನಾದರೂ ನಿರ್ಣಯವನ್ನು ಬದಲಾಯಿಸದಿದ್ದರೆ ಕೋರ್ಟಿನಲ್ಲಿ ದಾವೆ ಹೂಡುತ್ತೇನೆ ಎಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಚುನಾವಣೆ ಸ್ಪರ್ಧಿಸುವುದು ಭಾರತೀಯ ನಾಗರಿಕನ ಹಕ್ಕು. ನಾನು ಆಮ್ ಆದ್ಮಿ ಪಕ್ಷದ ಟಿಕೆಟ್ ಪಡೆದು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದೇನೆ ಎಂದು ನಾಮ ಪತ್ರ ಸಲ್ಲಿಕೆಗೆ ಮುನ್ನವೇ ಸಂಸ್ಥೆಗೆ ತಿಳಿಸಿದ್ದೆ. ಜಿಎನ್ ಡಿ ಸಂಸ್ಥೆ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಆಗ ಸಮ್ಮತಿಸಿದ್ದರು ಈಗ ನೋಟಿಸ್ ನೀಡಿದ್ದಾರೆ. ಬಂಡವಾಳಶಾಹಿಗಳು ನನ್ನ ವಿರುದ್ಧ ಕಾರ್ಯತಂತ್ರ ನಡೆಸಿ ಉದ್ಯೋಗ ಕಳೆದುಕೊಳ್ಳುವಂತೆ ಮಾಡುವಲ್ಲಿ ಸಫಲರಾಗಿರಬಹುದು ಆದರೆ, ಜನರ ಬೆಂಬಲ ನನಗೆ ಸಿಗುವ ವಿಶ್ವಾಸವಿದೆ ಎಂದು ಚಂದ್ರಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೀದರ್ ನಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಿಂದ ಧರಂಸಿಂಗ್, ಬಿಜೆಪಿಯಿಂದ ಭಗವಂತ ಖೂಬಾ, ಜೆಡಿಎಸ್ ನಿಂದ ಬಂಡೆಪ್ಪ ಕಾಶಂಪುರ ಕಣದಲ್ಲಿರುವ ಇತರೆ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಈ ಹಿಂದೆ 1994ರಲ್ಲಿ ಕರ್ನಾಟಕ ಕಾಲೇಜಿನ ಪ್ರೊಫೆಸರ್ ಲಕ್ಷ್ಮಣ್ ಚೌವ್ಹಾಣ್ ಅವರು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಲಕ್ಷ್ಮಣ್ ಅವರು ಐದು ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದರು ನಂತರ ಕಾಲೇಜಿಗೆ ಪ್ರೊಫೆಸರ್ ಆಗಿ ಮರಳಿದ್ದರು.
54 ವರ್ಷ ವಯಸ್ಸಿನ ಚಂದ್ರಕಾಂತ್ ಕುಲಕರ್ಣಿ ಅವರು ಎಂ.ಟೆಕ್ ಪದವೀಧರರಾಗಿದ್ದು,ಜಿಎನ್ ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಬೋಧನೆ, ವ್ಯಕ್ತಿತ್ವ ವಿಕಸನ ಕ್ಷೇತ್ರದಲಲ್ಲಿ ಸುಮಾರು 28 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.












Click it and Unblock the Notifications