ʼಆನೆ ನಡೆದಿದ್ದೇ ದಾರಿʼ ಎಂದು ರಾಂಗ್ ರೂಟ್ನಲ್ಲಿ ವೇಗವಾಗಿ ಸಂಚರಿಸಿದ ಬಸ್; ಎಲ್ಲಿ?
ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಹತ್ತಾರು ಕಾನೂನುಗಳಿದ್ದರೂ ಅದಕ್ಕೆ ಕೇರ್ ಮಾಡದೆ ಮನಬಂದಂತೆ ವಾಹನ ಚಾಲನೆ ಮಾಡುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ನಡೆದಿರುವ ಘಟನೆಯು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಹಾಗೂ ಮೈಸೂರಿನ ನಡುವೆ ಸುಗಮ ಸಂಚಾರಕ್ಕಾಗಿ ಈ ಎಕ್ಸ್ಪ್ರೆಸ್ವೇ ನಿರ್ಮಿಸಲಾಗಿದ್ದು, ಬಳಿಕ ಅತಿ ವೇಗವಾಗಿ ಚಾಲನೆಯಿಂದ ಆಕ್ಸಿಡೆಂಟ್ಗಳು ಮಿತಿಮೀರುವಂತೆ ಸಂಭವಿಸುತ್ತಿದ್ದವು. ಇದನ್ನು ತಡೆಗಟ್ಟಲು ಪೊಲೀಸರೇ ಖುದ್ದು ಕಾರ್ಯಾಚರಣೆಗಿಳಿದರು.

ಬಳಿಕ ಸ್ವಯಂಚಾಲಿತ ದೂರು ದಾಖಲಾಗುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಇಷ್ಟೆಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದರೂ ಈ ಹೆದ್ದಾರಿಯಲ್ಲಿ ಮತ್ತೊಂದು ಅಪಾಯಕಾರಿ ಚಾಲನೆಯು ಬೆಳಕಿಗೆ ಬಂದಿದೆ. ಬಸ್ವೊಂದು ರಾಂಗ್ ರೂಟ್ನಲ್ಲಿ ವೇಗವಾಗಿ ಚಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿದೆ.
ಈ ವಿಡಿಯೋದಲ್ಲಿ ಹಳದಿ ಬಣ್ಣದ ಖಾಸಗಿ ಬಸ್ವೊಂದು ಅತಿ ವೇಗವಾಗಿ ಚಲಿಸುತ್ತಿರುವುದು ಕಂಡು ಬಂದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನು ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಮೊಬೈಲ್ನಲ್ಲಿ ಸೆರೆ ಹಿಡಿದು, ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಮಂಡ್ಯ ಬಳಿ ನಡೆದಿದೆ ಎಂದು ಹೇಳಲಾಗಿದ್ದು, ಕೊನೆಗೆ ಈ ವಿಚಾರ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರವರೆಗೂ ತಲುಪಿದೆ. ಆದರೆ ಈ ಬಸ್ ಪತ್ತೆ ಮಾಡಲು ಪೊಲೀಸರು ಹರಸಾಹಸವೇ ಪಟ್ಟಿದ್ದಾರೆ.

ಏಕೆಂದರೆ, ವಿಡಿಯೋದಲ್ಲಿ ಬಸ್ ವೇಗವಾಗಿ ಚಲಿಸುತ್ತಿದ್ದರಿಂದ ಅದರ ನೋಂದಣಿ ಸಂಖ್ಯೆಯು ಸೆರೆಯಾಗಿರಲಿಲ್ಲ. ಹಾಗಾಗಿ ಈ ಬಸ್ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್ ಕುಮಾರ್ ಅವರು, ಇದೊಂದು ಭಯಾನಕ ಮತ್ತು ಅಪಾಯಕಾರಿಯಾದ ಘಟನೆ.
ವಾಹನ ಸಂಖ್ಯೆ ಹಾಗೂ ಇತರೆ ವಿವರ ಲಭ್ಯವಾಗದಿದ್ದರೂ ಮಂಡ್ಯ ಪೊಲೀಸರು ಬಸ್ ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಯಾಣಿಕರ ಮೇಲೆ ಗಂಭೀರ ಪರಿಣಾಮ ಬೀರುವಂತಹ ಇಂತಹ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ನಾವು ಕ್ಷಮಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದರು.
Wrong side driving in Mysore Bangalore highway pic.twitter.com/ZxymnCe3kb
— Nagaraj m n Nagaraj (@NagarajmnNagar4) August 24, 2024
ದಶಪಥ ಹೆದ್ದಾರಿಯಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವಂತೆ ವೇಗವಾಗಿ ಚಾಲನೆ ಮಾಡಿದ್ದ ಬಸ್ ಚಾಲಕನ ಪತ್ತೆಗೆ ತೀವ್ರ ಕಸರತ್ತು ನಡೆಸಿದ ಮೇಲೆ ಆತ ಮುಂಬೈನಲ್ಲಿರುವ ವಿಚಾರವನ್ನು ಪತ್ತೆ ಹಚ್ಚಿದ್ದಾರೆ. ಚಾಲಕ ಕರ್ನಾಟಕದಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿ, ಆರಾಮವಾಗಿ ಮಹಾರಾಷ್ಟ್ರಕ್ಕೆ ತಲುಪಿದ್ದಾನೆ. ಪೊಲೀಸರು ಆ ಬಸ್ ಸಂಸ್ಥೆಯನ್ನು ಸಂಪರ್ಕಿಸಿ, ವಿಷಯ ಮುಟ್ಟಿಸಿದ್ದು, ನಾಳೆ ಆ ಚಾಲಕನನ್ನು ಪೊಲೀಸರ ಮುಂದೆ ಹಾಜರುಪಡಿಸಿ, ಅಪಾಯಕಾರಿ ಚಾಲನೆಗೆ ಪ್ರಕರಣ ದಾಖಲಿಸುತ್ತೇವೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ವಿಡಿಯೋ ಹಾಗೂ ಫೋಟೋಗಳು ಹಂಚಿಕೆಯಾಗುತ್ತಿದ್ದು, ಇದನ್ನು ಆಧರಿಸಿ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತಿದೆ.












Click it and Unblock the Notifications